Photo Credit: ANI

ಭಾರತದಲ್ಲಿ ‘ಸರ್ಕಾರಿ ನೌಕರಿ’ ಎನ್ನುವುದು ಕೋಟ್ಯಂತರ ಜನರ ಬಹುದೊಡ್ಡ ಕನಸು. ಪ್ರತಿ ವರ್ಷ ಲಕ್ಷಾಂತರ ಹುದ್ದೆಗಳಿಗೆ ಕೋಟ್ಯಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಯುವಕರು, ತಂತ್ರಜ್ಞರು, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳ ವೃತ್ತಿಪರರನ್ನೂ ಈ ಕ್ಷೇತ್ರ ಆಕರ್ಷಿಸಲು ಹಲವು ಕಾರಣಗಳಿವೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಗಳ ಅಭಾವ, ಸಾಮಾಜಿಕ ಭದ್ರತೆ ಮತ್ತು ಖಾಸಗಿ ಕೆಲಸಗಳಲ್ಲಿ ಸಿಗದ ಸಾಂಸ್ಥಿಕ ಸೌಲಭ್ಯಗಳು ಇದಕ್ಕೆ ಮುಖ್ಯ ಕಾರಣ. ಇದರೊಂದಿಗೆ ಉದ್ಯಮಶೀಲತೆಗೆ ಸೂಕ್ತ ಬೆಂಬಲ ಸಿಗದಿರುವುದು ಸಹ ಸರ್ಕಾರಿ ಕೆಲಸವನ್ನು ಸುರಕ್ಷಿತ ತಾಣವನ್ನಾಗಿ ಮಾಡಿದೆ. ಇತ್ತೀಚೆಗೆ ಜಾರ್ಖಂಡ್ ಸೇರಿದಂತೆ ಹಲವೆಡೆ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಗಳು ಈ ಉದ್ಯೋಗದ ಮೇಲಿರುವ ವ್ಯಾಮೋಹಕ್ಕೇ ಹಿಡಿದ ಕನ್ನಡಿಯಾಗಿದೆ.

ಹಾಗಾದರೆ ಸರ್ಕಾರಿ ನೇಮಕಾತಿ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ? ಸರ್ಕಾರ ಎಷ್ಟು ಜನರಿಗೆ ಉದ್ಯೋಗ ನೀಡಬಲ್ಲದು? ದೇಶದಲ್ಲಿ ಒಟ್ಟು ಎಷ್ಟು ಸರ್ಕಾರಿ ಹುದ್ದೆಗಳಿವೆ? ಇಲ್ಲಿದೆ ಸಮಗ್ರ ಮಾಹಿತಿ.

►ಸರ್ಕಾರಿ ನೌಕರರ ಒಟ್ಟು ಸಂಖ್ಯೆ ಎಷ್ಟು?

ತಂತ್ರಜ್ಞರು ಮತ್ತು ವೈದ್ಯರಂತಹ ಸರ್ಕಾರಿ ಸಿಬ್ಬಂದಿಯನ್ನು ಹೊರತುಪಡಿಸಿ, ಸರ್ಕಾರಿ ನೌಕರರ ಪಡೆಯನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ (ಗ್ರೂಪ್ ಎ, ಬಿ ಮತ್ತು ಸಿ) ವಿಂಗಡಿಸಲಾಗಿದೆ. ಈ ಹಿಂದೆ ಗ್ರೂಪ್ ಡಿ (ಪ್ಯೂನ್) ವರ್ಗವೂ ಇತ್ತು, ಆದರೆ ಅದನ್ನು ಗ್ರೂಪ್ ಸಿ ಯೊಂದಿಗೆ ವಿಲೀನಗೊಳಿಸಲಾಗಿದೆ. ನಿವೃತ್ತಿ, ಹೊಸ ಹುದ್ದೆಗಳ ಸೃಷ್ಟಿ ಮತ್ತು ಖಾಲಿ ಹುದ್ದೆಗಳ ಭರ್ತಿ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ.

