Telegram ಸಿಇಒ ಪಾವೆಲ್ ಡುರೊವ್ ಪ್ರಸ್ತಾಪಿಸಿದ 'BGP hijacking' ಎಂದರೇನು?
ಪಾವೆಲ್ ಡುರೊವ್ | Photo Credit : AP
ಕೇಂದ್ರ ಸರ್ಕಾರವು ಟೆಲಿಗ್ರಾಮ್ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದ ಮರುದಿನವೇ, ಅದರ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರು 'ಬಿಜಿಪಿ (ಬಾರ್ಡರ್ ಗೇಟ್ವೇ ಪ್ರೋಟೋಕಾಲ್) ಹೈಜಾಕಿಂಗ್' ಎಂಬ ಕಳ್ಳ ಮಾರ್ಗದ ಮೂಲಕ ಆ್ಯಪ್ ನ ಬಳಕೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತದ ನಿಷೇಧದ ಆದೇಶಗಳು ಅನ್ವಯಿಸದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸೇರಿದಂತೆ ವಿದೇಶಗಳಲ್ಲೂ ಇದರಿಂದ ಬಳಕೆದಾರರಿಗೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ಒಂದು 'ವ್ಯಾಪಾರ ಪೈಪೋಟಿಯ ಯುದ್ಧ'ದ ಭಾಗವಾಗಿಯೇ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಡುರೊವ್ ಆರೋಪಿಸಿದ್ದಾರೆ.
ಬಿಜಿಪಿ ಹೈಜಾಕಿಂಗ್ ಎಂಬುದು ವೆಬ್ಸೈಟ್ ಅಥವಾ ಆನ್ಲೈನ್ ಸೇವೆಯೊಂದರ ನಿಖರವಾದ ಹಾದಿಯನ್ನು ತಪ್ಪಾಗಿ ಬಿಂಬಿಸುವ ಮೂಲಕ ಇಂಟರ್ನೆಟ್ ಟ್ರಾಫಿಕ್ ಅನ್ನು ಬೇರೆಡೆಗೆ ತಿರುಗಿಸುವ ತಂತ್ರವಾಗಿದೆ.
►BGP ಎಂದರೇನು?
ಬಾರ್ಡರ್ ಗೇಟ್ವೇ ಪ್ರೋಟೋಕಾಲ್ (BGP) ಎಂಬುದು ಇಂಟರ್ನೆಟ್ ನ ರೂಟಿಂಗ್ ಸಿಸ್ಟಂ ಆಗಿದೆ. ಜಗತ್ತಿನಾದ್ಯಂತ ಇರುವ ನೆಟ್ವರ್ಕ್ ಗಳು ನಿರ್ದಿಷ್ಟ ಐಪಿ (IP) ವಿಳಾಸಗಳನ್ನು ಹೇಗೆ ತಲುಪಬೇಕು ಎಂಬುದನ್ನು ಇದು ತಿಳಿಸುತ್ತದೆ. ಯಾವುದೇ ಒಂದು ನೆಟ್ವರ್ಕ್ ತಾನೇ ಅತಿ ಉತ್ತಮ ಮಾರ್ಗವೆಂದು ಸುಳ್ಳು ಮಾಹಿತಿ ನೀಡಿದರೆ, ಇಂಟರ್ನೆಟ್ ಸಂಚಾರವನ್ನು ಬೇರೆಡೆಗೆ ತಿರುಗಿಸಬಹುದು, ತಡೆಹಿಡಿಯಬಹುದು ಅಥವಾ ಸಂಪೂರ್ಣವಾಗಿ ಬ್ಲಾಕ್ ಮಾಡಬಹುದು. ಇದನ್ನೇ ಬಿಜಿಪಿ ಹೈಜಾಕಿಂಗ್ ಎನ್ನಲಾಗುತ್ತದೆ.
