ಅದಾನಿ ಪರ ಅಮೆರಿಕ ನ್ಯಾಯ ಇಲಾಖೆಗೆ ಮಾಜಿ ಸಿಜೆಐ ಸೇರಿ ತಜ್ಞರ ಅಭಿಪ್ರಾಯ ಸಲ್ಲಿಕೆ; ನ್ಯಾಯಾಲಯದ ದಾಖಲೆಯಿಂದ ಬಹಿರಂಗ
ದೇವಿರೂಪ ಮಿತ್ರಾ - thewire. in ವರದಿ
Photo: PTI
ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕೈಬಿಡುವಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜೆ)ಯನ್ನು ಮನವೊಲಿಸಲು ಅದಾನಿ ಪರ ಕಾನೂನು ತಂಡವು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರು ಸೇರಿದಂತೆ ಹಲವು ತಜ್ಞರ ಅಭಿಪ್ರಾಯಗಳನ್ನು ಸಲ್ಲಿಸಿದೆ ಎಂದು ಅಮೆರಿಕದ ನ್ಯಾಯಾಲಯದ ದಾಖಲೆ ಬಹಿರಂಗಪಡಿಸಿದೆ.
ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಹಾಗೂ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವ್ನೀತ್ ಜೈನ್ ಅವರನ್ನು ಪ್ರತಿನಿಧಿಸುವ ವಕೀಲರು, ನ್ಯೂಯಾರ್ಕ್ನ ಪೂರ್ವ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ. ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸುವಂತೆ ಅಮೆರಿಕ ನ್ಯಾಯಾಲಯವನ್ನು ಕೋರಿದ ಈ ಅರ್ಜಿ, ಪ್ರಕರಣವನ್ನು ಕೈಬಿಡುವಂತೆ ಡಿಒಜೆಗೆ ಮನವರಿಕೆ ಮಾಡಲು ಅದಾನಿ ಪರ ವಕೀಲರು ನಡೆಸಿದ ಹಲವು ತಿಂಗಳ ಪ್ರಯತ್ನಗಳ ವಿವರಗಳನ್ನೂ ಬಹಿರಂಗಪಡಿಸಿದೆ.
ಅರ್ಜಿಯ ಪ್ರಕಾರ, 2026ರ ಫೆಬ್ರುವರಿ 3ರಿಂದ ಏಪ್ರಿಲ್ 17ರವರೆಗೆ ಡಿಒಜೆಗೆ ಸುಮಾರು 500 ಪುಟಗಳ ದಾಖಲೆಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ ಸತ್ಯಾಂಶಗಳು, ಕಾನೂನು ವಾದಗಳು, ತಜ್ಞರ ವರದಿಗಳು ಮತ್ತು ಇತರ ದಾಖಲೆಗಳು ಸೇರಿವೆ. ಈ ಅವಧಿಯಲ್ಲಿ ಒಂಭತ್ತು ಪುಟಗಳ ಕವರ್ ಲೆಟರ್, 118 ಪುಟಗಳ ಮನವಿ ಪತ್ರ ಮತ್ತು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲಾಗಿದೆ.