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ವೆಬ್ಸೈಟ್ ಮಾಹಿತಿಯ ಪ್ರಕಾರ, ಕೇಂದ್ರಾಡಳಿತ ಪ್ರದೇಶಗಳು ಮತ್ತು ವಿದೇಶಿ ರಾಯಭಾರ ಕಚೇರಿಗಳು ಸೇರಿದಂತೆ ಕೇಂದ್ರ ಸರ್ಕಾರದಲ್ಲಿ 2023ರ ಮಾರ್ಚ್ 1ರ ವೇಳೆಗೆ 40 ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳ ಪೈಕಿ 30.62 ಲಕ್ಷ ಕಾಯಂ ನೌಕರರಿದ್ದರು. ಈ ಸಂಖ್ಯೆಯಲ್ಲಿ ಗುತ್ತಿಗೆ ನೌಕರರು ಮತ್ತು ಸಲಹೆಗಾರರ ವಿವರ ಸೇರಿಲ್ಲ.

ಕೇಂದ್ರ ಸರ್ಕಾರವು 2023–24ರಲ್ಲಿ ಈ ನೌಕರರ ವೇತನಕ್ಕಾಗಿ 2.95 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಿದೆ. ಇದರಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಹಣ ರಕ್ಷಣೆ, ರೈಲ್ವೆ, ಅಂಚೆ ಮತ್ತು ಗೃಹ ಸಚಿವಾಲಯದ ಸಿಬ್ಬಂದಿಗೇ ವ್ಯಯಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟು ನೌಕರರ ನಿಖರ ಸಂಖ್ಯೆ ಲಭ್ಯವಿಲ್ಲದಿದ್ದರೂ, ಸಿವಿಲ್ ಆಡಳಿತ, ಸಶಸ್ತ್ರ ಪಡೆಗಳು, ಪೊಲೀಸ್, ಆರೋಗ್ಯ ಸಿಬ್ಬಂದಿ, ಶಿಕ್ಷಕರು ಸೇರಿದಂತೆ ಈ ಸಂಖ್ಯೆ 1.5 ಕೋಟಿಗೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

►ಕೇಂದ್ರ ಸರ್ಕಾರದಲ್ಲಿ ನೇಮಕಾತಿ ಹೇಗೆ ನಡೆಯುತ್ತದೆ?

ಕೇಂದ್ರ ಸರ್ಕಾರದ ನೇಮಕಾತಿಗಳನ್ನು ಮುಖ್ಯವಾಗಿ ಕೇಂದ್ರ ಲೋಕಸೇವಾ ಆಯೋಗ (UPSC), ಸಿಬ್ಬಂದಿ ಆಯ್ಕೆ ಆಯೋಗ (SSC), ರಕ್ಷಣಾ ಸಚಿವಾಲಯ (ಭೂಸೇನೆ, ನೌಕಾಪಡೆ, ವಾಯುಪಡೆ), ರೈಲ್ವೆ ಸಚಿವಾಲಯ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ವಿಶ್ವವಿದ್ಯಾಲಯಗಳು ನಡೆಸುತ್ತವೆ. ಪ್ರತಿ ವರ್ಷ ಕೋಟ್ಯಂತರ ಜನರು ಈ ಸಂಸ್ಥೆಗಳ ಮೂಲಕ ಪರೀಕ್ಷೆ ಬರೆಯುತ್ತಾರೆ. ಆದರೆ, ವರ್ಷಕ್ಕೆ ಕೇವಲ 1.20 ಲಕ್ಷದಷ್ಟು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಾರೆ.

►ನೇಮಕಾತಿ ನಿಯಮಗಳನ್ನು ರೂಪಿಸುವವರು ಯಾರು?

ಪ್ರಧಾನಿಯವರ ನೇರ ಉಸ್ತುವಾರಿಯಲ್ಲಿರುವ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ನೇಮಕಾತಿ, ಸೇವಾ ನಿಯಮಗಳು ಮತ್ತು ನಿಯೋಜನೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುತ್ತದೆ. ಈ ಸಚಿವಾಲಯದ ಅಡಿಯಲ್ಲಿ ಬರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (DoPT) ನಿಯಮಾವಳಿಗಳನ್ನು ಸಿದ್ಧಪಡಿಸಿ, ನೇಮಕಾತಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತದೆ.

