ಚಂಡಿಪುರ ವೈರಸ್ ಪ್ರತಿ ಮಳೆಗಾಲಕ್ಕೆ ಮರಳುವುದೇಕೆ? ಮಕ್ಕಳಿಗೆ ಅಪಾಯ ತಡೆಯುವುದು ಹೇಗೆ?

Update: 2026-08-10 16:36 IST

ಸಾಂದರ್ಭಿಕ ಚಿತ್ರ (AI)

ರೋಗ ಲಕ್ಷಣಗಳಲ್ಲಿ ಆರಂಭಿಕ ಜ್ವರದ ನಂತರ ಎನ್ಸೆಫಾಲಿಟಿಸ್ ಸಿಂಡ್ರೋಮ್ (AES) ಕಂಡುಬಂದು ಮೆದುಳಿನ ತೀವ್ರ ಉರಿಯೂತವಾಗಿ ಬೆಳೆಯುತ್ತದೆ. ಸರಿಯಾದ ಸಮಯಕ್ಕೆ ಗುರುತಿಸದೆ ಇದ್ದರೆ ಮತ್ತು ತಕ್ಷಣ ನಿರ್ವಹಿಸದೆ ಇದ್ದಲ್ಲಿ 24ರಿಂದ 48 ಗಂಟೆಗಳ ಒಳಗೆ ರೋಗ ತೀವ್ರವಾಗಿ, ಪ್ರಜ್ಞಾಹೀನತೆ ಮತ್ತು ಸಾವಿಗೂ ಕಾರಣವಾಗಬಹುದು.

ಇತ್ತೀಚೆಗೆ ಗುಜರಾತ್‌ ನಲ್ಲಿ ಚಂಡಿಪುರ ವೈರಸ್ ಸೋಂಕಿನಿಂದ ಸಂಭವಿಸಿದ ಮಕ್ಕಳ ಸಾವುಗಳು ದಶಕಗಳಿಂದ ಭಾರತದ ಕೆಲವು ಭಾಗಗಳನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗದತ್ತ ಜನರ ಗಮನ ಸೆಳೆದಿವೆ. ಬಹುತೇಕ ಪ್ರತಿ ಮಳೆಗಾಲದಲ್ಲೂ ಸುದ್ದಿ ಕಾಣಿಸಿಕೊಳ್ಳುತ್ತಿದ್ದರೂ ಚಂಡಿಪುರ ವೈರಸ್ ಹೊಸ ಸೋಂಕಲ್ಲ. 1965ರಲ್ಲಿ ಮಹಾರಾಷ್ಟ್ರದಲ್ಲಿ ಇದನ್ನು ಮೊದಲು ಗುರುತಿಸಿದಾಗಿನಿಂದ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಪಶ್ಚಿಮ ಹಾಗೂ ಮಧ್ಯ ಭಾರತದ ಇತರ ಭಾಗಗಳಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ, ಈ ಸಾಂಕ್ರಾಮಿಕ ರೋಗ ವರದಿಯಾಗಿದೆ.

ಈ ರೋಗ ಸ್ಯಾಂಡ್‌ಫ್ಲೈಸ್ ಕಚ್ಚುವುದರಿಂದ ಹರಡುತ್ತದೆ. ಬಿಸಿ ತಾಪಮಾನ, ಅತ್ಯಧಿಕ ಆರ್ದ್ರತೆ ಮತ್ತು ಕಳಪೆ ನೈರ್ಮಲ್ಯವು ಈ ಕೀಟಗಳು ಸಂತಾನೋತ್ಪತ್ತಿ ಮಾಡಲು ಸೂಕ್ತವಾದ ಪರಿಸ್ಥಿತಿ ನಿರ್ಮಿಸುತ್ತವೆ. “ಬಿರುಕು ಬಿಟ್ಟ ಗೋಡೆಗಳು, ಸಂಗ್ರಹವಾದ ತ್ಯಾಜ್ಯ, ಮನೆಗಳ ಬಳಿ ಇರಿಸಲಾದ ಜಾನುವಾರುಗಳು ಎಲ್ಲವೂ ಪ್ರಸರಣದ ಅಪಾಯವನ್ನು ಹೆಚ್ಚಿಸುತ್ತವೆ. ಈ ಪರಿಸರ ಪರಿಸ್ಥಿತಿಗಳು ಸುಧಾರಿಸಿದ ಹೊರತು ಮಳೆಗಾಲದಲ್ಲಿ ರೋಗ ಹರಡುವುದು ಮುಂದುವರಿಯಲಿದೆ” ಎನ್ನುತ್ತಾರೆ ತಜ್ಞ ವೈದ್ಯರು.

►ಮಕ್ಕಳಿಗೆ ಏಕೆ ಸಮಸ್ಯೆಯಾಗುತ್ತದೆ?

