Yadgir | ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ ಪ್ರಕರಣ : ಮಾಲಕರನ್ನು ಹೊಣೆ ಮಾಡಿ ಪ್ರಕರಣ ದಾಖಲಿಸಲು ಭೀಮುನಾಯಕ ಒತ್ತಾಯ

Update: 2026-08-06 19:46 IST

ಯಾದಗಿರಿ: ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ವಿಷಾನಿಲ ಸೋರಿಕೆಯಿಂದ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಕೈಗಾರಿಕೆಯಲ್ಲಿ ಕಾರ್ಮಿಕನೊಬ್ಬ ಗಂಭೀರ ಅಸ್ವಸ್ಥಗೊಂಡಿರುವ ಘಟನೆ ನಡೆದಿದ್ದು, ಇಂತಹ ಅಪಾಯಕಾರಿ ಕಂಪನಿಗಳನ್ನು ಸರ್ಕಾರ ಇನ್ನೂ ಬಂದ್ ಮಾಡದಿರುವುದು ಏಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಟಿ.ಎನ್.ಭೀಮುನಾಯಕ ಪ್ರಶ್ನಿಸಿದರು.

ಈ ಕುರಿತು ಪ್ರಕಟಣೆ ನೀಡಿದ ಅವರು, ರಾಮೀಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹುಮನಾಬಾದ್ ಮೂಲದ ಆಯಾನ್ ಶಂಶೋದ್ದೀನ್ ವಿಷಾನಿಲದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ಜೂನ್‌ನಲ್ಲೇ ಅಪಾಯಕಾರಿ ರಾಸಾಯನಿಕ ಹೊರಸೂಸುವ ಕಂಪನಿಗಳಿಗೆ ಬಂದ್ ನೋಟಿಸ್ ನೀಡುವ ನಿರ್ಧಾರ ಕೈಗೊಂಡಿತ್ತು. ಆದರೆ ಕೇವಲ ಒಂದು ಕಂಪನಿಗೆ ಮಾತ್ರ ನೋಟಿಸ್ ಜಾರಿಯಾಗಿದ್ದು, ಉಳಿದ ಕಂಪನಿಗಳಿಗೆ ನೋಟಿಸ್ ನೀಡದಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಎಲ್ಲ ಅಪಾಯಕಾರಿ ಕಂಪನಿಗಳನ್ನು ಸಮಯಕ್ಕೆ ಸರಿಯಾಗಿ ಬಂದ್ ಮಾಡಿದ್ದರೆ ಕಾರ್ಮಿಕರ ಜೀವಹಾನಿ ಸಂಭವಿಸುತ್ತಿರಲಿಲ್ಲ. ಹಲವು ಕಾರ್ಮಿಕರು ಮೃತಪಟ್ಟಿದ್ದರೂ ಕಂಪನಿಗಳು ಕೇವಲ ಪರಿಹಾರ ನೀಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ಕಾರ್ಮಿಕರ ಸಾವು ಕಂಪನಿ ಮಾಲೀಕರ ನಿರ್ಲಕ್ಷ್ಯ ಹಾಗೂ ಲಾಭಕೋರತನದಿಂದ ಸಂಭವಿಸಿರುವುದರಿಂದ ಇದನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ, ಎಫ್‌ಎಸ್‌ಎಲ್ ವರದಿಗಾಗಿ ಕಾಯದೆ ಕಂಪನಿ ಮಾಲೀಕರನ್ನು ಮೊದಲ ಆರೋಪಿಯನ್ನಾಗಿ (ಎ–1) ದಾಖಲಿಸಿ ಬಂಧಿಸಬೇಕು. ಜೊತೆಗೆ ಅಪಾಯಕಾರಿ ಕಂಪನಿಗಳನ್ನು ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ಶಾಸಕರು ವಿಧಾನಸಭೆಯಲ್ಲಿ ಈ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸಿದ್ದರೂ, ರೈತರು ಹಾಗೂ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದರೂ ಸರ್ಕಾರ ಯಾವುದೇ ನಿರ್ಣಾಯಕ ಕ್ರಮ ಕೈಗೊಂಡಿಲ್ಲ. ಈ ವಿಳಂಬದ ಹಿಂದೆ ಯಾವ ಕಾರಣವಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಅವರು ಪ್ರಶ್ನಿಸಿದರು.

ಈ ಭಾಗದ ರೈತರು ಉದ್ಯೋಗಕ್ಕಾಗಿ ವಲಸೆ ಹೋಗುತ್ತಿರುವ ಸಂದರ್ಭದಲ್ಲಿ, ಊರಿನಲ್ಲಿ ಉಳಿದಿರುವ ಹಿರಿಯರು ವಿಷಾನಿಲದ ಭೀತಿಯಲ್ಲಿ ಬದುಕುತ್ತಿದ್ದಾರೆ. ಮತ್ತೊಂದೆಡೆ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಲಾಭಕ್ಕಾಗಿ ಜನರ ಜೀವದೊಂದಿಗೆ ಚೆಲ್ಲಾಟ ಆಡುತ್ತಿರುವ ಕಂಪನಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಮಾಲೀಕರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಭೀಮುನಾಯಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಕುಣಿ, ಪ್ರಕಾಶ ಪಾಟೀಲ್ ಜೈಗ್ರಾಮ್, ಶರಣಬಸಪ್ಪ ಯಲ್ಹೇರಿ, ಮೌನೇಶ ಮಾಧವಾರ, ಸುರೇಶ ಬೆಳಗುಂದಿ, ಮಹೇಶ ಸೈದಾಪೂರ, ದಿಲಿಪ್ ಕುಮಾರ ಸೈದಾಪೂರ, ಮಲ್ಲು ಬಾಡಿಯಾಲ, ಬಸ್ಸು ನಾಯಕ ಸೈದಾಪೂರ, ವೆಂಕಟರಾಮುಲು, ಸಾಬು ನೀಲಳ್ಳಿ, ನಾಗರಡ್ಡಿ ಕೂಡ್ಲೂರು ಇದ್ದರು.

ವಿಷಕಾರಿ ಕೈಗಾರಿಕೆಗಳನ್ನು ಮುಚ್ಚಿಸಲು ಈ ಭಾಗದ ಬೂಮಿ ಕಳೆದುಕೊಂಡ ರೈತರು, ಕೂಲಿ ಕಾರ್ಮಿಕರು ಪ್ರಜ್ಞಾವಂತರೂ ಸಹ ಕೈಜೋಡಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News