►UPSC ಮೂಲಕ ನೇಮಕಾತಿ

ದೇಶದ ಪ್ರಮುಖ ನೇಮಕಾತಿ ಸಂಸ್ಥೆಯಾದ UPSC ಮುಖ್ಯವಾಗಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ದರ್ಜೆಯ ಉನ್ನತ ಹಾಗೂ ಮಧ್ಯಮ ಹಂತದ ಅಧಿಕಾರಿಗಳನ್ನು ಆಯ್ಕೆ ಮಾಡುತ್ತದೆ. ಇದರೊಂದಿಗೆ ಇತರ ಕೆಲವು ಪ್ರಮುಖ ಹುದ್ದೆಗಳ ನೇಮಕಾತಿಯನ್ನೂ ನಿರ್ವಹಿಸುತ್ತದೆ.

2022–23ರಲ್ಲಿ UPSC ನಡೆಸಿದ 22 ಪರೀಕ್ಷೆಗಳಿಗೆ ಒಟ್ಟು 25.70 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

ಆದರೆ, ಆಯೋಗವು ಕೇವಲ 7,999 ಅಭ್ಯರ್ಥಿಗಳನ್ನು ಮಾತ್ರ ವಿವಿಧ ಹುದ್ದೆಗಳಿಗೆ ಶಿಫಾರಸು ಮಾಡಿತ್ತು. ಇದರಲ್ಲಿ ವಿವಿಧ ನಾಗರಿಕ ಸೇವೆಗಳಿಗೆ 6,074 ಅಭ್ಯರ್ಥಿಗಳು (ಮೀಸಲು ಪಟ್ಟಿಯ 134 ಅಭ್ಯರ್ಥಿಗಳು ಸೇರಿ) ಮತ್ತು ರಕ್ಷಣಾ ಸೇವೆಗಳಿಗೆ 1,925 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ನೇರ ನೇಮಕಾತಿ (ಲ್ಯಾಟರಲ್ ಎಂಟ್ರಿ) ಪ್ರಕ್ರಿಯೆಗೂ UPSC ಪ್ರಮುಖ ಏಜೆನ್ಸಿಯಾಗಿದೆ.

UPSC ನಡೆಸುವ ಬಹುತೇಕ ಪರೀಕ್ಷೆಗಳು ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಎಂಬ ಮೂರು ಹಂತಗಳನ್ನು ಒಳಗೊಂಡಿರುತ್ತವೆ. ಕೆಲವು ಹುದ್ದೆಗಳ ನೇಮಕಾತಿಯು ಕೇವಲ ಸಂದರ್ಶನದ ಮೂಲಕವೇ ನಡೆಯುತ್ತದೆ.

ಆಯೋಗವು ನಡೆಸುವ ಪರೀಕ್ಷೆಗಳಲ್ಲಿ ಭಾರತೀಯ ಆಡಳಿತ ಸೇವೆ (IAS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಸೇರಿದಂತೆ 19 ನಾಗರಿಕ ಸೇವೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಾಗರಿಕ ಸೇವಾ ಪರೀಕ್ಷೆ ಅತ್ಯಂತ ಪ್ರಮುಖವಾಗಿದೆ.

