×
Ad

ಡೆಲಿವರಿ ಬಾಯ್‌ಗೆ 4,000 ರೂ. ವಿಮಾನ ಟಿಕೆಟ್ ಬುಕ್ ಮಾಡಿದ ಗ್ರಾಹಕ; ವೈರಲ್ ಆದ ಪೋಸ್ಟ್!

Update: 2026-07-13 17:11 IST

Photo Credit : indiatoday / Ai-generated

ಮಳೆಯಲ್ಲಿ ಕಣ್ಣೀರು ಹಾಕಿಕೊಂಡು ಬಂದ ಡೆಲಿವರಿ ಯುವಕನಿಗೆ ನೆರವಾದ ಕಥೆಯನ್ನು ‘ಎಕ್ಸ್‌’ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆಗಿದೆ.

ಮಳೆಯಲ್ಲಿ ಆಹಾರ ವಿತರಣೆಗೆ ಬಂದ Zomato India ಡೆಲಿವರಿ ಯುವಕನ ಕಣ್ಣೀರು ತುಂಬಿದ ಕಣ್ಣುಗಳನ್ನು ಗಮನಿಸಿದ ಬಳಿಕ ವ್ಯಕ್ತಿಯೊಬ್ಬರು ಅವರಿಗೆ ನೀಡಿದ ನೆರವು ಇದೀಗ ವೈರಲ್ ಪೋಸ್ಟ್ ರೂಪ ತಾಳಿದೆ. ನೆರವು ನೀಡಿದ ವ್ಯಕ್ತಿ ತಮ್ಮ ಮತ್ತು ಡೆಲಿವರಿ ಯುವಕನ ನಡುವಿನ ಹೃದಯಸ್ಪರ್ಶಿ ಸಂಭಾಷಣೆ ಹಾಗೂ ನಂತರದ ಬೆಳವಣಿಗೆಗಳನ್ನು ‘ಎಕ್ಸ್‌’ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಈ ವಿಷಯ ವೈರಲ್ ಆಗಿದೆ.

ಪೋಸ್ಟ್ ಬರೆದಿರುವ ಅಂಕಿತ್ ಪಾಂಡೆಯ ಮನೆಗೆ ಡೆಲಿವರಿ ಯುವಕ ಅನೇಕ ಬಾರಿ ಆಹಾರ ವಿತರಣೆಗಾಗಿ ಭೇಟಿ ನೀಡಿದ್ದರು. ಆದ್ದರಿಂದ ಇಬ್ಬರಿಗೂ ಮೊದಲೇ ಪರಿಚಯವಿತ್ತು. ಯುವಕ ತಮ್ಮ ಆರ್ಡರ್‌ನೊಂದಿಗೆ ಬಂದಾಗ, ಮಳೆಯಿಂದ ತಪ್ಪಿಸಿಕೊಳ್ಳಲು ಅಂಕಿತ್ ಅವರನ್ನು ಮನೆಯೊಳಗೆ ಆಹ್ವಾನಿಸಿ ಕುಡಿಯಲು ಒಂದು ಲೋಟ ನೀರು ನೀಡಿದ್ದರು.

"ಅವನು ಒಳಗೆ ಬಂದ ಕ್ಷಣ ಅವನ ಕಣ್ಣುಗಳು ಕೆಂಪಾಗಿರುವುದನ್ನು ನೋಡಿದಾಗ ಆತ ಅಳುತ್ತಿರುವಂತೆ ಭಾಸವಾಯಿತು. ‘ಏನಾಯಿತು?’ ಎಂದು ಕೇಳಿದಾಗ ‘ಏನಿಲ್ಲ’ ಎಂದು ಉತ್ತರಿಸಿದ," ಎಂದು ಅಂಕಿತ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಂತರ ಅಂಕಿತ್ ಒತ್ತಾಯಿಸಿ ಕೇಳಿದಾಗ, ಡೆಲಿವರಿ ಯುವಕನ ತಾಯಿ ಆ ದಿನ ಬೆಳಿಗ್ಗೆ ಮೆಟ್ಟಿಲುಗಳಿಂದ ಬಿದ್ದು ಐಸಿಯು (ತೀವ್ರ ನಿಗಾ ಘಟಕ)ಗೆ ದಾಖಲಾಗಿರುವುದು ಬಹಿರಂಗವಾಯಿತು. ಆಕೆಯ ಸ್ಥಿತಿ ಚಿಂತಾಜನಕವಾಗಿತ್ತು. ಊರಿಗೆ ಹೋಗುವ ಏಕೈಕ ರೈಲು ರಾತ್ರಿ 11 ಗಂಟೆಗೆ ಹೊರಟರೂ ತಲುಪಲು 30 ಗಂಟೆಗಳು ಹಿಡಿಯುತ್ತವೆ. "ಹೀಗಾಗಿ ಕೊನೆಯ ಬಾರಿ ಆಕೆಯನ್ನು ನೋಡಲು ಸಾಧ್ಯವಾಗುತ್ತದೆಯೇ ಎಂಬುದು ನನಗೆ ತಿಳಿದಿಲ್ಲ" ಎಂದು ಯುವಕ ಹೇಳಿದ್ದ.

