ಚತ್ತೀಸ್‌ಗಢ | ಚುನಾವಣಾ ಕರ್ತವ್ಯದಲ್ಲಿದ್ದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Update: 2024-04-26 15:18 GMT

ಗರಿಯಾಬಂದ್: ಚತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಮಧ್ಯಪ್ರದೇಶದ ವಿಶೇಷ ಶಸಸ್ತ್ರ ಪಡೆಯ ಯೋಧನೋರ್ವ ಶುಕ್ರವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾಸಮುಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗರಿಯಾಬಂದ್‌ನಲ್ಲಿ ಶುಕ್ರವಾರ ಎರಡನೇ ಹಂತದ ಸಾರ್ವತ್ರಿಕ ಚುನಾವಣೆ ನಡೆದಿದೆ.

ಪಿಪಾರ್‌ಛೆಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುದೇದಾದರ್ ಗ್ರಾಮದಲ್ಲಿರುವ ಸರಕಾರ ಶಾಲೆಯ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಅವರನ್ನು ನಿಯೋಜಿಸಲಾಗಿತ್ತು. ಬೆಳಗ್ಗೆ ಸುಮಾರು 9.30ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯ ಕೊಠಡಿಯೊಂದರಲ್ಲಿ ಹೆಡ್ ಕಾನ್ಸ್‌ ಟೇಬಲ್ ಜಿಯಾಲಾಲ್ ಪವಾರ್ ತನ್ನ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಅವರು ಮೀಸಲು ತಂಡದಲ್ಲಿ ಇದ್ದರು. ಅವರನ್ನು ಸಕ್ರಿಯ ಕೆಲಸಕ್ಕೆ ನಿಯೋಜಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪವಾರ್ ಅವರು ಮಧ್ಯಪ್ರದೇಶದ ವಿಶೇಷ ಶಸಸ್ತ್ರ ಪಡೆಯ ಬೆಟಾಲಿಯನ್ ಸಂಖ್ಯೆ 34ಕ್ಕೆ ಸೇರಿದವರು. ಪವಾರ್ ಅವರು ಗುಂಡು ಹಾರಿಸಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ತಂಡ ಅಲ್ಲಿಗೆ ಧಾವಿಸಿತು ಹಾಗೂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿತು ಎಂದು ಅವರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಸುಸೈಡ್ ನೋಟ್ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News