►ಸಿಬ್ಬಂದಿ ಆಯ್ಕೆ ಆಯೋಗದ (SSC) ಮೂಲಕ ನೇಮಕಾತಿ

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಚಿವಾಲಯದ ಅಧೀನ ಕಚೇರಿಗಳಲ್ಲಿನ ಗೆಜೆಟೆಡ್ ಅಲ್ಲದ ಗ್ರೂಪ್ ‘ಬಿ’ (ಮಧ್ಯಮ ಹಂತದ ಉಸ್ತುವಾರಿ ಮತ್ತು ಆಡಳಿತಾತ್ಮಕ ಹುದ್ದೆಗಳು) ಹಾಗೂ ತಾಂತ್ರಿಕೇತರ ಗ್ರೂಪ್ ‘ಸಿ’ (ಕ್ಲರಿಕಲ್, ತಾಂತ್ರಿಕ ಮತ್ತು ಸಹಾಯಕ ಹುದ್ದೆಗಳು) ಹುದ್ದೆಗಳಿಗೆ SSC ನೇಮಕಾತಿ ನಡೆಸುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಸಹಾಯಕರು ಮತ್ತು ಲೋವರ್ ಡಿವಿಷನಲ್ ಕ್ಲರ್ಕ್ ಹುದ್ದೆಗಳನ್ನೂ SSC ಭರ್ತಿ ಮಾಡುತ್ತದೆ.

UPSCಯಂತೆಯೇ SSC ಕೂಡ ಹಲವು ಪರೀಕ್ಷೆಗಳನ್ನು ನಡೆಸುತ್ತದೆ. ಇವುಗಳಲ್ಲಿ ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ (CGL), ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL), ಕಿರಿಯ ಎಂಜಿನಿಯರ್ ಪರೀಕ್ಷೆ, ದಿಲ್ಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಬ್ಇನ್ಸ್ಪೆಕ್ಟರ್ ಪರೀಕ್ಷೆ, ಕಂಬೈನ್ಡ್ ಹಿಂದಿ ಭಾಷಾಂತರಕಾರ ಪರೀಕ್ಷೆ, ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಪರೀಕ್ಷೆ ಹಾಗೂ ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಮತ್ತು ಹವಾಲ್ದಾರ್ ಪರೀಕ್ಷೆಗಳು ಸೇರಿವೆ.

2024–25ರಲ್ಲಿ SSC ನಡೆಸಿದ 20 ಪರೀಕ್ಷೆಗಳಿಗೆ ಒಟ್ಟು 2.05 ಕೋಟಿ ಅಭ್ಯರ್ಥಿಗಳು ಹಾಜರಾಗಿದ್ದರು.

SSC ನಡೆಸಿದ ಪರೀಕ್ಷೆಗಳ ಪೈಕಿ ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ತಾಂತ್ರಿಕೇತರ) ಮತ್ತು ಹವಾಲ್ದಾರ್ ಪರೀಕ್ಷೆಯು ಅತ್ಯಂತ ದೊಡ್ಡದಾಗಿತ್ತು. 130 ನಗರಗಳ 279 ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಗೆ 55.99 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಈ 56 ಲಕ್ಷ ಅಭ್ಯರ್ಥಿಗಳ ಪೈಕಿ ಕೇವಲ 83,857 ಜನರು ಮಾತ್ರ ಆಯ್ಕೆಯಾಗಿದ್ದರು.

ವಿಶೇಷವೆಂದರೆ, SSC ಪರೀಕ್ಷೆಗಳಲ್ಲಿ ಪುರುಷ ಅಭ್ಯರ್ಥಿಗಳಿಗಿಂತ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೇ ಹೆಚ್ಚಾಗಿದೆ. ಉದಾಹರಣೆಗೆ, 2024ರಲ್ಲಿ ಅಧಿಸೂಚಿಸಲಾದ 10 ಪರೀಕ್ಷೆಗಳಿಗೆ ಹಾಜರಾದ 1.85 ಕೋಟಿ ಅಭ್ಯರ್ಥಿಗಳಲ್ಲಿ 1.27 ಕೋಟಿ ಮಹಿಳೆಯರು, 57.69 ಲಕ್ಷ ಪುರುಷರು ಮತ್ತು 149 ತೃತೀಯಲಿಂಗಿಗಳು ಸೇರಿದ್ದಾರೆ.

