×
Ad

ಉಡುಪಿ ಜಿಲ್ಲೆಯಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ

ಮಟ್ಟು- ಪಡುಕೆರೆ ನಡುವೆ ನಿರ್ಮಾಣಗೊಳ್ಳಲಿದೆ 11 ಕಿ.ಮೀ. ಉದ್ದದ ‘ಸೈಕಲ್ ಟ್ರ್ಯಾಕ್’

Update: 2025-11-17 08:19 IST

ಪಡುಬಿದ್ರೆ: ರಾಜ್ಯದಲ್ಲೇ ಮೊದಲ ಬಾರಿಗೆ ಕರಾವಳಿ ತೀರದಲ್ಲಿ ಸಮುದ್ರಕ್ಕೆ ಸಮಾನಾಂತರವಾಗಿ ಸೈಕಲ್ ಟ್ರ್ಯಾಕ್ ನಿರ್ಮಾಣಗೊಳ್ಳುವ ಯೋಜನೆ ಸಿದ್ಧವಾಗಿದೆ. ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಮಟ್ಟುವಿನಿಂದ ಪಡುಕೆರೆಯವರೆಗೆ 11 ಕಿ.ಮೀ. ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಪರಿಸರ ಸ್ನೇಹಿ ಸಾರಿಗೆ ಪರಿಕಲ್ಪನೆಯಡಿ ಕೇಂದ್ರ ಸರಕಾರದ ಸ್ವದೇಶಿ ದರ್ಶನ್ 2.0 ಯೋಜನೆಯಡಿ ಇದು ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ವಿಸ್ತೃತವಾದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ವಿವಿಧ ಹಂತದ ಅನುಮೋದನೆಗಳನ್ನು ಯೋಜನೆ ಎದುರು ನೋಡುತ್ತಿದೆ.

ಮೂಲ ಯೋಜನೆಯ ಪ್ರಕಾರ ಪಡುಬಿದ್ರೆಯಿಂದ ಪಡುಕೆರೆಯವರೆಗೆ 28 ಕಿ.ಮೀ. ಉದ್ದದ ಸೈಕಲ್ ಟ್ರ್ಯಾಕ್ ಸಮುದ್ರದ ಸಮೀಪದಲ್ಲೇ ಸಾಗುವ ಮೀನುಗಾರಿಕಾ ರಸ್ತೆಯೊಂದಿಗೆ ನಿರ್ಮಾಣಗೊಳ್ಳಬೇಕಾಗಿತ್ತು. ಇದಕ್ಕಾಗಿ ಎರಡು ಹಂತಗಳ ಯೋಜನಾ ವರದಿಯೂ ಸಿದ್ಧವಾಗಿತ್ತು. ಮೊದಲ ಹಂತದಲ್ಲಿ ಪಡುಬಿದ್ರೆಯ ಬ್ಲೂಫ್ಲ್ಯಾಗ್ ಬೀಚ್‌ನಿಂದ ಕಾಪುವರೆಗೆ ಹಾಗೂ ಎರಡನೇ ಹಂತದಲ್ಲಿ ಕಾಪುವಿನಿಂದ ಪಡುಕರೆಯವರೆಗೆ ಈ ಯೋಜನೆ ಕೈಗೆತ್ತಿಕೊಳ್ಳಲು ಯೋಜಿಸಲಾಗಿತ್ತು.

ಪಡುಬಿದ್ರೆಯ ಬ್ಲೂ ಫ್ಲ್ಯಾಗ್ ಬೀಚ್‌ನಿಂದ ಕಾಪು ಲೈಟ್‌ಹೌಸ್‌ವರೆಗೆ ಸುಮಾರು 10 ಕಿ.ಮೀ. ಉದ್ದಕ್ಕೆ ಈ ಯೋಜನೆಗಾಗಿ ಟೋಪೊಗ್ರಾಫಿ ಸರ್ವೇ ಕಾರ್ಯ ಸಹ ನಡೆದಿತ್ತು. ಮೂಲ ಸೌಕರ್ಯಗಳನ್ನೊಳಗೊಂಡ ಮೊದಲ ಹಂತದ ಸೈಕಲ್ ಟ್ರ್ಯಾಕ್‌ಗೆ ಕೇಂದ್ರ ಸರಕಾರದ ಪರಿಸರ ಇಲಾಖೆಯ ಅನುಮೋದನೆಯೂ ದೊರೆತಿತ್ತು. ಸುಮಾರು 10 ಕೋಟಿ ರೂ. ಯೋಜನೆ ಇದಾಗಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ಇದೀಗ ಯೋಜನೆಯನ್ನು ಬದಲಾಯಿಸಲಾಗಿದೆ.

