×
Ad

ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆ ಸ್ಥಗಿತ; 370 ಯಾತ್ರಿಗಳಿಗೆ ಸೇನೆ ಆಶ್ರಯ

Update: 2023-07-08 21:34 IST

Photo: PTI

ಶ್ರೀನಗರ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಮರನಾಥ ಗುಹಾ ದೇವಾಲಯಕ್ಕೆ ಹೋಗುವ ಅವಳಿ ರಸ್ತೆಗಳನ್ನು ಶನಿವಾರ ಮುಚ್ಚಲಾಗಿದೆ. ಹಾಗಾಗಿ, ನಡು ರಸ್ತೆಯಲ್ಲಿ ಸಿಲುಕಿಕೊಂಡಿರುವ 370ಕ್ಕೂ ಅಧಿಕ ಯಾತ್ರಿಗಳನ್ನು ಸೇನೆಯು ತೆರವುಗೊಳಿಸಿ ಅವರಿಗೆ ಆಶ್ರಯ ನೀಡಿದೆ.

ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಯಾತ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದರು. ‘‘ಬರಾರಿ ಮಾರ್ಗ್ ಶಿಬಿರದಲ್ಲಿ 253 ಮತ್ತು ಚಂದನ್ವಾರಿ ಶಿಬಿರದಲ್ಲಿ 126 ಯಾತ್ರಿಗಳಿದ್ದಾರೆ. ಸೇನಾ ತುಕಡಿಗಳು ಅವರಿಗೆ ನೆರವಿನ ಭರವಸೆ ನೀಡಿವೆ. ಯಾತ್ರಿಕರಿತೆ ಸಕಾಲಿನ ನೆರವನ್ನು ಭಾರತೀಯ ಸೇನೆಯು ನೀಡುತ್ತಿದೆ’’ ಎಂದು ಅವರು ನುಡಿದರು.

ಸೇನೆಯು ಸಿಕ್ಕಿಹಾಕಿಕೊಂಡಿರುವ ಯಾತ್ರಿಕರಿಗೆ ಬೆಚ್ಚನೆಯ ಬಟ್ಟೆಗಳು, ಬಿಸಿಯೂಟ ಮತ್ತು ಶಾಖ ಸೃಷ್ಟಿಸುವ ಉಪಕರಣಗಳನ್ನು ನೀಡಿದೆ. ಈ ಅವಳಿ ರಸ್ತೆಗಳಲ್ಲಿ ಉಷ್ಣತೆಯೂ ಗಣನೀಯವಾಗಿ ಕುಸಿದಿದೆ ಎಂದು ಅವರು ಹೇಳಿದರು.

ಸತತ ಎರಡನೇ ದಿನವಾದ ಶನಿವಾರವೂ ಅಧಿಕಾರಿಗಳು ಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ. ಭಾರೀ ಮಳೆಯಿಂದಾಗಿ ದಕ್ಷಿಣ ಮತ್ತು ಮಧ್ಯ ಕಾಶ್ಮೀರದಲ್ಲಿರುವ ಗುಹಾ ದೇವಾಲಯದತ್ತ ಹೋಗುವ ರಸ್ತೆಗಳು ನಡಿಗೆಗೆ ಅಯೋಗ್ಯವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News