ನಾಗರಿಕ ಸೇವೆಗಳು ಸೇರಿದಂತೆ ಹೆಚ್ಚಿನ ಪರೀಕ್ಷೆಗಳಿಗೆ ಕನಿಷ್ಠ ವಿದ್ಯಾರ್ಹತೆ ಪದವಿಯಾಗಿದೆ. ಆದರೆ, ಕೆಳ ಹಂತದ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ದ್ವಿತೀಯ ಪಿಯುಸಿ (12ನೇ ತರಗತಿ) ಮಾತ್ರ. ಗ್ರೂಪ್ ‘ಡಿ’ (ಪ್ಯೂನ್) ಹುದ್ದೆಗಳನ್ನು ಗ್ರೂಪ್ ‘ಸಿ’ ಹುದ್ದೆಗಳೊಂದಿಗೆ ವಿಲೀನಗೊಳಿಸಲಾಗಿರುವುದರಿಂದ, ಆ ಹಂತದಲ್ಲಿ ನೇರ ನೇಮಕಾತಿಗಳು ನಡೆಯುತ್ತಿಲ್ಲ. ಹೀಗಾಗಿ ಪ್ಯೂನ್ ಮತ್ತು ಸ್ವಚ್ಛತಾ ಸಿಬ್ಬಂದಿಯ ಕೆಲಸಗಳನ್ನು ಈಗ ಹೌಸ್ಕೀಪಿಂಗ್ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗುತ್ತಿದೆ.

►ರೈಲ್ವೆ ಮೂಲಕ ನೇಮಕಾತಿ: ಅತ್ಯಂತ ದೊಡ್ಡ ಕೇಂದ್ರ ಸರ್ಕಾರಿ ಉದ್ಯೋಗದಾತ ಸಂಸ್ಥೆ

12 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ರೈಲ್ವೆಯು ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ. ಇದು ವಾರ್ಷಿಕ ನೇಮಕಾತಿ ವೇಳಾಪಟ್ಟಿಯನ್ನು ಕಾಯ್ದುಕೊಂಡಿದ್ದು, ಅಖಿಲ ಭಾರತ ಮಟ್ಟದ ಪರೀಕ್ಷೆಗಳನ್ನು ನಡೆಸುತ್ತದೆ.

ಜುಲೈ 22ರಂದು ಲೋಕಸಭೆಯಲ್ಲಿ ನೀಡಿದ ಉತ್ತರದ ಪ್ರಕಾರ, 2014–15ರಿಂದ 2026–27ರ ಅವಧಿಯಲ್ಲಿ (2026ರ ಜೂನ್ 30ರವರೆಗೆ) 5.56 ಲಕ್ಷ ಜನರನ್ನು ಈ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ.

2024ರ ಅವಧಿಯಲ್ಲಿ ರೈಲ್ವೆಯು ಸಹಾಯಕ ಲೋಕೋ ಪೈಲಟ್, ಟೆಕ್ನಿಷಿಯನ್, ಸಬ್ಇನ್ಸ್ಪೆಕ್ಟರ್ ಮತ್ತು ಪಾಯಿಂಟ್ಸ್ಮ್ಯಾನ್ನಂತಹ 92,116 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 10 ನೇಮಕಾತಿ ಪ್ರಕಟಣೆಗಳನ್ನು (ಕೇಂದ್ರೀಕೃತ ಉದ್ಯೋಗ ಅಧಿಸೂಚನೆಗಳು) ಹೊರಡಿಸಿತ್ತು. ಈ 92,116 ಹುದ್ದೆಗಳಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳ ಸಂಖ್ಯೆ ಬರೋಬ್ಬರಿ 3.58 ಕೋಟಿ.

►ರಾಜ್ಯ ಸರ್ಕಾರಗಳ ನೇಮಕಾತಿ ವ್ಯವಸ್ಥೆ ಹೇಗಿದೆ?

ಕೇಂದ್ರಾಡಳಿತ ಪ್ರದೇಶಗಳ ನೇಮಕಾತಿಗಳನ್ನು ಕೇಂದ್ರ ಸರ್ಕಾರದ ಸಂಸ್ಥೆಗಳೇ ನಿರ್ವಹಿಸುತ್ತವೆ. ಆದರೆ, ಮೂರು ಅಖಿಲ ಭಾರತ ಸೇವೆಗಳ (IAS, IPS,IFS) ನೇಮಕಾತಿಯು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಸಂಬಂಧಿಸಿದೆ. UPSC ಮೂಲಕ ಆಯ್ಕೆಯಾದ ಅಧಿಕಾರಿಗಳನ್ನು ವಿವಿಧ ರಾಜ್ಯಗಳ ಕೆಡರ್ಗಳಿಗೆ ಹಂಚಿಕೆ ಮಾಡಲಾಗುತ್ತದೆ ಮತ್ತು ಅವರು ರಾಜ್ಯ ಸರ್ಕಾರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ನಿಯಮಿತ ಶೇಕಡಾವಾರು ಅಧಿಕಾರಿಗಳು ಕೇಂದ್ರ ನಿಯೋಜನೆಯ ಮೇಲೆಯೂ ಸೇವೆ ಸಲ್ಲಿಸುತ್ತಾರೆ.

ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ನೇಮಕಾತಿ ವ್ಯವಸ್ಥೆಯನ್ನು ಹೊಂದಿವೆ. ರಾಜ್ಯ ಸಾರ್ವಜನಿಕ ಸೇವಾ ಆಯೋಗಗಳು ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ದರ್ಜೆಯ ಅಧಿಕಾರಿಗಳನ್ನು ರಾಜ್ಯ ನಾಗರಿಕ ಸೇವೆ (PCS), ರಾಜ್ಯ ಪೊಲೀಸ್ ಸೇವೆ (PPS) ಮತ್ತು ರಾಜ್ಯ ಅರಣ್ಯ ಸೇವೆಗಳಿಗೆ ಆಯ್ಕೆ ಮಾಡುತ್ತವೆ.

ರಾಜ್ಯ ಸೇವೆಯಲ್ಲಿ ನಿರ್ದಿಷ್ಟ ಅವಧಿಯ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಐಎಎಸ್, ಐಪಿಎಸ್ ಅಥವಾ ಐಎಫ್ಒಎಸ್ ಹುದ್ದೆಗಳಿಗೆ ಬಡ್ತಿ ನೀಡಲಾಗುತ್ತದೆ. ಐಎಎಸ್, ಐಪಿಎಸ್ ಹಾಗೂ ರಾಜ್ಯದ ಪಿಸಿಎಸ್, ಪಿಪಿಎಸ್ ಅಧಿಕಾರಿಗಳ ಒಕ್ಕೂಟವೇ ತಳಮಟ್ಟದಲ್ಲಿ ಆಡಳಿತವನ್ನು ನಡೆಸುತ್ತದೆ.

UPSCಯಂತೆಯೇ ರಾಜ್ಯ ಆಯೋಗಗಳು ಕೂಡ ಮೂರು ಹಂತದ ಪರೀಕ್ಷಾ ವ್ಯವಸ್ಥೆಯನ್ನು ಹೊಂದಿವೆ. ಹಲವು ರಾಜ್ಯಗಳಲ್ಲಿ ನೇಮಕಾತಿ ವಿವಾದಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಜಾರ್ಖಂಡ್ ಇತ್ತೀಚಿನ ಉದಾಹರಣೆಯಾಗಿದೆ. ಒಂದು ಅಂದಾಜಿನ ಪ್ರಕಾರ, ದೇಶದ ಎಲ್ಲಾ ರಾಜ್ಯ ಸಾರ್ವಜನಿಕ ಸೇವಾ ಆಯೋಗಗಳು ಖಾಲಿ ಹುದ್ದೆಗಳ ಆಧಾರದ ಮೇಲೆ ವರ್ಷಕ್ಕೆ ಸುಮಾರು 25,000ದಿಂದ 30,000 ಅಭ್ಯರ್ಥಿಗಳನ್ನು ಶಿಫಾರಸು ಮಾಡುತ್ತವೆ.

ರಾಜ್ಯ ಸರ್ಕಾರಿ ನೌಕರರ ಒಟ್ಟು ಸಂಖ್ಯೆಯ ಕುರಿತು ಯಾವುದೇ ಕ್ರೋಢೀಕೃತ ಅಧಿಕೃತ ಮಾಹಿತಿ ಲಭ್ಯವಿಲ್ಲ. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ ಸುಮಾರು 4 ಲಕ್ಷ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 16.35 ಲಕ್ಷ ಸರ್ಕಾರಿ ನೌಕರರಿದ್ದಾರೆ.