ಯೋಜನೆ ಬದಲಾಗಲು ಕಾರಣ? :

ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆಯ ಅನುಷ್ಠಾನಕ್ಕೆ ಎಲ್ಲಾ ಪೂರ್ವಸಿದ್ಧತೆಗಳು ಮುಗಿಯುವ ಹಂತದಲ್ಲಿ ಯೋಜನೆಯನ್ನು ಹಠಾತ್ತನೆ ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಯಿತು. ಯೋಜನೆಯಲ್ಲಿ ಟ್ರ್ಯಾಕ್ ಸಮುದ್ರಕ್ಕೆ ಸಮಾನಾಂತರವಾಗಿ ನಿರ್ಮಾಣಗೊಳ್ಳಬೇಕು. ರಸ್ತೆ ಕಿರಿದಾಗಿರಬಾರದು. ಆದರೆ ಪಡುಬಿದ್ರೆಯಿಂದ ಕಾಪುವರೆಗಿನ ಯೋಜನೆಯಲ್ಲಿ ಎರ್ಮಾಳುವರೆಗೆ ಮಾತ್ರ ಸಮುದ್ರ ತೀರದಲ್ಲಿ ಟ್ರ್ಯಾಕ್ ನಿರ್ಮಾಣ ಸಾಧ್ಯವಾಗುತ್ತದೆ.

ಎರ್ಮಾಳ್ ತೆಂಕದಿಂದ ಕಾಪುವಿನವರೆಗೆ ಬಹುತೇಕ ಕಡೆಗಳಲ್ಲಿ ಸಮುದ್ರ ತೀರದ ಬದಲು ಒಳ ರಸ್ತೆಯಲ್ಲಿ ಟ್ರ್ಯಾಕ್ ನಿರ್ಮಿಸಬೇಕಾಗಿದೆ. ಅಲ್ಲದೆ ಈ ಭಾಗದಲ್ಲಿ ಕೆಲವು ಖಾಸಗಿ ಮಾಲಕತ್ವದ ಜಾಗ ಇರುವುದು ಸಮಸ್ಯೆಯಾಗಿದ್ದು, ಇನ್ನೊಂದೆಡೆ ಈ ಭಾಗದಲ್ಲಿ ರಸ್ತೆಯೂ ಕಿರಿದಾಗಿದೆ. ಇಂತಹ ತಾಂತ್ರಿಕ ಸಮಸ್ಯೆಗಳಿಂದ ಇಲಾಖೆ ಪಡುಬಿದ್ರೆಯಿಂದ ಪಡುಕೆರೆವರೆಗೆ ಸೈಕಲ್ ಟ್ರ್ಯಾಕ್ ನಿರ್ಮಾಣದ ಯೋಜನೆ ಕೈಬಿಟ್ಟು ಮಟ್ಟುವಿನಿಂದ ಪಡುಕೆರೆಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.