ಪ್ರತಿಯೊಂದು ಪ್ರಮುಖ ಟೆಲಿಕಾಂ ಆಪರೇಟರ್, ಕ್ಲೌಡ್ ಪೂರೈಕೆದಾರರು, ಕಂಟೆಂಟ್ ಡೆಲಿವರಿ ನೆಟ್ವರ್ಕ್ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು 'ಅಟಾನಮಸ್ ಸಿಸ್ಟಮ್' (AS) ಅನ್ನು ನಡೆಸುತ್ತಾರೆ. ಇದು ಒಂದು ವಿಶಿಷ್ಟ ಸಂಖ್ಯೆಯಿಂದ ಗುರುತಿಸಲ್ಪಡುವ ದೊಡ್ಡ ನೆಟ್ವರ್ಕ್ ಆಗಿದೆ. ಒಂದು ನೆಟ್ವರ್ಕ್ ನಿಂದ ನಿರ್ದಿಷ್ಟ ಐಪಿ ವಿಳಾಸಕ್ಕೆ ಇಂಟರ್ನೆಟ್ ಸಂಚಾರ ಹೇಗೆ ಸಾಗಬೇಕು ಎಂಬುದನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಈ ನೆಟ್ವರ್ಕ್ಗಳು ಬಳಸುವ ನಿಯಮಾವಳಿಯೇ ಬಿಜಿಪಿ.
ಉದಾಹರಣೆಗೆ, ಡುರೊವ್ ಅವರ ಪ್ರಕರಣವನ್ನೇ ತೆಗೆದುಕೊಂಡರೆ, ಯುಎಇಯಲ್ಲಿರುವ ಬಳಕೆದಾರರೊಬ್ಬರು ಟೆಲಿಗ್ರಾಮ್ ಆ್ಯಪ್ ತೆರೆದಾಗ, ಟೆಲಿಗ್ರಾಮ್ ನ ಸರ್ವರ್ ಗಳನ್ನು ತಲುಪಲು ಅತ್ಯುತ್ತಮ ಮಾರ್ಗವನ್ನು ಕಂಡುಹಿಡಿಯಲು ಹಲವು ನೆಟ್ವರ್ಕ್ ಗಳು ಬಿಜಿಪಿ ಸಂಕೇತಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಸಾಮಾನ್ಯವಾಗಿ ನೆಟ್ವರ್ಕ್ ಗಳು ಈ ಸಂಕೇತಗಳನ್ನು ನಂಬುವುದರಿಂದಲೇ ಇಂಟರ್ನೆಟ್ ಸುಗಮವಾಗಿ ಕೆಲಸ ಮಾಡುತ್ತದೆ.
ಇದನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಇಂಟರ್ನೆಟ್ ಅನ್ನು ಒಂದು ದೊಡ್ಡ ರಾಷ್ಟ್ರೀಯ ಹೆದ್ದಾರಿ ಎಂದು ಊಹಿಸಿಕೊಳ್ಳಿ ಮತ್ತು ಬಿಜಿಪಿ ಸಂಕೇತಗಳನ್ನು ಅದಕ್ಕೆ ಸಂಪರ್ಕಿಸುವ ರಸ್ತೆಗಳೆಂದು ಅಂದುಕೊಳ್ಳೋಣ. ಇಲ್ಲಿ ಪ್ರತಿಯೊಂದು ರಸ್ತೆಯೂ ಒಂದು ನಿರ್ದಿಷ್ಟ ಸೇವೆಗೆ ದಾರಿಯಿರುತ್ತದೆ. ಒಂದು ವೇಳೆ ಯಾವುದೋ ಒಂದು ಸಂಪರ್ಕ ರಸ್ತೆಯು ತನ್ನ ಜಾಗವನ್ನು ಮತ್ತೊಂದು ಸೇವೆಯ ರಸ್ತೆ ಎಂದು ತಪ್ಪಾಗಿ ಜಾಹೀರಾತು ಮಾಡಿದರೆ, ಹೆದ್ದಾರಿಯಲ್ಲಿ ಹೋಗುವ ಕೆಲವು ವಾಹನಗಳು ಆ ಸುಳ್ಳು ಬೋರ್ಡ್ ಅನ್ನು ನಂಬಿ ಆ ನಿರ್ದಿಷ್ಟ ರಸ್ತೆಯ ಕಡೆಗೆ ತಿರುಗುತ್ತವೆ.