ಚಂಡಿಪುರ ವೈರಸ್ ಸೋಂಕಿನ ವಿಶೇಷವಾದ ಲಕ್ಷಣವೆಂದರೆ ಅದು ಮಕ್ಕಳ ಮೇಲೆ, ವಿಶೇಷವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ, ಪರಿಣಾಮ ಬೀರುತ್ತದೆ. ಮಕ್ಕಳ ರೋಗನಿರೋಧಕ ಶಕ್ತಿ ಇನ್ನೂ ಅಭಿವೃದ್ಧಿ ಹೊಂದುವ ಸ್ಥಿತಿಯಲ್ಲಿರುತ್ತದೆ. ಹೀಗಾಗಿ ವೈರಸ್ ವೇಗವಾಗಿ ದ್ವಿಗುಣಗೊಂಡು ಮಕ್ಕಳನ್ನು ಹೆಚ್ಚು ಗುರಿಯಾಗಿಸುತ್ತದೆ. ಮಕ್ಕಳು ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಮತ್ತು ಮರಳು ನೊಣಗಳ ಕಡಿತಕ್ಕೆ ಹೆಚ್ಚು ಬೇಗನೆ ಒಡ್ಡಿಕೊಳ್ಳುತ್ತಾರೆ. ಅಪೌಷ್ಟಿಕತೆ, ಜನದಟ್ಟಣೆಯ ಜೀವನ ಪರಿಸ್ಥಿತಿಗಳು ಮತ್ತು ಆರೋಗ್ಯ ಸೇವೆ ತಡವಾಗಿ ಸಿಗುವುದು ಪೀಡಿತ ಸಮುದಾಯಗಳಲ್ಲಿ ತೀವ್ರ ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ನಿಧಾನವಾಗಿ ಹರಡುವ ಇತರ ವೈರಲ್ ಸೋಂಕುಗಳಿಗೆ ಹೋಲಿಸಿದರೆ ಚಂಡಿಪುರ ವೈರಸ್ ತ್ವರಿತವಾಗಿ ತೀವ್ರ ರೋಗಕ್ಕೆ ಕಾರಣವಾಗಬಹುದು. ರೋಗ ಲಕ್ಷಣಗಳಲ್ಲಿ ಆರಂಭಿಕ ಜ್ವರದ ನಂತರ ಎನ್ಸೆಫಾಲಿಟಿಸ್ ಸಿಂಡ್ರೋಮ್ (AES) ಬೆಳೆಯುತ್ತದೆ. ಇದು ಮೆದುಳಿನ ತೀವ್ರ ಉರಿಯೂತವಾಗಿದ್ದು, ಸರಿಯಾದ ಸಮಯಕ್ಕೆ ಗುರುತಿಸದೆ ಇದ್ದರೆ ಮತ್ತು ತಕ್ಷಣ ನಿರ್ವಹಿಸದೆ ಇದ್ದಲ್ಲಿ 24ರಿಂದ 48 ಗಂಟೆಗಳ ಒಳಗೆ ರೋಗ ತೀವ್ರವಾಗಿ, ಪ್ರಜ್ಞಾಹೀನತೆ ಮತ್ತು ಸಾವಿಗೂ ಕಾರಣವಾಗಬಹುದು.

►ಯಾವ ಲಕ್ಷಣಗಳನ್ನು ಅಲಕ್ಷಿಸಬಾರದು?

ಅನಾರೋಗ್ಯವು ಸಾಮಾನ್ಯ ವೈರಲ್ ಸೋಂಕಿನಂತೆ ಪ್ರಾರಂಭವಾಗುತ್ತದೆ. ಇದನ್ನು ಸಾಮಾನ್ಯ ಜ್ವರ ಎಂದು ತಪ್ಪಾಗಿ ಭಾವಿಸುವುದು ಸುಲಭ. ಆದರೆ ಜ್ವರದ ಜೊತೆಗೆ ಪುನರಾವರ್ತಿತ ವಾಂತಿ ಅಥವಾ ತೀವ್ರ ತಲೆನೋವು ಕಾಣಿಸಿಕೊಂಡರೆ ಪೋಷಕರು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಹೆಚ್ಚುತ್ತಿರುವ ಅರೆನಿದ್ರಾವಸ್ಥೆ, ಅಸಹಜವಾದ ಕಿರಿಕಿರಿ, ಗೊಂದಲ, ಮೂರ್ಛೆ (ಸೀಜರ್ಸ್) ಬೀಳುವುದು ಅಥವಾ ಪ್ರಜ್ಞೆಗೆ ಸಂಬಂಧಿಸಿದ ಯಾವುದೇ ಬದಲಾವಣೆಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಈ ರೋಗದಲ್ಲಿ ಒಂದು ಅಥವಾ ಎರಡು ದಿನಗಳ ಜ್ವರವು ನರವೈಜ್ಞಾನಿಕ ಸಮಸ್ಯೆಯಾಗಿ ಬದಲಾಗಬಹುದು. ಹೀಗಾಗಿ ತುರ್ತು ಚಿಕಿತ್ಸೆ ಅಗತ್ಯ.

ಇತ್ತೀಚೆಗೆ ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ನಡೆಸಿದ ಪ್ರಯೋಗಾಲಯದ ಅಧ್ಯಯನದಿಂದ ಚಂಡಿಪುರ ವೈರಸ್ ಏಕೆ ವೇಗವಾಗಿ ಮುಂದುವರಿಯುತ್ತದೆ ಎನ್ನುವುದರ ಬಗ್ಗೆ ಹೊಸ ಮಾಹಿತಿ ದೊರೆತಿದೆ. ರೋಗಿಗಳ ಬದಲಾಗಿ ಸಂಶೋಧಕರು ಸೋಂಕಿತ ಜೀವಕೋಶಗಳೊಂದಿಗೆ ವೈರಸ್ ಹೇಗೆ ಹರಡುತ್ತದೆ ಎಂಬುದನ್ನು ಪರಿಶೀಲಿಸಿದ್ದಾರೆ.

ಈ ಅಧ್ಯಯನವನ್ನು ಬಳಸಿಕೊಂಡು ಸಂಶೋಧಕರು ಚಂಡಿಪುರ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಮರುಬಳಕೆ ಮಾಡಬಹುದಾದ ಮೂರು ಅಸ್ತಿತ್ವದಲ್ಲಿರುವ ಔಷಧಿಗಳನ್ನು ಗುರುತಿಸಿದ್ದಾರೆ. ಈ ಸಂಶೋಧನೆಗಳು ಭರವಸೆ ನೀಡಿದ್ದರೂ, ಚಂಡಿಪುರ ವೈರಸ್ ರೋಗಿಗಳಲ್ಲಿ ಔಷಧಿಗಳನ್ನು ಪರೀಕ್ಷಿಸಲಾಗಿಲ್ಲ ಮತ್ತು ಅವುಗಳನ್ನು ಇನ್ನೂ ಚಿಕಿತ್ಸೆಗಳೆಂದು ಪರಿಗಣಿಸಲಾಗಿಲ್ಲ. ಕ್ಲಿನಿಕಲ್ ಪ್ರಯೋಗಕ್ಕೆ ಮೊದಲು ಪ್ರಾಣಿಗಳ ಮೇಲೆ ಹೊಸ ಅಧ್ಯಯನಗಳನ್ನು ನಡೆಸಬೇಕಿದೆ.

►ಪ್ರಸ್ತುತ ಇರುವ ಚಿಕಿತ್ಸೆ ಏನು?

ಹೀಗಾಗಿ ಪ್ರಸ್ತುತ ಚಂಡಿಪುರ ವೈರಸ್ ಸೋಂಕಿಗೆ ಪರವಾನಗಿ ಪಡೆದ ಲಸಿಕೆ ಅಥವಾ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆಯಿಲ್ಲ. ಬೆಂಬಲಿತ ವೈದ್ಯಕೀಯ ಆರೈಕೆ ಮತ್ತು ಆರಂಭಿಕ ಗುರುತಿಸುವಿಕೆ ಚಿಕಿತ್ಸೆಯ ಮುಖ್ಯ ಆಧಾರವಾಗಿದೆ. ಹೀಗಾಗಿ ಸ್ಯಾಂಡ್‌ಫ್ಲೈ ಕಡಿತವನ್ನು ತಡೆಗಟ್ಟುವುದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

ಈ ರೋಗ ಸಕ್ರಿಯವಾಗಿರುವ ಸಂದರ್ಭ ಮಕ್ಕಳಿಗೆ ಸಂಜೆ ಮತ್ತು ರಾತ್ರಿ ಉದ್ದತೋಳಿನ ಬಟ್ಟೆಗಳನ್ನು ತೊಡಿಸಬೇಕು. ಕೀಟನಾಶಕದಿಂದ ಸಂಸ್ಕರಿಸಿದ ಹಾಸಿಗೆ ಪರದೆಗಳಡಿ ಮಲಗಿಸುವುದು, ಮಕ್ಕಳಿಗೆ ಸುರಕ್ಷಿತ ಕೀಟ ನಿವಾರಕಗಳನ್ನು ಬಳಸುವುದು, ಸ್ವಚ್ಛವಾದ ಪರಿಸರ ಕಾಪಾಡಿಕೊಳ್ಳುವುದು, ಬಿರುಕುಬಿಟ್ಟ ಗೋಡೆಗಳನ್ನು ಸರಿಪಡಿಸುವುದು ಮತ್ತು ಮನೆಗಳ ಸುತ್ತ ಸಂಭಾವ್ಯ ಸಂತಾನೋತ್ಪತ್ತಿ ಸ್ಥಳಗಳನ್ನು ತೆಗೆದುಹಾಕುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News