ಮಟ್ಟುವಿನಿಂದ ಪಡುಕೆರೆಯವರೆಗೆ ಟ್ರ್ಯಾಕ್ ನಿರ್ಮಿಸುವುದರಿಂದ ಇಂತಹ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾಗದೆ ಇರುವುದರಿಂದ ಯೋಜನೆಗೆ ಇದೇ ಸೂಕ್ತ ಸ್ಥಳ ಎಂದು ಇಲಾಖೆ ಗುರುತಿಸಿದೆ. ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕಾಗಿ ಜಿಲ್ಲಾಡಳಿತದ ಅನುಮೋದನೆ ಈಗಾಗಲೇ ದೊರಕಿದೆ. ಸಿಆರ್‌ಝೆಡ್ ಅನುಮತಿಗಾಗಿ ಈಗಾಗಲೇ ಪತ್ರವನ್ನೂ ಬರೆಯಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ. ಈ ಯೋಜನೆಯಲ್ಲಿ 4-5 ಅಡಿ ಅಗಲದ ಸೈಕಲ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಮೂರು ಕಡೆಗಳಲ್ಲಿ ಸೈನೇಜ್ ಬೋರ್ಡ್, ಫುಡ್ ಕೋರ್ಟ್, ಶೌಚಾಲಯ, ಸೋಲಾರ್ ದಾರಿದೀಪಗಳು, ವಿಶ್ರಾಂತಿ ಕೊಠಡಿ, ಬಟ್ಟೆ ಬದಲಾಯಿಸುವ ಕೊಠಡಿಗಳ ಸಹ ನಿರ್ಮಾಣಗೊಳ್ಳಲಿದೆ.

‘ಸೈಕಲ್ ಟ್ರ್ಯಾಕ್’ ನಿರ್ಮಾಣದ ಒಂದು ಯೋಜನೆಯಿಂದ ಹಲವು ಗುರಿಗಳನ್ನು ಸಾಧಿಸಲು ಸಾಧ್ಯವಿದೆ. ಯೋಜನೆಯ ಮುಖ್ಯ ಉದ್ದೇಶ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾದರೂ ದೈಹಿಕ ಫಿಟ್‌ನೆಸ್‌ಗೆ ಸೈಕಲ್ ಸವಾರಿ ಒಂದು ಅತ್ಯುತ್ತಮ ವ್ಯಾಯಾಮ ಎಂದು ಈಗಾಗಲೇ ಗುರುತಿಸಲಾಗಿರುವುದರಿಂದ ಎಲ್ಲಾ ವಯೋವರ್ಗದ ಜನರ ನಡುವೆ ಸೈಕಲ್ ಸವಾರಿ ಜನಪ್ರಿಯಗೊಳ್ಳಲು ಸಾಧ್ಯವಿದೆ.

ಪ್ರಾಕೃತಿಕ ಸೌಂದರ್ಯದ ನಡುವೆ ಸಮುದ್ರದ ತೀರದಲ್ಲೇ ಇದು ನಿರ್ಮಾಣಗೊಳ್ಳುವುದರಿಂದ ಪ್ರವಾಸೋದ್ಯಮಕ್ಕಂತೂ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಇದು ದೇಶ, ವಿದೇಶಗಳ ಸೈಕಲ್ ಸವಾರರನ್ನು ಆಕರ್ಷಿಸಲಿದೆ. ಇಲ್ಲಿ ಸೈಕಲ್‌ಗಳಿಗೆ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ. ಇದನ್ನು ಟ್ರ್ಯಾಕ್ ನಿರ್ವಹಣೆಗೆ ಬಳಸಲಾಗುತ್ತದೆ.

‘ಮಟ್ಟು-ಪಡುಕೆರೆ ರಸ್ತೆ ಸೈಕಲ್ ಸವಾರಿಗೆ ಮೀಸಲಿರಲಿ’

ಮಟ್ಟು ಬೀಚ್‌ನಿಂದ ಪಡುಕೆರೆಯ ಬೀಚ್‌ವರೆಗೆ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಿಸುವಂತೆ ಈ ಮೊದಲೇ ಉಡುಪಿ ಸೈಕ್ಲಿಂಗ್ ಪ್ರೇಮಿಗಳಿಂದ ಬಲವಾಗಿ ಬೇಡಿಕೆ ಕೇಳಿಬಂದಿತ್ತು. ಈ ಮಾರ್ಗದಲ್ಲಿ ಕೇವಲ ಸೈಕಲ್ ಸವಾರರಿಗೆ ಮಾತ್ರ ಅವಕಾಶ ನೀಡಬೇಕು. ಬೈಕ್ ಹಾಗೂ ಇತರ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಅವಕಾಶ ನೀಡಿದರೆ ಸೈಕ್ಲಿಂಗ್ ಟ್ರ್ಯಾಕ್ ಉದ್ದೇಶವೇ ಹಾಳಾಗುವ ಸಾಧ್ಯತೆ ಇದೆ.