'AS18101' ಎಂಬ ನೆಟ್ವರ್ಕ್ ಟೆಲಿಗ್ರಾಮ್ ನ ಐಪಿ ವಿಳಾಸದ ಜಾಗವನ್ನು ಜಾಗತಿಕ ರೂಟಿಂಗ್ ಟೇಬಲ್ ಗೆ ತಪ್ಪಾಗಿ ಪ್ರಕಟಿಸಿದೆ ಎಂದು ಡುರೊವ್ ಆರೋಪಿಸಿದ್ದಾರೆ. ಒಂದು ವೇಳೆ ಇಂಟರ್ನೆಟ್ ಮತ್ತು ಟೆಲಿಕಾಂ ಕಂಪೆನಿಗಳು ಈ ನೆಟ್ವರ್ಕ್ ನೀಡಿದ ಬಿಜಿಪಿ ಮಾಹಿತಿಯನ್ನು ಒಪ್ಪಿಕೊಂಡರೆ, ಇಂಟರ್ನೆಟ್ ಟ್ರಾಫಿಕ್ ಟೆಲಿಗ್ರಾಮ್ ಸರ್ವರ್ ತಲುಪುವ ಬದಲು ಬೇರೆ ಕಡೆಗೆ ತಿರುಗುತ್ತದೆ. ಇದರ ನೇರ ಪರಿಣಾಮವಾಗಿ ಜಗತ್ತಿನಾದ್ಯಂತ ಟೆಲಿಗ್ರಾಮ್ ಸೇವೆಗಳು ಸ್ಥಗಿತಗೊಳ್ಳುತ್ತವೆ.
►ಟೆಲಿಗ್ರಾಮ್ ಗೆ ನಿರ್ಬಂಧ ಏಕೆ?
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ನಡೆಸುವ ಜವಾಬ್ದಾರಿ ಹೊಂದಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಕೋರಿಕೆಯ ಮೇರೆಗೆ, ಐಟಿ ಸಚಿವಾಲಯವು ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಅನ್ನು ನಿರ್ಬಂಧಿಸಲು ಮಂಗಳವಾರ ಆದೇಶ ಹೊರಡಿಸಿದೆ.
ಮೇ 3ರಂದು ನಡೆದಿದ್ದ ಪರೀಕ್ಷೆಯ ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೊಳ್ಳಲು ಟೆಲಿಗ್ರಾಮ್ ವೇದಿಕೆಯಾಗಿದೆ ಎಂಬ ಆರೋಪದ ಮೇಲೆ ಈ ನಿಷೇಧಕ್ಕೆ ಶಿಫಾರಸು ಮಾಡಲಾಗಿತ್ತು. ಆ ಸೋರಿಕೆಯಿಂದಾಗಿ ಅಂದಿನ ಪರೀಕ್ಷೆ ರದ್ದಾಗಿತ್ತು. ಅಲ್ಲದೆ, ಜೂನ್ 21ಕ್ಕೆ ನಿಗದಿಯಾಗಿರುವ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳೂ ತಮ್ಮ ಬಳಿ ಇವೆ ಎಂದು ಈ ಆ್ಯಪ್ ನಲ್ಲಿನ ಕೆಲವು ಖಾತೆಗಳು ವಾದಿಸುತ್ತಿವೆ.
ಈ ಬಗ್ಗೆ ಪ್ರಕಟಣೆ ನೀಡಿರುವ NTA, ಕಳೆದ ಕೆಲವು ವಾರಗಳಿಂದ ಟೆಲಿಗ್ರಾಮ್ ಚಾನೆಲ್ ಗಳು ಬಹಿರಂಗವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ನೀಡುವುದಾಗಿ ನಂಬಿಸಿ ಅಭ್ಯರ್ಥಿಗಳು ಮತ್ತು ಅವರ ಕುಟುಂಬಸ್ಥರಿಂದ ಕೆಲವು ಸಾವಿರದಿಂದ ಹಿಡಿದು ಹಲವಾರು ಲಕ್ಷ ರೂಪಾಯಿಗಳವರೆಗೆ ಹಣಕ್ಕೆ ಬೇಡಿಕೆ ಇಡುತ್ತಿವೆ ಎಂದು ತಿಳಿಸಿದೆ.