ಡೆಲಿವರಿ ಯುವಕ ಊಟವನ್ನೂ ಮಾಡಿರಲಿಲ್ಲ. ಹೀಗಾಗಿ ನಂತರ ಇಬ್ಬರೂ ಯುವಕ ತಂದಿದ್ದ ಊಟವನ್ನೇ ಹಂಚಿಕೊಂಡರು. ಬಳಿಕ ಅಂಕಿತ್, ಯುವಕನನ್ನು ಮನೆಗೆ ತಲುಪಿಸಲು ಪರ್ಯಾಯ ಮಾರ್ಗವನ್ನು ಆನ್‌ಲೈನ್‌ನಲ್ಲಿ ಹುಡುಕಿದರು.

4,000 ರೂ.ಗೆ ವಿಮಾನ ಟಿಕೆಟ್ ಇರುವುದನ್ನು ಕಂಡು ತಕ್ಷಣವೇ ಬುಕ್ ಮಾಡಿದರು. ಆದರೂ ಡೆಲಿವರಿ ಯುವಕ ತಾವು ಹಿಂದೆಂದೂ ವಿಮಾನ ನಿಲ್ದಾಣಕ್ಕೆ ಹೋಗಿರಲಿಲ್ಲ ಎಂದು ಹೇಳಿದರು. ಆಗ ಅಂಕಿತ್, ತಮ್ಮ ಸ್ನೇಹಿತ ವಿಮಾನ ನಿಲ್ದಾಣದಲ್ಲಿ ಸಹಾಯ ಮಾಡುತ್ತಾನೆ ಎಂದು ಭರವಸೆ ನೀಡಿ ಆತನನ್ನು ಕಳುಹಿಸಿದರು.

ಕೆಲವು ಗಂಟೆಗಳ ಬಳಿಕ ಯುವಕ ಮನೆಗೆ ತಲುಪಿ ತಾಯಿಯನ್ನು ಭೇಟಿ ಮಾಡಿದರು. ವೈದ್ಯರು ತಾಯಿ ಬೇಗನೇ ಆರೋಗ್ಯವಂತರಾಗಲಿದ್ದಾರೆ ಎಂಬ ಶುಭ ಸುದ್ದಿಯನ್ನೂ ನೀಡಿದರು. ಯುವಕ ಈ ವಿಷಯವನ್ನು ಅಂಕಿತ್‌ಗೆ ಕರೆ ಮಾಡಿ ತಿಳಿಸಿದ್ದರು. ಈ ವಿವರವಿರುವ ಪೋಸ್ಟ್ ನೆಟ್ಟಿಗರ ನಡುವೆ ವೈರಲ್ ಆಗಿತ್ತು. ಯುವಕನಿಗೆ ನೆರವಾದ ಅಂಕಿತ್ ಅವರನ್ನು ಎಲ್ಲರೂ ಪ್ರಶಂಸಿಸಿದ್ದಾರೆ.

ನಂತರ ಮತ್ತೊಂದು ಪೋಸ್ಟ್‌ನಲ್ಲಿ ಅಪ್‌ಡೇಟ್ ನೀಡಿದ ಅಂಕಿತ್, "ಡೆಲಿವರಿ ಯುವಕ ವಿಮಾನದ ಟಿಕೆಟ್‌ಗಾಗಿ ಖರ್ಚಾದ ಹಣವನ್ನು ಮರುಪಾವತಿಸಿದ್ದಾನೆ" ಎಂದು ತಿಳಿಸಿದ್ದಾರೆ. ತಾಯಿ ಅಪಾಯದಿಂದ ಪಾರಾದ ಬಳಿಕ ವಿಮಾನ ಟಿಕೆಟ್‌ನ ಸಂಪೂರ್ಣ ಮೊತ್ತವಾದ 4,000 ರೂ. ಅನ್ನು ಡೆಲಿವರಿ ಯುವಕ ಮರಳಿ ನೀಡಿದ್ದ.

"ನಾನು ಹಣ ಮರುಪಾವತಿಯಾಗುತ್ತದೆ ಎಂದು ಸಹಾಯ ಮಾಡಿರಲಿಲ್ಲ. ಆದರೆ ನಮ್ಮ ಒಂದು ಕರುಣೆಯ ಕೆಲಸ ಕಷ್ಟದಲ್ಲಿರುವ ಮತ್ತೊಬ್ಬರ ಮುಖದಲ್ಲಿ ನಗು ತರಿಸಬಹುದು," ಎಂದು ಅಂಕಿತ್ ಬರೆದುಕೊಂಡಿದ್ದಾರೆ.

ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರು ಯುವಕ ಮತ್ತು ಅಂಕಿತ್ ಇಬ್ಬರನ್ನೂ ಪ್ರಶಂಸಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News