ಕೆಮ್ಮಿನ ಸಿರಪ್ ಮೇಲೆ ಭಾರತ ಹಠಾತ್ ನಿಯಂತ್ರಣ ಹೇರಿದ್ದೇಕೆ?
ಸಾಂದರ್ಭಿಕ ಚಿತ್ರ | Photo Credit : magnific.com
ಭಾರತ ಸರ್ಕಾರವು ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಇನ್ನುಮುಂದೆ ಸಿರಪ್ (ದ್ರವ) ರೂಪದ ಔಷಧಗಳನ್ನು ಸುಲಭವಾಗಿ ಮಾರಾಟ ಮಾಡುವಂತಿಲ್ಲ. ವೈದ್ಯರ ಚೀಟಿ ಇಲ್ಲದೆ ಕೆಮ್ಮಿನ ಸಿರಪ್ ಹಾಗೂ ಇತರ ದ್ರವ ಔಷಧಗಳನ್ನು ನೇರವಾಗಿ ಅಂಗಡಿಗಳಲ್ಲಿ ಖರೀದಿಸುವ ಪದ್ಧತಿಗೆ ಈ ನಿರ್ಧಾರ ಅಧಿಕೃತವಾಗಿ ಮುಕ್ತಾಯ ಹಾಡಿದೆ. 1945ರ ಡ್ರಗ್ಸ್ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಮೂಲಕ ಈ ಆದೇಶ ಹೊರಡಿಸಲಾಗಿದೆ. ಭಾರತ ಹಾಗೂ ವಿದೇಶಗಳಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತದ ಔಷಧ ನಿಯಂತ್ರಣ ಮಂಡಳಿ ಕೈಗೊಂಡ ಅತ್ಯಂತ ಕಠಿಣ ಸುರಕ್ಷತಾ ಕ್ರಮಗಳಲ್ಲಿ ಇದು ಒಂದಾಗಿದೆ. ಇದುವರೆಗೆ ಕೆಮ್ಮಿನ ಸಿರಪ್ ಗಳನ್ನು ಸಾಮಾನ್ಯ ಗೃಹೋಪಯೋಗಿ ಔಷಧದಂತೆ ನೋಡಲಾಗುತ್ತಿತ್ತು. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಸಾಮಾನ್ಯ ಅಂಗಡಿಗಳಲ್ಲೂ ಇವು ಸುಲಭವಾಗಿ ಸಿಗುತ್ತಿದ್ದವು. ಆದರೆ ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಕಠಿಣ ಕಣ್ಗಾವಲು ಅಗತ್ಯ ಎಂದು ನಿಯಂತ್ರಕರು ಈಗ ಹೇಳಿದ್ದಾರೆ. ಜನರು ಸ್ವಯಂ ಔಷಧೋಪಚಾರ ಮಾಡಿಕೊಳ್ಳುವುದನ್ನು ತಡೆಯುವುದು, ಔಷಧ ವಿತರಣೆಯಲ್ಲಿ ಹೊಣೆಗಾರಿಕೆ ಹೆಚ್ಚಿಸುವುದು ಮತ್ತು ಜಗತ್ತಿಗೆ ಔಷಧ ಪೂರೈಸುವ ಭಾರತದ ಫಾರ್ಮಾ ಉದ್ಯಮದ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ.
►ಭಾರತ ಈ ನಿಯಮಗಳನ್ನು ಬದಲಿಸಿದ್ದೇಕೆ?
ಭಾರತದಲ್ಲಿ ತಯಾರಾದ ಕೆಮ್ಮಿನ ಸಿರಪ್ ಗಳಲ್ಲಿ ಕಲುಷಿತ ಅಂಶಗಳು ಪತ್ತೆಯಾದದ್ದೇ ಈ ನಿರ್ಧಾರಕ್ಕೆ ಮುಖ್ಯ ಕಾರಣ. 2022ರಿಂದೀಚೆಗೆ ಭಾರತದಲ್ಲಿ ತಯಾರಾದ ಸಿರಪ್ ಗಳನ್ನು ಸೇವಿಸಿ ಆಫ್ರಿಕಾ ಮತ್ತು ಮಧ್ಯ ಏಷ್ಯಾದಲ್ಲಿ 140ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದ್ದಲ್ಲದೆ, ‘ಫಾರ್ಮಸಿ ಆಫ್ ದಿ ವರ್ಲ್ಡ್’ ಎಂಬ ಭಾರತದ ಹೆಮ್ಮೆಯ ಹೆಸರಿಗೂ ಧಕ್ಕೆ ತಂದಿದೆ.
