ಬಜ್ಪೆ: ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದ ಇಬ್ಬರ ಬಂಧನ
Update: 2023-08-21 22:30 IST
ಬಜ್ಪೆ, ಆ.21: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು, ಜಗಳವಾಡುತ್ತಿದ್ದ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕು ತೆಂಕಬೆಳ್ಳೂರು ಗ್ರಾಮದ ನಿವಾಸಿ ಶಿವಪ್ರಸಾದ್ (39) ಮತ್ತು ಶಕ್ತಿನಗರ ಕಾರ್ಮಿಕ ಕಾಲನಿ ನಿವಾಸಿ ಷಡ್ರಕ್ ಇಮ್ಯಾನುವಲ್ ಯಾನೆ ಮನು (39) ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಗುರುಪುರ ಕೈಕಂಬ ಬಸ್ ನಿಲ್ದಾಣದಲ್ಲಿ ವೈಯಕ್ತಿಕ ವಿಚಾರವಾಗಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿ ಸುತ್ತಾ ಹೊಡೆದಾಡಿಕೊಂಡಿದ್ದಾರೆ. ತಕ್ಷಣ ಸ್ಥಳೀಯರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.