ತಮಿಳುನಾಡಿನಲ್ಲಿ ಅಂದಾಜು 12 ಲಕ್ಷ, ಕೇರಳದಲ್ಲಿ ಸುಮಾರು 5.50 ಲಕ್ಷ, ಒಡಿಶಾದಲ್ಲಿ ಸುಮಾರು 4 ಲಕ್ಷ ಮತ್ತು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸುಮಾರು 4.5 ಲಕ್ಷ ರಾಜ್ಯ ಸರ್ಕಾರಿ ನೌಕರರಿದ್ದಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳ ಸರ್ಕಾರವು ಖಾಲಿ ಇರುವ 1 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದೆ.

►ರಾಜ್ಯಗಳ ಅಧೀನ ಸೇವೆಗಳ ಆಯ್ಕೆ ಆಯೋಗಗಳು

ಸರ್ಕಾರಿ ನೌಕರರಲ್ಲಿ ಹೆಚ್ಚಿನವರು ಗ್ರೂಪ್ ‘ಸಿ’ ವರ್ಗಕ್ಕೆ ಸೇರಿರುವುದರಿಂದ, ಪೊಲೀಸ್ ಕಾನ್ಸ್ಟೇಬಲ್ ಮತ್ತು ಸಬ್ಇನ್ಸ್ಪೆಕ್ಟರ್ ಸೇರಿದಂತೆ ಇಂತಹ ಹೆಚ್ಚಿನ ಹುದ್ದೆಗಳನ್ನು ರಾಜ್ಯ ಸಿಬ್ಬಂದಿ ಆಯ್ಕೆ ಆಯೋಗಗಳು, ಅಧೀನ ಸೇವೆಗಳ ಆಯ್ಕೆ ಆಯೋಗಗಳು ಮತ್ತು ಪೊಲೀಸ್ ನೇಮಕಾತಿ ಮಂಡಳಿಗಳಂತಹ ಪ್ರತ್ಯೇಕ ಸಂಸ್ಥೆಗಳ ಮೂಲಕ ಭರ್ತಿ ಮಾಡಲಾಗುತ್ತದೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿರುವುದರಿಂದ ಈ ಪರೀಕ್ಷೆಗಳನ್ನು ನಡೆಸುವುದು ದೊಡ್ಡ ಸವಾಲಾಗಿದೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಗಳ ಕೊರತೆಯನ್ನು ಎದುರಿಸುತ್ತಿರುವ ಯುವಕರಿಗೆ ಇದು ಒಂದೇ ದಾರಿಯಾಗಿದೆ. ಕೆಲವು ವರ್ಷಗಳ ಹಿಂದೆ, ಉತ್ತರ ಪ್ರದೇಶದಲ್ಲಿ 60,244 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ 48 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅಂದರೆ ಪ್ರತಿ ಹುದ್ದೆಗೆ 80 ಅಭ್ಯರ್ಥಿಗಳು ಪೈಪೋಟಿಯಲ್ಲಿದ್ದರು.

►ಸರ್ಕಾರಿ ಉದ್ಯೋಗದ ಮೇಲಿನ ವ್ಯಾಮೋಹಕ್ಕೆ ಕಾರಣವೇನು?

ಸರ್ಕಾರಿ ಉದ್ಯೋಗ ಪಡೆಯುವ ಸಾಧ್ಯತೆ ಅತ್ಯಂತ ಕ್ಷೀಣವಾಗಿದೆ. ಆದರೂ ದೇಶದ ಲಕ್ಷಾಂತರ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ವರ್ಷಾನುಗಟ್ಟಲೆ ಸಮಯ ವ್ಯಯಿಸುವುದೇಕೆ?

ಇದರ ಹಿಂದೆ ಹಲವು ಆಳವಾದ ಕಾರಣಗಳಿವೆ. ಪ್ರಮುಖವಾಗಿ ಯುವಜನತೆಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಉತ್ತಮ ಗುಣಮಟ್ಟದ ಕೆಲಸಗಳ ಅಭಾವವೇ ಮುಖ್ಯ ಕಾರಣ.