ಇಂತಹ ಮೊದಲ ದುರಂತ 2022ರಲ್ಲಿ ಆಫ್ರಿಕಾದ ದಿ ಗ್ಯಾಂಬಿಯಾದಲ್ಲಿ ಸಂಭವಿಸಿತು. ಅಲ್ಲಿ ಭಾರತದ ಸಿರಪ್ ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಅವುಗಳಲ್ಲಿ ಅಪಾಯಕಾರಿ ಮಟ್ಟದ ‘ಡೈಎಥಿಲಿನ್ ಗ್ಲೈಕಾಲ್’ (DEG) ಮತ್ತು ‘ಎಥಿಲಿನ್ ಗ್ಲೈಕಾಲ್’ (EG) ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಎಚ್ಚರಿಕೆ ನೀಡಿತ್ತು. ಈ ವಿಷಕಾರಿ ಕೈಗಾರಿಕಾ ರಾಸಾಯನಿಕಗಳು ಮಕ್ಕಳಲ್ಲಿ ತೀವ್ರ ಕಿಡ್ನಿ ಕಾಯಿಲೆ ಮತ್ತು ನರಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಿ ಜೀವಕ್ಕೆ ಮಾರಕವಾಗಬಲ್ಲವು.
ಇದಾದ ಬೆನ್ನಲ್ಲೇ, ಉಜ್ಬೇಕಿಸ್ತಾನ್ ನಲ್ಲೂ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಎಚ್ಚರಿಕೆ ಹೊರಡಿಸಿತು. ಅಲ್ಲಿಯೂ ಪ್ರಯೋಗಾಲಯದ ತಪಾಸಣೆಯಲ್ಲಿ ಭಾರತದಲ್ಲಿ ತಯಾರಾದ ಸಿರಪ್ ಗಳಲ್ಲಿ ತೀವ್ರ ಅಪಾಯಕಾರಿ ಮಟ್ಟದ DEG ಮತ್ತು EG ರಾಸಾಯನಿಕಗಳು ಇರುವುದು ದೃಢಪಟ್ಟಿತ್ತು.
►ದೇಶದಲ್ಲೂ ಎಚ್ಚರಿಕೆಯ ಗಂಟೆ
ಅಂತರರಾಷ್ಟ್ರೀಯ ಮಟ್ಟದ ಘಟನೆಗಳು ಭಾರೀ ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಸ್ವತಃ ಭಾರತದೊಳಗೂ ಇಂತಹ ಕಲುಷಿತ ಸಿರಪ್ ಸೇವನೆಯಿಂದ ಮಕ್ಕಳು ಸಾವನ್ನಪ್ಪಿದ ವರದಿಗಳು ಬಂದಾಗ ಆತಂಕ ಮತ್ತಷ್ಟು ತೀವ್ರಗೊಂಡಿತು.
