ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿಗೆ ಶೇ. 42 ಮೀಸಲಾತಿ; ಮಧ್ಯಂತರ ತಡೆ ವಿರುದ್ಧದ ತೆಲಂಗಾಣದ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಸುಪ್ರೀಂ ಕೋರ್ಟ್ | Photo Credit : sci.gov.in
ಹೊಸದಿಲ್ಲಿ, ಅ. 16: ತೆಲಂಗಾಣದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಶೇ. 42 ಏರಿಕೆಗೆ ತಡೆ ನೀಡಿದ ತೆಲಂಗಾಣ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ವಿರುದ್ಧ ತೆಲಂಗಾಣ ಸರಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠ, ಉಚ್ಚ ನ್ಯಾಯಾಲಯ ಮುಖ್ಯ ಪ್ರಕರಣವನ್ನು ಅದರ ಮಹತ್ವದ ಆಧಾರದ ಮೇಲೆ ನಿರ್ಧರಿಸಬೇಕು. ರಾಜ್ಯ ಸರಕಾರ ಸರಕಾರ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಪ್ರಭಾವಿತರಾಗಬಾರದು ಎಂದು ಹೇಳಿತು.
ಮೀಸಲಾತಿ ಹೆಚ್ಚಿಸುವ ರಾಜ್ಯ ಸರಕಾರದ ಆದೇಶಕ್ಕೆ ಉಚ್ಚ ನ್ಯಾಯಾಲಯ ಅಕ್ಟೋಬರ್ 9ರಂದು ತಡೆ ನೀಡಿತ್ತು. ನಾಲ್ಕು ವಾರಗಳ ಒಳಗೆ ಪ್ರತಿ ಅಫಿಡಾವಿಟ್ ಸಲ್ಲಿಸಲು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಅದು ನಿರ್ದೇಶಿಸಿತ್ತು. ಅನಂತರ ತಮ್ಮ ಆಕ್ಷೇಪಗಳನ್ನು ಸಲ್ಲಿಸಲು ಅರ್ಜಿದಾರರಿಗೆ ಎರಡು ವಾರಗಳ ಕಾಲಾವಕಾಶ ನೀಡಿತ್ತು.
ಅನಂತರ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು 6 ವಾರಗಳ ಕಾಲ ಮುಂದೂಡಿತು.
ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಅಕ್ಟೋಬರ್ 31, ನವೆಂಬರ್ 4 ಹಾಗೂ ನವೆಂಬರ್ 8ರಂದು ಮೂರು ಹಂತಗಳಲ್ಲಿ ನಡೆಯಲಿದೆ. ಮಂಡಲ ಪರಿಷತ್ ಪ್ರಾದೇಶಿಕ ಕ್ಷೇತ್ರ ಹಾಗೂ ಜಿಲ್ಲಾ ಪರಿಷದ್ ಪ್ರಾದೇಶಿಕ ಕ್ಷೇತ್ರಗಳಿಗೆ ಅಕ್ಟೋಬರ್ 23 ಹಾಗೂ ಅಕ್ಟೋಬರ್ 27ರಂದು ಚುನಾವಣೆ ನಡೆಯಲಿದೆ.