ಸಲ್ಲಿಸಲಾದ ದಾಖಲೆಗಳಲ್ಲಿ ಸುಮಾರು 200 ಪುಟಗಳ ತಜ್ಞರ ವರದಿಗಳಿದ್ದು, ಅವುಗಳನ್ನು ಹಾರ್ವರ್ಡ್ ಕಾನೂನು ಶಾಲೆಯ ಸೆಕ್ಯುರಿಟೀಸ್ ಕಾನೂನು ಪ್ರಾಧ್ಯಾಪಕರು, ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ)ಯ ಮಾಜಿ ಅಧಿಕಾರಿಗಳು, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಗಳು, ಕೇಂದ್ರ ವಿದ್ಯುತ್ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಮತ್ತು ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗದ ಮಾಜಿ ಸದಸ್ಯರು ಸಿದ್ಧಪಡಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಆದರೆ, ಈ ತಜ್ಞರ ಹೆಸರನ್ನು ಅರ್ಜಿಯಲ್ಲಿ ಬಹಿರಂಗಪಡಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ 'the wire' ಭಾರತದ 20 ಜೀವಂತ ಮಾಜಿ ಮುಖ್ಯ ನ್ಯಾಯಮೂರ್ತಿಗಳನ್ನು ಸಂಪರ್ಕಿಸಿದ್ದು, ಇದುವರೆಗೆ ಪ್ರತಿಕ್ರಿಯಿಸಿರುವ ಏಳು ಮಂದಿ ಅದಾನಿ ಪರವಾಗಿ ಯಾವುದೇ ಅಭಿಪ್ರಾಯ ಅಥವಾ ವರದಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, "ನಾನು ಯಾವುದೇ ವರದಿ ಅಥವಾ ಅಭಿಪ್ರಾಯ ನೀಡಿಲ್ಲ" ಎಂದು ತಿಳಿಸಿದ್ದಾರೆ. ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಆರ್.ಎಂ. ಲೋಧಾ, ಜಿ.ಬಿ. ಪಟ್ಟನಾಯಕ್, ಟಿ.ಎಸ್. ಠಾಕೂರ್ ಹಾಗೂ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ಆಪ್ತ ಮೂಲಗಳೂ ಸಹ ಯಾವುದೇ ಸಂಬಂಧವನ್ನು ನಿರಾಕರಿಸಿವೆ. ಮಾಜಿ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರು, ನಿವೃತ್ತಿಯ ನಂತರ ಯಾವುದೇ ಕಾನೂನು ಸಲಹಾ ಕಾರ್ಯವನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಅರ್ಜಿಯ ಪ್ರಕಾರ, ಡಿಒಜೆ ಅಧಿಕಾರಿಗಳೊಂದಿಗೆ ಹಲವು ತಿಂಗಳುಗಳ ಕಾಲ ನಡೆದ ಸಭೆಗಳಲ್ಲಿ, ಸರ್ಕಾರದ ಆರೋಪಗಳಲ್ಲಿ "ಮಾರಕ ದೋಷಗಳಿವೆ" ಎಂದು ಅದಾನಿ ಪರ ವಕೀಲರು ವಾದಿಸಿದ್ದಾರೆ. ಆರೋಪಪಟ್ಟಿಯು ನಾಲ್ಕು ಪ್ರಮುಖ ದೋಷಗಳಿಂದ ಕೂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕೇಂದ್ರ ವಿದ್ಯುತ್ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಮತ್ತು ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗದ ಮಾಜಿ ಸದಸ್ಯರೊಬ್ಬರು ಸಲ್ಲಿಸಿದ ತಜ್ಞರ ವರದಿಯಲ್ಲಿ, ಅದಾನಿ ಗ್ರೀನ್ ಸಂಸ್ಥೆಯು ಭಾರತೀಯ ರಾಜ್ಯಗಳ ವಿದ್ಯುತ್ ಖರೀದಿ ಒಪ್ಪಂದಗಳನ್ನು ಪಡೆಯಲು ನೀಡಿದ್ದ ಬೆಲೆ ರಿಯಾಯಿತಿಗಳು ಕಾನೂನುಬದ್ಧ ಮತ್ತು ಪಾರದರ್ಶಕವಾಗಿದ್ದವು ಎಂದು ಉಲ್ಲೇಖಿಸಲಾಗಿದೆ. ಈ ರಿಯಾಯಿತಿಗಳು ಸಾಮಾನ್ಯ ವಾಣಿಜ್ಯ ವ್ಯವಹಾರಗಳ ಭಾಗವಾಗಿದ್ದವು ಎಂದು ವರದಿಯಲ್ಲಿ ಹೇಳಲಾಗಿದೆ.
ಅರ್ಜಿಯಲ್ಲಿ ಅಜುರೆ ಪವರ್ ಸಂಸ್ಥೆಯ ಮೇಲೂ ಪ್ರಶ್ನೆಗಳನ್ನು ಎತ್ತಲಾಗಿದೆ. ಪ್ರಕರಣದ ಪ್ರಮುಖ ಸಾಕ್ಷ್ಯಗಳು ಅದಾನಿ ಗ್ರೀನ್ನ ಪ್ರತಿಸ್ಪರ್ಧಿ ಸಂಸ್ಥೆಯಾದ ಅಜುರೆ ಪವರ್ನಿಂದ ಬಂದಿವೆ ಎಂದು ವಕೀಲರು ವಾದಿಸಿದ್ದಾರೆ. ಅಜುರೆ ಸಂಸ್ಥೆಯ ಸಾಕ್ಷಿದಾರರ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆ ಎತ್ತಲಾಗಿದೆ.
ಆದರೆ, ಮೂಲ ಆರೋಪಪಟ್ಟಿಯಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರು ಭಾರತೀಯ ಅಧಿಕಾರಿಗಳಿಗೆ ನೂರಾರು ಮಿಲಿಯನ್ ಡಾಲರ್ ಲಂಚ ನೀಡಲು ಮುಂದಾಗಿದ್ದರು ಅಥವಾ ಭರವಸೆ ನೀಡಿದ್ದರು ಎಂದು ಅಮೆರಿಕದ ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದರು. ಅಲ್ಲದೆ, ಗೌತಮ್ ಅದಾನಿ ಅವರು ಅಜುರೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಿದ್ದರು ಮತ್ತು ನಂತರ ಅಜುರೆ ನೀಡಿದ್ದ ಲಂಚದ ಒಂದು ಭಾಗವನ್ನು ಮರುಪಾವತಿಸಲು ಕೋರಿದ್ದರು ಎಂಬ ಆರೋಪಗಳನ್ನೂ ಮಾಡಲಾಗಿತ್ತು.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಅದಾನಿ ಪರವಾಗಿ ವಾದಿಸುತ್ತಿದ್ದ ಅಮೆರಿಕದ ಕಾನೂನು ತಂಡವನ್ನು ಬದಲಿಸಿದ ನಂತರ ಡಿಒಜೆ ಪ್ರಕರಣವನ್ನು ಕೈಬಿಡುವ ನಿರ್ಧಾರಕ್ಕೆ ಬಂದಿತ್ತು. ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಲಹೆಗಾರ ಬೋರಿಸ್ ಎಪ್ಸ್ಟೈನ್ ಅವರು ಅದಾನಿ ಪರವಾಗಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ. ಆದರೆ, ಈ ಆರೋಪವನ್ನು ಎಪ್ಸ್ಟೈನ್, ಅದಾನಿ ಸಮೂಹ ಮತ್ತು ಡಿಒಜೆ ನಿರಾಕರಿಸಿವೆ.
ಬ್ಲೂಮ್ಬರ್ಗ್ ವರದಿಯ ಪ್ರಕಾರ, ಕ್ರಿಮಿನಲ್ ಪ್ರಕರಣ ಬಾಕಿ ಇರುವಾಗ ಗೌತಮ್ ಅದಾನಿ ಅವರು ಅಹಮದಾಬಾದ್ನಲ್ಲಿ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರನ್ನು ಖಾಸಗಿಯಾಗಿ ಭೇಟಿ ಮಾಡಿದ್ದರು. ಆದರೆ, ಈ ಸಭೆಗೆ ಪ್ರಕರಣ ವಜಾ ನಿರ್ಧಾರದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಟ್ರಂಪ್ ಜೂನಿಯರ್ ಅವರ ವಕ್ತಾರರು ಹೇಳಿದ್ದಾರೆ.
ಮೇ 14ರಂದು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರು ಎಸ್ಇಸಿಯ ನಾಗರಿಕ ಪ್ರಕರಣವನ್ನು ಇತ್ಯರ್ಥಪಡಿಸಲು ಒಟ್ಟು 18 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿಕೊಂಡಿದ್ದರು. ಬಳಿಕ ಮೇ 18ರಂದು ಅಮೆರಿಕ ನ್ಯಾಯಾಂಗ ಇಲಾಖೆ, ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವ್ನೀತ್ ಜೈನ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸದಿರಲು ನಿರ್ಧರಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತು.
ಅದೇ ದಿನ, ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯು ಅಮೆರಿಕದ ಖಜಾನೆ ಇಲಾಖೆಯ ಆರೋಪಗಳನ್ನು ಇತ್ಯರ್ಥಪಡಿಸಲು 275 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿಕೊಂಡಿತು. ಇರಾನ್ ಮೂಲದ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ಆಮದು ಮಾಡಿಕೊಂಡಿರುವ ಆರೋಪಗಳು ಈ ಪ್ರಕರಣಕ್ಕೆ ಸಂಬಂಧಿಸಿದ್ದವು.
ಸೌಜನ್ಯ: thewire.in