2025ರಲ್ಲಿ ಮಧ್ಯಪ್ರದೇಶದಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿದ ಹಲವು ಮಕ್ಕಳು ಸಾವಿಗೀಡಾದ ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದರು. ಆ ಸಿರಪ್ನಲ್ಲಿ ವಿಷಕಾರಿ ಮಟ್ಟದ ‘ಡೈಎಥಿಲಿನ್ ಗ್ಲೈಕಾಲ್’ ಇರುವುದು ಪತ್ತೆಯಾಗಿತ್ತು. ಇದರ ನಂತರ ವಿಶ್ವ ಆರೋಗ್ಯ ಸಂಸ್ಥೆ ಕಲುಷಿತ ದ್ರವ ಔಷಧಗಳ ಬಗ್ಗೆ ಜಾಗತಿಕ ಎಚ್ಚರಿಕೆ ನೀಡಿ, ಸಿರಪ್ ರೂಪದ ಔಷಧಗಳ ಮೇಲೆ ಕಣ್ಗಾವಲು ಹೆಚ್ಚಿಸುವಂತೆ ವಿಶ್ವದಾದ್ಯಂತದ ನಿಯಂತ್ರಕರಿಗೆ ಕರೆ ನೀಡಿತ್ತು.
ಈ ಘಟನೆಯು ಔಷಧ ತಯಾರಿಕೆಯ ಗುಣಮಟ್ಟ ನಿಯಂತ್ರಣ (Quality Control) ಮತ್ತು ಮಾರುಕಟ್ಟೆಗೆ ಬಂದ ನಂತರದ ತಪಾಸಣಾ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಎತ್ತಿ ತೋರಿಸಿತು. ಔಷಧ ತಯಾರಿಕೆಯಲ್ಲಿ ಬಳಸುವ ‘ಗ್ಲಿಸರಿನ್’ನಂತಹ ದ್ರಾವಕಗಳನ್ನು ಸರಿಯಾಗಿ ಪರೀಕ್ಷಿಸದಿದ್ದಾಗ ಅಥವಾ ಅವುಗಳ ಬದಲಿಗೆ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿದಾಗ DEG ಮತ್ತು EGನಂತಹ ರಾಸಾಯನಿಕಗಳ ಕಲುಷಿತಗೊಳ್ಳುವಿಕೆ ಸಂಭವಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ರಾಸಾಯನಿಕಗಳು ಮಕ್ಕಳ ಕಿಡ್ನಿ ಮತ್ತು ನರಮಂಡಲವನ್ನು ಸಂಪೂರ್ಣವಾಗಿ ಹಾನಿಗೊಳಿಸುವುದರಿಂದ, ಇವುಗಳ ಅತ್ಯಲ್ಪ ಪ್ರಮಾಣವೂ ಜೀವಕ್ಕೆ ಮಾರಕವಾಗಬಲ್ಲದು.
►ಶೆಡ್ಯೂಲ್ ಕೆ (Schedule K) ಎಂದರೇನು? ಅದು ಏಕೆ ಮುಖ್ಯ?
ಇತ್ತೀಚಿನ ಈ ಮಹತ್ವದ ಬದಲಾವಣೆಯು 1945ರ ಡ್ರಗ್ಸ್ ನಿಯಮಾವಳಿಗಳ ‘Schedule K’ ಸುತ್ತ ಕೇಂದ್ರಿಕೃತವಾಗಿದೆ.
ದಶಕಗಳಿಂದ ಸಾಮಾನ್ಯ ಗೃಹೋಪಯೋಗಿ ಔಷಧಗಳು ಎಂದು ವರ್ಗೀಕರಿಸಲಾದ ಕೆಲವು ನಿರ್ದಿಷ್ಟ ಔಷಧಿಗಳಿಗೆ ಅವುಗಳ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದ ಕೆಲವು ಕಠಿಣ ನಿಯಮಗಳಿಂದ ವಿನಾಯಿತಿ ನೀಡಲಾಗಿತ್ತು. ಈ ವಿನಾಯಿತಿಯ ಕಾರಣದಿಂದಾಗಿ, ಕೆಮ್ಮಿನ ಸಿರಪ್ ಗಳು ಸೇರಿದಂತೆ ದ್ರವ ರೂಪದ ಔಷಧಗಳನ್ನು ಸೀಮಿತ ಲೈಸೆನ್ಸ್ ಹೊಂದಿರುವ ಸಾಮಾನ್ಯ ಅಂಗಡಿಗಳಲ್ಲೂ ಮಾರಾಟ ಮಾಡಲು ಅವಕಾಶವಿತ್ತು. ವಿಶೇಷವಾಗಿ ಪೂರ್ಣ ಪ್ರಮಾಣದ ಮೆಡಿಕಲ್ ಸ್ಟೋರ್ ಗಳು ಇಲ್ಲದ ಹಳ್ಳಿಗಳು ಮತ್ತು ದೂರದ ಗ್ರಾಮೀಣ ಪ್ರದೇಶಗಳಲ್ಲಿ ಈ ಪದ್ಧತಿ ಇತ್ತು.
ಆದರೆ ಹೊಸ ತಿದ್ದುಪಡಿಯ ಪ್ರಕಾರ, ಸಿರಪ್ ರೂಪದ ಔಷಧಗಳನ್ನು ಈ ವಿನಾಯಿತಿ ಪಟ್ಟಿಯಿಂದ ಹೊರಗಿಡಲಾಗಿದೆ. ಇದರ ಪರಿಣಾಮವಾಗಿ, ಇನ್ನುಮುಂದೆ ಎಲ್ಲಾ ಸಿರಪ್ ಔಷಧಗಳನ್ನು ಅಧಿಕೃತ ಲೈಸೆನ್ಸ್ ಹೊಂದಿರುವ ಮೆಡಿಕಲ್ ಸ್ಟೋರ್ ಗಳ ಮೂಲಕವೇ ಮಾರಾಟ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಇದಕ್ಕೆ ನೋಂದಾಯಿತ ವೈದ್ಯರ ಚೀಟಿ ಕಡ್ಡಾಯವಾಗಿರುತ್ತದೆ. ಆದರೆ ಮಾತ್ರೆಗಳು ಮತ್ತು ಲೋಸೆಂಜ್ಗಳು ಎಂದಿನಂತೆ ವಿನಾಯಿತಿ ಪಟ್ಟಿಯಲ್ಲೇ ಮುಂದುವರಿಯಲಿವೆ.
ಈ ಬದಲಾವಣೆಯು ಔಷಧ ಪೂರೈಕೆಯ ಸಂಪೂರ್ಣ ಜಾಲದಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ ಮತ್ತು ಔಷಧಗಳು ನಿಯಂತ್ರಿತ ಮಾರ್ಗಗಳ ಮೂಲಕವೇ ಮಾರಾಟವಾಗುವುದನ್ನು ಖಚಿತಪಡಿಸುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
►ಸ್ವಯಂ ಔಷಧೋಪಚಾರದ ಆತಂಕ
ಈ ನಿಯಮ ತಿದ್ದುಪಡಿಯು ಕೇವಲ ಕಲುಷಿತ ಔಷಧಗಳನ್ನು ತಡೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದಲ್ಲಿ ಜನರು ವೈದ್ಯರನ್ನು ಕೇಳದೆ ತಾವಾಗಿಯೇ ಕೆಮ್ಮಿನ ಸಿರಪ್ ಗಳನ್ನು ಕೊಂಡುಕೊಂಡು ಕುಡಿಯುವ ಅಭ್ಯಾಸ ವ್ಯಾಪಕವಾಗಿದೆ ಎಂದು ವೈದ್ಯರು ದೀರ್ಘಕಾಲದಿಂದಲೂ ಎಚ್ಚರಿಸುತ್ತಿದ್ದರು. ಅನೇಕ ಗ್ರಾಹಕರು ದೀರ್ಘಕಾಲದ ಕೆಮ್ಮು, ಅಲರ್ಜಿ ಅಥವಾ ಉಸಿರಾಟದ ಸೋಂಕುಗಳಿಗೆ ವೈದ್ಯರ ಸಲಹೆ ಪಡೆಯದೆಯೇ ಪದೇ ಪದೇ ಸಿರಪ್ ಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ ಈ ರೋಗಲಕ್ಷಣಗಳಿಗೆ ಸೂಕ್ತ ವೈದ್ಯಕೀಯ ತಪಾಸಣೆಯ ಅಗತ್ಯವಿರುತ್ತದೆ.
ಕೆಲವು ಕೆಮ್ಮಿನ ಸಿರಪ್ ಗಳಲ್ಲಿ ಆಂಟಿಹಿಸ್ಟಮೈನ್ ಗಳು, ಬ್ರಾಂಕೋಡೈಲೇಟರ್ ಗಳು ಅಥವಾ ಕೊಡೈನ್ ನಂತಹ ಮಾದಕ ದ್ರವ್ಯದ ಅಂಶಗಳಿರುತ್ತವೆ. ಇವು ಅಡ್ಡಪರಿಣಾಮಗಳನ್ನು ಬೀರಬಹುದು, ಇತರ ಔಷಧಗಳೊಂದಿಗೆ ಸೇರಿ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಅಥವಾ ದುರ್ಬಳಕೆಯಾಗಬಹುದು. ಹಾಗಾಗಿ, ಇವುಗಳಿಗೆ ವೈದ್ಯರ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸುವುದರಿಂದ ಔಷಧದ ದುರುಪಯೋಗವನ್ನು ತಡೆಯಬಹುದು ಮತ್ತು ಮೂಲ ಕಾಯಿಲೆಗೆ ಸರಿಯಾದ ಚಿಕಿತ್ಸೆ ಸಿಗುವಂತೆ ಮಾಡಬಹುದು ಎಂದು ಸಾರ್ವಜನಿಕ ಆರೋಗ್ಯ ತಜ್ಞರು ವಾದಿಸುತ್ತಾರೆ.
►ಔಷಧ ಗುಣಮಟ್ಟದ ಮೇಲೆ ಭಾರತದ ವ್ಯಾಪಕ ಕಣ್ಗಾವಲು
ವೈದ್ಯರ ಚೀಟಿಯನ್ನು ಕಡ್ಡಾಯಗೊಳಿಸಿರುವುದು ಔಷಧ ನಿಯಂತ್ರಣ ಮಂಡಳಿ ಕೈಗೊಂಡಿರುವ ವ್ಯಾಪಕ ಕ್ರಮಗಳ ಒಂದು ಭಾಗ ಮಾತ್ರವಾಗಿದೆ. ಭಾರತದ ಔಷಧ ನಿಯಂತ್ರಕರ ಪ್ರಕಾರ, ಕಲುಷಿತ ಔಷಧಗಳ ಆತಂಕ ಎದುರಾದ ಬೆನ್ನಲ್ಲೇ ದೇಶದ ಸುಮಾರು ಶೇ. 90ರಷ್ಟು ಕೆಮ್ಮಿನ ಸಿರಪ್ ತಯಾರಿಕಾ ಘಟಕಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಮತ್ತು ನಿಯಮಗಳನ್ನು ಪಾಲಿಸದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ, ಔಷಧ ತಯಾರಿಕಾ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುವುದನ್ನು ಅಧಿಕಾರಿಗಳು ಕಡ್ಡಾಯಗೊಳಿಸಿದ್ದು, ಫಾರ್ಮಾ ವಲಯದಾದ್ಯಂತ ಗುಣಮಟ್ಟ ನಿಯಂತ್ರಣ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
ವಿವಿಧ ದೇಶಗಳಲ್ಲಿ ಇಂತಹ ಕಲುಷಿತ ಔಷಧ ಪ್ರಕರಣಗಳು ಸರಣಿಯಾಗಿ ವರದಿಯಾಗುತ್ತಲೇ ಇರುವುದರಿಂದ, ದ್ರವ ರೂಪದ ಔಷಧಗಳ ಮೇಲಿನ ಕಣ್ಗಾವಲನ್ನು ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳ ನಿಯಂತ್ರಕರಿಗೆ ಪದೇ ಪದೇ ಒತ್ತಾಯಿಸಿದೆ. ಕಲುಷಿತ ಉತ್ಪನ್ನಗಳು ಅಧಿಕೃತ ಹಾಗೂ ಅನಧಿಕೃತ ಪೂರೈಕೆ ಜಾಲಗಳೆರಡರ ಮೂಲಕವೂ ಮಾರುಕಟ್ಟೆಗೆ ನುಸುಳುವ ಸಾಧ್ಯತೆ ಇರುವುದರಿಂದ, ಕಟ್ಟುನಿಟ್ಟಿನ ನಿಗಾ ವಹಿಸುವುದು ಅತ್ಯಗತ್ಯ ಎಂದು ಸಂಸ್ಥೆ ಎಚ್ಚರಿಸಿದೆ.
ಸಿರಪ್ ರೂಪದ ಔಷಧಗಳನ್ನು ವೈದ್ಯರ ಚೀಟಿ ಇಲ್ಲದೆ ನೇರವಾಗಿ ಮಾರಾಟ ಮಾಡುವುದನ್ನು ನಿಷೇಧಿಸಿರುವ ಭಾರತದ ಈ ನಿರ್ಧಾರವು ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿನ ಒಂದು ಪ್ರಮುಖ ಬದಲಾವಣೆಯಾಗಿದೆ. ಈ ಹಿಂದೆ ವೈದ್ಯರ ಸಲಹೆ ಇಲ್ಲದೆಯೇ ಸುಲಭವಾಗಿ ಕೆಮ್ಮಿನ ಸಿರಪ್ ಖರೀದಿಸುತ್ತಿದ್ದ ಕೆಲವು ಗ್ರಾಹಕರಿಗೆ ಈ ಹೊಸ ನಿಯಮದಿಂದ ತಾತ್ಕಾಲಿಕವಾಗಿ ಅನನುಕೂಲವಾಗಬಹುದಾದರೂ, ಇದರ ದೀರ್ಘಕಾಲದ ಪ್ರಯೋಜನಗಳು ಅತ್ಯಂತ ಮಹತ್ವದ್ದಾಗಿವೆ ಎಂದು ನಿಯಂತ್ರಕರು ವಾದಿಸುತ್ತಾರೆ.
ಭಾರತ ಮತ್ತು ವಿದೇಶಗಳಲ್ಲಿ ಮಕ್ಕಳ ಜೀವ ಬಲಿಪಡೆದ ಕಲುಷಿತ ಔಷಧಗಳ ಸರಣಿ ದುರಂತಗಳಿಂದ ಕಲಿತ ಪಾಠಗಳೇ ಈ ಹೊಸ ನೀತಿ ಜಾರಿಗೆ ತರಲು ಕಾರಣ. ಉತ್ಪಾದನಾ ವಲಯದಲ್ಲಿ ತರಲಾಗಿರುವ ಸುಧಾರಣೆಗಳು ಮತ್ತು ಕಠಿಣ ತಪಾಸಣೆಗಳ ಜೊತೆಗೆ, ಈ ಹೊಸ ತಿದ್ದುಪಡಿಯು ಔಷಧಗಳ ಸುರಕ್ಷತೆಯನ್ನು ಹೆಚ್ಚಿಸುವ, ಸ್ವಯಂ ಔಷಧೋಪಚಾರವನ್ನು ಕಡಿಮೆ ಮಾಡುವ ಮತ್ತು ಭಾರತೀಯ ಔಷಧಗಳ ಗುಣಮಟ್ಟದ ಮೇಲಿನ ಜಾಗತಿಕ ವಿಶ್ವಾಸವನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿದೆ.
ಗ್ರಾಹಕರಿಗೆ ಇಲಾಖೆ ನೀಡುತ್ತಿರುವ ಸಂದೇಶ ಸ್ಪಷ್ಟವಾಗಿದೆ. ಕೆಮ್ಮಿನ ಸಿರಪ್ ಗಳು ಮೇಲ್ನೋಟಕ್ಕೆ ನಿರುಪದ್ರವಿಯಂತೆ ಕಂಡರೂ, ಅವು ಇತರ ಔಷಧಗಳಷ್ಟೇ ಎಚ್ಚರಿಕೆ ಮತ್ತು ಕಣ್ಗಾವಲು ಬಯಸುವ ಗಂಭೀರ ಔಷಧಗಳಾಗಿವೆ.