NTA ಪ್ರಕಾರ, ಇವುಗಳಲ್ಲಿ ಕೆಲವು ಚಾನೆಲ್ ಗಳು ತಮ್ಮ ಉದ್ದೇಶವನ್ನು ಹೆಸರುಗಳ ಮೂಲಕವೇ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದವು. ಉದಾಹರಣೆಗೆ: “PAPER LEAKED NEET”, “Re-NEET 2026”, “Private Mafia” ಮತ್ತು “REE NEET MAFIAA”. ಆದರೆ, ಇಂತಹ ಯಾವುದೇ ಪ್ರಶ್ನೆ ಪತ್ರಿಕೆಗಳು "ಸುರಕ್ಷಿತ ಪರೀಕ್ಷಾ ವ್ಯವಸ್ಥೆಯ ಹೊರಗೆ" ಲಭ್ಯವಿಲ್ಲ ಎಂದು NTA ಸ್ಪಷ್ಟಪಡಿಸಿದೆ.
ಜೊತೆಗೆ, ಜೂನ್ 30ರವರೆಗೆ ತನ್ನ 'ಮೆಸೇಜ್ ಎಡಿಟಿಂಗ್' (ಸಂದೇಶ ತಿದ್ದುಪಡಿ) ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವಂತೆ ಸರ್ಕಾರವು ಟೆಲಿಗ್ರಾಮ್ ಆ್ಯಪ್ಗೆ ನಿರ್ದೇಶನ ನೀಡಿದೆ. NTA ಪ್ರಕಾರ, ಟೆಲಿಗ್ರಾಮ್ ನಲ್ಲಿರುವ ಪ್ರಸ್ತುತ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವು ಚಾನೆಲ್ ಅಡ್ಮಿನ್ಗೆ ತಾವು ಈ ಹಿಂದೆ ಕಳುಹಿಸಿದ ಸಂದೇಶದ ವಿಷಯವನ್ನು ಬದಲಾಯಿಸಲು ಅನುಮತಿ ನೀಡುತ್ತದೆ. ಇದರಲ್ಲಿ ಪಿಡಿಎಫ್ಗಳಂತಹ ಲಗತ್ತಿಸಲಾದ ಫೈಲ್ ಗಳನ್ನು ಬದಲಾಯಿಸಿದರೂ ಸಹ, ಸಂದೇಶ ಕಳುಹಿಸಿದ ಮೂಲ ಸಮಯ ಹಾಗೆಯೇ ಇರುತ್ತದೆ. ಇದು ತನಿಖೆಗೆ ಅಡ್ಡಿಯಾಗಬಹುದು ಎನ್ನಲಾಗಿದೆ.
►ಟೆಲಿಗ್ರಾಮ್ ನಿರ್ಬಂಧದ ಬಗ್ಗೆ ಇವರೇನಂತಾರೆ?
ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ಈ ನಿರ್ಬಂಧಗಳನ್ನು "ಬ್ಯಾಂಡ್-ಏಡ್ ಪರಿಹಾರ" ಮತ್ತು "ಅತಿರೇಕದ ಕ್ರಮ" ಎಂದು ಬಣ್ಣಿಸಿದೆ. ದೇಶಾದ್ಯಂತ ಜಾರಿಗೆ ತಂದಿರುವ ಈ ನಿರ್ಧಾರವು ಸರ್ಕಾರದ ಒಪ್ಪಿಗೆಯಂತೆಯೇ ಸಾಂವಿಧಾನಿಕ ಕಳವಳಗಳನ್ನು ಹುಟ್ಟುಹಾಕುವ ಒಂದು "ಮೊಂಡಾದ" ಕ್ರಮವಾಗಿದೆ ಎಂದು ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಕೇಂದ್ರ ಸರ್ಕಾರದ ಈ ನಿರ್ಧಾರ ಭಾರೀ ಚರ್ಚೆಗೆ ನಾಂದಿ ಹಾಡಿದೆ. CBSE ಸೇರಿದಂತೆ ಪ್ರಮುಖ ಸೈಬರ್ ಭದ್ರತಾ ವಿಷಯಗಳಲ್ಲಿ ಕೆಲಸ ಮಾಡಿರುವ ಮತ್ತು ಪ್ರಸ್ತುತ ಐಐಟಿ ಕಾನ್ಪುರದ C3iHubನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಥಿಕಲ್ ಹ್ಯಾಕರ್ ನಿಸರ್ಗ ಅಧಿಕಾರಿ ಅವರು, ಟೆಲಿಗ್ರಾಮ್ ನಿಷೇಧಿಸುವುದು ಪರಿಣಾಮಕಾರಿಯಲ್ಲ ಎಂದು ಹೇಳಿದ್ದಾರೆ.
"ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗದೆ, ಕೊನೆಗೆ ಟೆಲಿಗ್ರಾಮ್ ಅನ್ನು ನಿಷೇಧಿಸಲಾಗಿದೆ. ಆದರೆ ಟೆಲಿಗ್ರಾಮ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಸಾಧ್ಯವೇ ಇಲ್ಲ. ಪ್ರಾಕ್ಸಿಗಳು ಮತ್ತು ಇತರ ಪರ್ಯಾಯ ಮಾರ್ಗಗಳ ಮೂಲಕ ಜನರು ಇದನ್ನು ಸುಲಭವಾಗಿ ಬಳಸುವಂತೆ ಟೆಲಿಗ್ರಾಮ್ ಅನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.
ಟೆಲಿಗ್ರಾಮ್ ಚಾನೆಲ್ ಗಳೊಂದಿಗಿನ ನಿಜವಾದ ಸಮಸ್ಯೆ ಕೇವಲ ಅಸಲಿ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲ (ಅದನ್ನು ಬೇರೆ ವಿಧಾನಗಳ ಮೂಲಕವೂ ಮಾಡಬಹುದು), ಬದಲಿಗೆ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಅಸಲಿಯಂತೆ ಬಿಂಬಿಸಿ ಹರಡುವ ವದಂತಿಗಳು ದೊಡ್ಡ ಗೊಂದಲವನ್ನು ಸೃಷ್ಟಿಸುತ್ತವೆ. ಟೆಲಿಗ್ರಾಮ್ನಲ್ಲಿ ಒಂದು ವಿಶೇಷ ವೈಶಿಷ್ಟ್ಯವಿದೆ. ಅದೇನೆಂದರೆ, ಯಾವುದೇ ಸಂದೇಶವನ್ನು ತಿದ್ದಿದರೂ ಅದನ್ನು ತಿದ್ದಲಾಗಿದೆ ಎಂಬ ಸುಳಿವೇ ಸಿಗದಂತೆ ಮರೆಮಾಚಬಹುದು. ಇದು ಅತ್ಯಂತ ಅಪಾಯಕಾರಿ. ಬೇರೆ ಯಾವುದೇ ಪ್ರಮುಖ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವೈಶಿಷ್ಟ್ಯವಿಲ್ಲ ಎಂದು ಐಐಟಿ ಕಾನ್ಪುರದ ನಿರ್ದೇಶಕ ಮಣೀಂದ್ರ ಅಗರ್ವಾಲ್ ಹೇಳಿದ್ದಾರೆ.
CBSEಯ ಆನ್ಸ್ಕ್ರೀನ್ ಮೌಲ್ಯಮಾಪನ ವ್ಯವಸ್ಥೆಯ ಲೋಪದೋಷಗಳ ವಿರುದ್ಧ ಧ್ವನಿ ಎತ್ತಿದ್ದ 18 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್, ಇಡೀ ಸಾಮಾಜಿಕ ಮಾಧ್ಯಮವನ್ನೇ ಮುಚ್ಚುವ ಸರ್ಕಾರದ ತರ್ಕವನ್ನು ಪ್ರಶ್ನಿಸಿದ್ದಾರೆ.
"ಕೇವಲ ಒಂದು ಸಂವಹನ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹರಡುವ ಅಂಶಗಳಿವೆ ಎಂಬ ಕಾರಣಕ್ಕೆ, ನಾವು ಅದನ್ನು ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಿದ್ದೇವೆ. ಇದೇ ರೀತಿಯ ಕ್ರಮವನ್ನು ವಾಟ್ಸಾಪ್ ಅಥವಾ ಭಾರತೀಯ ಮಾಧ್ಯಮಗಳ ವಿರುದ್ಧ ಏಕೆ ತೆಗೆದುಕೊಳ್ಳಲಿಲ್ಲ? ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಎಲ್ಲಾ ಮಾಧ್ಯಮಗಳನ್ನು ಹೀಗೆಯೇ ಮುಚ್ಚಬೇಕೇ?" ಎಂದು ಅವರು ಪ್ರಶ್ನಿಸಿದ್ದಾರೆ.