ಸರ್ಕಾರಿ ಹುದ್ದೆ ದೊರೆತರೆ ಇಡೀ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಮಟ್ಟ ಸುಧಾರಿಸುತ್ತದೆ. ಸರ್ಕಾರಿ ಕೆಲಸವು ಹಲವು ಸೌಲಭ್ಯಗಳನ್ನು ನೀಡುತ್ತದೆ. ಮೊದಲನೆಯದಾಗಿ, ಉದ್ಯೋಗ ಭದ್ರತೆ. ಪ್ರೊಬೇಷನರಿ ಅವಧಿ ಮುಗಿದ ನಂತರ, ನಿವೃತ್ತಿಯವರೆಗೆ ಉದ್ಯೋಗಕ್ಕೆ ಯಾವುದೇ ಅಭದ್ರತೆ ಇರುವುದಿಲ್ಲ. (ಅಧಿಕಾರಿಗಳನ್ನು ಅವಧಿಗೆ ಮುನ್ನ ನಿವೃತ್ತಿಗೊಳಿಸಲು ಸರ್ಕಾರಕ್ಕೆ ಅವಕಾಶವಿದ್ದರೂ, ಅದನ್ನು ಅಪರೂಪಕ್ಕೆ ಮಾತ್ರ ಬಳಸಲಾಗುತ್ತದೆ).

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಖಾಸಗಿ ಕಂಪನಿಗಳು ವೇತನ ಕಡಿತ ಮತ್ತು ಉದ್ಯೋಗಿಗಳನ್ನು ವಜಾಗೊಳಿಸಿದಾಗ, ಸರ್ಕಾರಿ ನೌಕರರು ಸಂಪೂರ್ಣ ವೇತನ ಮತ್ತು ಭತ್ಯೆಗಳನ್ನು ಪಡೆಯುವುದನ್ನು ಮುಂದುವರಿಸಿದರು.

ಸರ್ಕಾರಿ ನೌಕರರ ವೇತನವನ್ನು ವೇತನ ಆಯೋಗಗಳು ನಿರ್ಧರಿಸುತ್ತಿದ್ದು, ಖಚಿತ ಭತ್ಯೆ ಹೆಚ್ಚಳ, ಹಣದುಬ್ಬರಕ್ಕೆ ಅನುಗುಣವಾಗಿ ತುಟ್ಟಿಭತ್ಯೆ ಮತ್ತು ಇತರ ಪ್ರಯೋಜನಗಳನ್ನು ಒದಗಿಸುತ್ತವೆ.

ಹಳೆಯ ಪಿಂಚಣಿ ಯೋಜನೆಯು ಆಜೀವ ಪಿಂಚಣಿ ನೀಡುತ್ತಿದ್ದರೆ, ಪ್ರಸ್ತುತ ವ್ಯವಸ್ಥೆಯು ನಿವೃತ್ತಿಯ ನಂತರ ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ಸಂಪೂರ್ಣ ವೈದ್ಯಕೀಯ ರಕ್ಷಣೆಯನ್ನು ಒದಗಿಸುತ್ತದೆ.

ನಿರ್ದಿಷ್ಟ ಸೇವೆ ಮತ್ತು ರಾಜ್ಯವನ್ನು ಆಧರಿಸಿ, ನೌಕರರು ರಿಯಾಯಿತಿ ದರದ ವಸತಿ, ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ, ಪ್ರಯಾಣ ಭತ್ಯೆ ಮತ್ತು ಶಿಕ್ಷಣ ಭತ್ಯೆಯನ್ನು ಪಡೆಯುತ್ತಾರೆ. ಖಾಸಗಿ ಕ್ಷೇತ್ರದಂತಲ್ಲದೆ, ನಿಗದಿತ ಕೆಲಸದ ಸಮಯ, ಕಠಿಣ ಗುರಿಗಳಿಲ್ಲದಿರುವುದು ಮತ್ತು ವಾರಾಂತ್ಯದ ರಜೆಗಳು ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸಲು ನೆರವಾಗುತ್ತವೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor