×
Ad

ಮಂಗಳೂರು ವಿವಿಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ, ಮ್ಯಾಗ್ನಮ್‌ ಫೆಸ್ಟ್‌ ಉದ್ಘಾಟನೆ

Update: 2025-05-29 18:49 IST

ಕೊಣಾಜೆ: ಇಂದಿನ ಸ್ಪರ್ಧಾತ್ಮಕವಾದ ಕಾಲಘಟ್ಟದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಂತರ್ ಶಿಸ್ತೀಯ ಅಧ್ಯಯನದೊಂದಿಗೆ ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಕೌನ್ಸಿಲ್‌ನ ಉಪಾಧ್ಯಕ್ಷರಾದ ಪ್ರೊ.ಎಸ್‌.ಆರ್.ನಿರಂಜನ‌ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗದ ಆಶ್ರಯದಲ್ಲಿ‌ 'ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ-ಚಾಲಿತ ಜಾಗತಿಕ ವಿದ್ಯಮಾನಗಳು ಎಂಬ ವಿಷಯದ ಕುರಿತು ಬ್ಯಾಂಕ್‌ ಆಫ್‌ ಬರೋಡ ಚೇರ್‌, ಕೆನರಾ ಬ್ಯಾಂಕ್‌ ಚೇರ್‌ ಮತ್ತು ಯೂನಿಯನ್‌ ಬ್ಯಾಂಕ್‌ ಚೇರ್‌ ಸಂಯೋಜನೆಯೊಂದಿಗೆ ಎರಡು ದಿನಗಳ ಕಾಲ ನಡೆಯುವ ಅಂತರರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ವಿಜ್ಞಾನ ಬೆಳೆಯುತ್ತಿದ್ದಂತೆಯೇ ಅನೇಕ ಸವಾಲುಗಳೂ ಎದುರಾಗುತ್ತಿವೆ. ಎಲ್ಲಾ ರಂಗದಲ್ಲೂ ಕೃತಕ ಬುದ್ಧಿಮತ್ತೆಯು ಪ್ರಮುಖ ಪಾತ್ರವಹಿಸುತ್ತಿದೆ.‌ ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಇದರ‌ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ದಿಮತ್ತೆಯಂತಹ ಆಧುನಿಕತೆಯ ಅರಿವನ್ನು ಅರಿತುಕೊಂಡರೆ ಮಾತ್ರ ಇಂದು ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಜ್ಯೋತಿ ಲ್ಯಾಬ್ಸ್ ಲಿಮಿಟೆಡ್‌ ಹಾಗೂ ಎಪ್‌.ಐ.ಸಿ.ಸಿ.ಐ.ನ ಮಾಜಿ ಎಂ.ಡಿ.ಸಿ.ಎ.ಕೆ. ಉಲ್ಲಾಸ್‌ ಕಾಮತ್‌ ಭಾಗವಹಿಸಿ ಮಾತನಾಡಿ, ಇಂದು ತಂತ್ರಜ್ಞಾನ ಹಾಗೂ ಕೃತಕ ಬುದ್ದಿಮತ್ತೆಯ ಕಾಲವಾಗಿದೆ. ಟೆಕ್ನಾಲಜಿ ಇಲ್ಲದೆ ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ವ್ಯವಹಾರ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರ ಮುನ್ನಡೆಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ವಹಿಸಿ ಮಾತನಾಡಿ, ಕೃತಕ ಬುದ್ಧಿಮತ್ತೆಯು ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಆವರಿಸುತ್ತಿದೆ ಮತ್ತು ಪರ್ಯಾಯ ಶಕ್ತಿಯಾಗಿ ಬೆಳೆಯುತ್ತಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಎಲ್ಲಾ ಸವಾಲುಗಳು ಅರ್ಥ ಮಾಡಿಕೊಂಡು ಅದಕ್ಕೆ ಪೂರಕವಾಗಿ ಬೆಳೆಯಬೇಕು. ಆಗ ಅವಕಾಶಗಳ ಬಾಗಿಲು ತೆರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಲಸಚಿವರಾದ ಕೆ.ರಾಜು ಮೊಗವೀರ, ಚಾರ್ಟೆಡ್ ಅಕೌಂಟೆಟ್‌ ಸಿ.ಎ.ನಿತಿನ್‌ ಜೆ.ಶೆಟ್ಟಿ, ಇನ್ಫೋಸಿಸ್ ಮಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರು ಹಾಗೂ ಅಧ್ಯಕ್ಷರಾದ ವಾಸುದೇವ ಕಾಮತ್‌, ಹಾಂಕಾಂಗ್‌ನ ಡಾಟ ಸೈಂಟಿಸ್ಟ್‌ ಕ್ರಿಸ್‌ ಲೆವಿಸ್‌, ಜಿಂಬಾಬ್ವೆ ದೇಶದ ತಜ್ಞರಾದ ವಿನ್ನಿ ಸಿಬೊಂಗೆಲೆ ಬಾಜಿಲ್ಲಾ, ಪ್ರಾಧ್ಯಾಪಕರಾದ ಪ್ರೊ.ಮುನಿರಾಜು, ಪ್ರೊ.ಈಶ್ವರ ಪಿ,, ಪ್ರೊ.ಪರಮೇಶ್ವರ್‌, ಪ್ರೊ.ವೇದವ್‌, ಸ್ಟಾಪ್ ಕಾರ್ಡಿನೇಟರ್ ಗುರುರಾಜ್ ಬಿ., ವೈಶಾಲಿ ಹಾಗೂ ವಿಭಾಗದ ವಿದ್ಯಾರ್ಥಿ ಮುಖಂಡರು ಉಪಸ್ಥಿತರಿದ್ದರು.

ವಿಭಾಗದ ಮುಖ್ಯಸ್ಥರಾದ ಡಾ.ಪ್ರೀತಿ ಕೀರ್ತಿ ಡಿಸೋಜ ಅವರು ಸ್ವಾಗತಿಸಿದರು. ಸ್ಟಾಪ್ ಕಾರ್ಡಿನೇಟರ್ ವೈಶಾಲಿ ಅವರು ವಂದಿಸಿದರು.

ಇಂಟಿಗ್ರೇಟಿವ್‌ ಕಾಮರ್ಸ್ ಐ 5 ಲ್ಯಾಬ್‌ ಉದ್ಘಾಟನೆ :

ವಿದ್ಯಾಥಿಗಳು ಮತ್ತು ಸಂಶೋಧಕರಿಗೆ ಕಲಿಕೆ, ಜ್ಞಾನರ್ಜನೆಗೆ ಅನುಕೂಲವಾಗುವಂತೆ ಪ್ರಚಲಿತ ವಿದ್ಯಮಾನ, ಹೊಸ ಮಾದರಿಗಳು, ಕೃತಕ ಬುದ್ದಿಮತ್ತೆ ಇತ್ಯಾದಿ ಹೊಸ ಅನ್ವೇಷಣೆಗೆ ನವೀನ ಮಾದರಿಯ ಕಾಮರ್ಸ್ ಐ 5 ಲ್ಯಾಬ್ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಆರಂಭಗೊಂಡಿದ್ದು, ಇದರ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ನೆರವೇರಿಸಿದರು.

ಉದ್ಘಾಟನೆ ಬಳಿಕ ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ಜವಾಬ್ದಾರಿ ಎಂಬ ವಿಷಯದ ಕುರಿತು ಪ್ಯಾನಲಿಸ್ಟ್ ಚರ್ಚೆ ನಡೆಯಿತು. ಪ್ಯಾನಲಿಸ್ಟ್ ಗಳಾಗಿ ಇನ್ಫೋಸಿಸ್ ಮಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರು ಮತ್ತು ಅಧ್ಯಕ್ಷರಾದ ವಾಸುದೇವ ಕಾಮತ್‌, ಜಿಂಬಾಬ್ವೆ ದೇಶದ ತಜ್ಞರಾದ ವಿನ್ನಿ ಸಿಬೊಂಗೆಲೆ ಬಾಜಿಲ್ಲಾ, ಹಾಂಕಾಂಗ್‌ನ ಡಾಟ ಸೈಂಟಿಸ್ಟ್‌ ಕ್ರಿಸ್‌ ಲೆವಿಸ್‌, ಮತ್ತು ಡಾ.ಸುರೇಖಾ ಅನವಳ್ಳಿರವರು ವಿಷಯದ ಕುರಿತು ಮಾತನಾಡಿದರು. ಪ್ರೊ.ಪರಮೇಶ್ವರ್‌ ನಿರ್ವಹಿಸಿದರು. ವಿವಿದ ಟೆಕ್ನಿಕಲ್ ಷೆಶನ್ ನ ಅಧ್ಯಕ್ಷರಾಗಿ ಪ್ರೊ.ವೈ.ಮುನಿರಾಜು, ಪ್ರೊ.ಈಶ್ವರ ಪಿ., ಪ್ರೊ.ವೇದವ ಪಿ., ಪ್ರೊ ಪರಮೇಶ್ವರ್‌ ಮತ್ತು ಡಾ.ಪ್ರೀತಿ ಕೀರ್ತಿ ಡಿಸೋಜ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News