ಮಳೆಗಾಲದಲ್ಲಿಯೂ ಸೈಕ್ಲಿಂಗ್ ಮಾಡಲು ಅನುಕೂಲವಾಗುವಂತೆ ಶೇಡ್‌ರೂಫ್ ವ್ಯವಸ್ಥೆ ಇರಬೇಕು. ಟ್ರ್ಯಾಕ್ ಸುತ್ತಮುತ್ತ ಗಿಡಮರಗಳ ನೆಡುವಿಕೆ ಹಾಗೂ ಪರಿಸರಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬುದು ಉಡುಪಿಯ ಸೈಕಲ್ ಪ್ರೇಮಿಗಳ ಆಗ್ರಹ.

ಉಡುಪಿ-ಮಣಿಪಾಲ ನಡುವೆ ಸೈಕಲ್ ಟ್ರ್ಯಾಕ್!

ಮಟ್ಟು- ಪಡುಕೆರೆ ಸೈಕಲ್ ಟ್ರ್ಯಾಕ್ ಅಲ್ಲದೇ ಜಿಲ್ಲೆಯಲ್ಲಿ ಉಡುಪಿಯ ಕಡಿಯಾಳಿಯಿಂದ ಮಣಿಪಾಲದ ಎಂಐಟಿ ಜಂಕ್ಷನ್ ನಡುವೆ ಉಡುಪಿ- ಮಣಿಪಾಲ ರೋಡ್‌ನಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಉಡುಪಿ ಸ್ಥಾನ ಪಡೆದರೆ ಈ ಯೋಜನೆ ಸೇರ್ಪಡೆಗೊಳ್ಳುವುದು ಖಂಡಿತ. ವಿವಿಧ ಮೂಲಗಳಿಗೆ ನಿಧಿ ಸಂಗ್ರಹಿಸಿ ಯೋಜನೆ ಕಾರ್ಯರೂಪಕ್ಕೆ ತರುವ ಪ್ರಯತ್ನವೂ ನಡೆಯುತ್ತಿದೆ.

ಕೇಂದ್ರ ಸರಕಾರದ ಸ್ವದೇಶಿ ದರ್ಶನ್ 2.0 ಯೋಜನೆಯಡಿ 10 ಕೋಟಿ ರೂ. ಯೋಜನೆ ಇದಾಗಿದೆ. ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸಮಾನ ವಾಗಿ ಉಪಯುಕ್ತವಾಗುವ, ಸ್ವಚ್ಛ, ಸುಂದರ ಮತ್ತು ಸುರಕ್ಷಿತ ಸೈಕ್ಲಿಂಗ್ ಅನುಭವ ನೀಡುವ ರೀತಿಯಲ್ಲಿ ಟ್ರ್ಯಾಕ್ ನಿರ್ಮಾಣವಾಗಲಿದೆ. ಮೊದಲು ಪಡುಬಿದ್ರಿಯಿಂದ ಕಾಪುವರೆಗೆ ಈ ಯೋಜನೆಗೆ ಸಿದ್ದತೆ ನಡೆಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಯೋಜನೆಯನ್ನು ಬದಲಾಯಿಸಲಾಗಿದೆ.

-ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು

ಜಿಲ್ಲೆಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಈ ಮೊದಲು ಜಿಲ್ಲಾಡಳಿತಕ್ಕೆ ಬೇಡಿಕೆ ಸಲ್ಲಿಸಿದ್ದೆವು. ಸೈಕಲಿಸ್ಟ್‌ಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವುದು ಸೂಕ್ತ ಮತ್ತು ಸುರಕ್ಷಿತವಲ್ಲ. ಈ ನಿಟ್ಟಿನಲ್ಲಿ ಕಡಲ ತೀರದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣವಾದಲ್ಲಿ ಅನುಕೂಲವಾಗಲಿದೆ.

-ಡಾ.ಗುರುರಾಜ್, ಅಧ್ಯಕ್ಷರು, ಉಡುಪಿ ಜಿಲ್ಲಾ ಅಮೆಚೂರ್ ಸೈಕಲಿಂಗ್ ಅಸೋಸಿಯೇಶನ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News