ಪ್ರಜಾತಾಂತ್ರಿಕ ಶಕ್ತಿಗಳೊಂದಿಗೆ ನಿಲ್ಲದೆ ದ್ರೋಹ : ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗೆ ಬೆಂಬಲಿಸಿದ ವೈಎಸ್ಆರ್ಸಿಪಿ ವಿರುದ್ಧ ಕಾಂಗ್ರೆಸ್ ಟೀಕೆ
Update: 2025-09-09 11:01 IST
Photo | PTI
ಹೊಸದಿಲ್ಲಿ : ಉಪರಾಷ್ಟ್ರಪತಿ ಚುನಾವಣೆಗೂ ಮುನ್ನ ಎನ್ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರನ್ನು ಬೆಂಬಲಿಸಿದ ವೈಎಸ್ಆರ್ಸಿಪಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರನ್ನು ಕಾಂಗ್ರೆಸ್ ಟೀಕಿಸಿದೆ. ಪ್ರಜಾತಾಂತ್ರಿಕ ಶಕ್ತಿಗಳೊಂದಿಗೆ ನಿಲ್ಲುವ ಬದಲು ಜಗನ್ ಮೋಹನ್ ರೆಡ್ಡಿ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಮಾಣಿಕ್ಕಂ ಠಾಗೋರ್, ಆಂಧ್ರಪ್ರದೇಶದ ಹಿತಾಸಕ್ತಿಗಳಿಗಿಂತ ಸಿಬಿಐ ಭಯದಿಂದ ಆರೆಸ್ಸೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ತಾವು ಮಾಡಿದ ದ್ರೋಹವನ್ನು ಆಂಧ್ರಪ್ರದೇಶದ ಜನರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
"ಇದು ತಂತ್ರ ಅಲ್ಲ. ಪ್ರಜಾತಾಂತ್ರಿಕ ಶಕ್ತಿಗಳೊಂದಿಗೆ ನಿಲ್ಲುವ ಬದಲು ಮೋದಿ ಮತ್ತು ಚಂದ್ರ ಬಾಬು ನಾಯ್ಡು ಅವರ ಒತ್ತಡದ ಮುಂದೆ ಶರಣಾಗತಿ" ಎಂದು ಜಗನ್ ಮೋಹನ್ ರೆಡ್ಡಿ ಅವರನ್ನು ಠಾಗೋರ್ ಟೀಕಿಸಿದ್ದಾರೆ.