ಉಳ್ಳಾಲ: ಬಿಜೆಪಿ ನಾಯಕಿ ಲಲಿತ ಸುಂದರ್ ನಿಧನ
Update: 2025-11-20 23:01 IST
ಉಳ್ಳಾಲ: ಉಳ್ಳಾಲದ ಬಿಜೆಪಿಯ ಹಿರಿಯ ನಾಯಕಿ, ಉಳ್ಳಾಲ ನಗರಸಭೆಯ ಮಾಜಿ ಸದಸ್ಯರಾದ ಲಲಿತಾ ಸುಂದರ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸಂಜೆ ತೊಕ್ಕೊಟ್ಟಿನ ಅವರ ಸ್ವಗೃಹದಲ್ಲಿ ನಿಧನರಾದರು.
ಬಿಜೆಪಿ ಕಾರ್ಯಕರ್ತರಾಗಿದ್ದ ಅವರು ಉಳ್ಳಾಲ ನಗರಸಭೆಯ ಚುನಾಯಿತ ಸದಸ್ಯರಾಗಿ, ನಾಮ ನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷರಾಗಿದ್ದ ಅವರು ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ ಬಳಿಯ ಸ್ವಾಮಿ ಕೊರಗಜ್ಜ ಸೇವಾ ಸಮಿತಿ,ಕೊಲ್ಯ ಶ್ರೀ ಶಾರದೋತ್ಸವ ಸಮಿತಿ,ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿ ವಿನಾಯಕ ಮಂದಿರ,ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮೊದಲಾದ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಸೊಸೆ, ಮೊಮ್ಮಗಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.