ಗಿರಿನಾಡಲ್ಲಿ ಮಿತಿ ಮೀರಿದ ಕಾಡುಹಂದಿ, ಮಂಗಗಳ ಉಪಟಳ| ಬೆಳೆಗಳ ರಕ್ಷಣೆಗೆ ಸೀರೆಗಳ ಬಳಕೆಗೆ ಮುಂದಾದ ರೈತರು
ಯಾದಗಿರಿ: ಯಾದಗಿರಿ ಗುರುಮಠಕಲ್ ತಾಲೂಕಿನ ಯರಗೋಳದಿಂದ ಗುರುಮಠಕಲ್ವರೆಗೆ ಗುಡ್ಡಗಾಡು ಪ್ರದೇಶದ ಕೆಳಭಾಗದ ರೈತರ ತಮ್ಮ ಬೆಳೆಗಳು ಜಮೀನಿನಲ್ಲಿ ಬಿತ್ತನೆ ಮಾಡಿರುವ ಜೋಳ, ಸಜ್ಜಿ, ಶೇಂಗಾ ಸೇರಿದಂತೆ ಇನ್ನಿತರ ಬೆಳೆ ರಕ್ಷಣೆಗೆ ಸೀರೆ ಜಮೀನು ಸುತ್ತಲೂ ಕಟ್ಟಿದ್ದಾರೆ. ಜಿಲ್ಲೆಯಲ್ಲಿ ಕಾಡು ಹಂದಿ, ಮಂಗಗಳ ಹಾವಳಿ ಮೀತಿ ಮೀರಿದ್ದು, ಇದರಿಂದಾಗಿ ತೀವ್ರ ಕಂಗಲಾಗಿರುವ ರೈತರು ಅಳಿದುಳಿದ ಬೆಳೆ ರಕ್ಷಣೆಗೆ ಹಳೆ ಸೀರೆಗಳ ಮೊರೆ ಹೋಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್.ಕೆ. ಮುದ್ನಾಳ ತಿಳಿಸಿದ್ದಾರೆ
ರೈತರ ಜಮೀನಿಗಳಿಗೆ ಭೇಟಿ ನೀಡಿ ರೈತರ ಜೊತೆ ಚರ್ಚಿಸಿ ಮಾತನಾಡಿದ ಉಮೇಶ್.ಕೆ.ಮುದ್ನಾಳ, ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿರುವ ಬೆಳಗಳನ್ನು ರಕ್ಷಿಸಿಕೊಳ್ಳಲು ಹಳೆ ಸೀರೆಗಳನ್ನು ಹೊಲದ ಸುತ್ತಲೂ ನಾಲ್ಕು ಕಡೆ ಕಟ್ಟುತ್ತಿರುವ ದೃಶ್ಯ ಯಾದಗಿರಿ, ಗುರುಮಠಕಲ್ ತಾಲೂಕಿನ ಯರಗೋಳ, ಅಲ್ಲಿಪೂರ, ಹತ್ತಿಕುಣಿ, ಸೌದಾಗಾರ, ತಾತಳಗೇರಾ, ಯಂಪಾಡ್ ಅರಕೇರಾ, ಶಿವಪೂರ, ಕೋಟಗೇರಾ, ಕೆ. ಹೊಸಳ್ಳಿ, ಧರ್ಮಾಪೂರ, ಬೋಡಬಂಡಾ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಹಂದಿ, ಮಂಗಗಳ ಉಪಟಳ ಹೆಚ್ಚಳವಾಗಿದೆ. ರೈತರು ಹಳೇ ಸೀರೆಯನ್ನು ಬಳಕೆ ಮಾಡುವ ಮೂಲಕ ಕಾಡು ಹಂದಿ, ಮಂಗಗಳ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ಕಾಡುಹಂದಿ, ಮಂಗಗಳ ಹಾವಳಿ ಮಿತಿಮೀರಿದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿ ವರ್ಷ ಬರ ಅತಿವೃಷ್ಟಿ ನಡುವೆಯೇ ಶತಾಯ ಗತಾಯವಾಗಿ ಬೆಳೆಗಳನ್ನು ಬೆಳೆದುಕೊಂಡಿದ್ದಾರೆ. ಒಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೇಸತ್ತ ರೈತರಿಗೆ ಇನ್ನೊಂದು ಕಡೆ ಕಾಡು ಹಂದಿ, ಮಂಗಗಳ ಕಾಟ ಹೆಚ್ಚಳವಾಗಿವೆ. ಇವೆರಡರ ನಡುವೆ ಸಿಲುಕಿ ಒದ್ದಾಡುವಂತಹ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದೆ. ಈ ಭಾಗದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಅನ್ನದಾತನ ಸಂಕಟ ಅರಿಯುವ ಪ್ರಯತ್ನ ಮಾಡದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಸಂಬಂಧಿಸಿದ ಇಲಾಖೆಗಳು ರೈತರಿಗೆ ಇರುವ ಸಂಕಷ್ಟ ದೂರ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ. ರೈತರು ಇಷ್ಟೆಲ್ಲ ಸಂಕಷ್ಟದಲ್ಲಿ ಸಾಲ ಮಾಡಿ ಬೆಳೆ ಬೆಳೆದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತಿದೆ. ಆದರೆ ರೈತಪರ ಸರಕಾರ ಎನ್ನುವ ರಾಜಕಾರಣಿಗಳು ಯಾವುದೇ ರೈತರ ಸಂಕಷ್ಟ ಪರಿಹರಿಸುವ ಕೆಲಸ ಮಾಡದೇ ಬರಿ ಬಾಯಿಮಾತಿನಲ್ಲಿ ರೈತರ ಪರ ಎಂದು ಬುರುಡೆ ಬಿಡುತ್ತಿರುವುದು ಸಮಸ್ಯೆ ಹೆಚ್ಚಲು ಕಾರಣವಾಗಿದೆ. ಇನ್ನಾದರೂ ಜಿಲ್ಲಾಡಳಿತ ತಕ್ಷಣ ಸಮಸ್ಯೆ ಗುರುತಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ಅನ್ನದಾತರು ಮುಂದಿನ ದಿನಗಳಲ್ಲಿ ಸಿಡಿದೇಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಹೇಳಿದರು.
ಈ ಸಂರ್ಭದಲ್ಲಿ ಸಂಶುದ್ದಿನ್, ಅಬ್ಬಾಸಲಿ, ಪವನ, ಮಲ್ಲೇಶಿ, ಸಣ್ಣ ಶರಣಪ್ಪ, ಸಿದ್ದಪ್ಪ, ದಸ್ತಗಿರಿ, ರಮೇಶ, ನಿಂಗಪ್ಪ, ಸಿದ್ರಾಮಪ್ಪ ತಳವಾರ, ಪರಮೇಶ ರಾಠೋಟ್, ಶಿವು ಹತ್ತಿಕುಣಿ, ಹಣಮಂತ ಯಂಕಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.