×
Ad

ಭಾರತಕ್ಕೆ ಈ ವರ್ಷ ಎರಡು ಬಾರಿ ಗೌಪ್ಯವಾಗಿ ಭೇಟಿ ನೀಡಿದ್ದ ಕೆನಡಾ ಗುಪ್ತಚರ ವಿಭಾಗದ ಮುಖ್ಯಸ್ಥ!

Update: 2024-06-09 18:47 IST

Credit: X/@csiscanada

ಹೊಸದಿಲ್ಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಮಾಹಿತಿಗಳನ್ನು ಭಾರತೀಯ ಅಧಿಕಾರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಕೆನಡಾದ ಗುಪ್ತಚರ ವಿಭಾಗದ ಮುಖ್ಯಸ್ಥ ಡೇವಿಡ್ ವಿಗ್ನೆಯಾಲ್ಟ್ ಎರಡು ಬಾರಿ ಗೌಪ್ಯ ಭೇಟಿ ನೀಡಿದ್ದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ವರದಿ ಮಾಡಿದೆ.

ಈ ಸಂದರ್ಭದಲ್ಲಿ ಕೆನಡಾ ಭದ್ರತಾ ಗುಪ್ತಚರ ಸೇವೆ(CSIS)ಗಳ ಮುಖ್ಯಸ್ಥರಾದ ವಿಗ್ನೆಯಾಲ್ಟ್ ಅವರು ನಿಜ್ಜರ್ ಹತ್ಯೆಯ ಕುರಿತು ಕೆನಡಾ ಸರಕಾರದ ತನಿಖೆಯಲ್ಲಿ ಪತ್ತೆಯಾಗಿರುವ ಮಾಹಿತಿಗಳನ್ನು ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಂಡರು ಎಂದು ಹೇಳಲಾಗಿದೆ.

ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್ ಗಳ ದೊಡ್ಡ ಪ್ರಮಾಣದ ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ತೀವ್ರವಾಗಿ ಬಿಗಡಾಯಿಸಿತ್ತು. ಆದರೆ, ಜಸ್ಟಿನ್ ಟ್ರೂಡೊ ಅವರ ಆರೋಪವನ್ನು ಅಸಂಬದ್ಧ ಎಂದು ಭಾರತ ತಳ್ಳಿ ಹಾಕಿತ್ತು.

ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಪ್ರಜೆಗಳಾದ ಕರಣ್ ಪ್ರೀತ್ ಸಿಂಗ್ (28), ಕಮಲ್ ಪ್ರೀತ್ ಸಿಂಗ್ (22) ಹಾಗೂ ಕರಣ್ ಬ್ರಾರ್ (22) ಪಾತ್ರವಿದೆ ಎಂಬ ಆರೋಪದಡಿ ಅವರನ್ನೆಲ್ಲ ಬಂಧಿಸಿದ ಕೆಲ ವಾರಗಳ ನಂತರ, ವಿಗ್ನೆಯಾಲ್ಟ್ ರ ಗೌಪ್ಯ ಭೇಟಿ ನಡೆದಿದೆ ಎಂದು ವರದಿಯಾಗಿದೆ.

ಇದರ ಬೆನ್ನಿಗೇ, ನಾಲ್ಕನೆಯ ಭಾರತೀಯ ಪ್ರಜೆ ಅಮನ್ ದೀಪ್ ಸಿಂಗ್ ಅವರನ್ನು ಕೆನಡಾ ಪ್ರಾಧಿಕಾರಗಳು ಬಂಧಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News