×
Ad

ವಶಪಡಿಸಿಕೊಂಡ ಮದ್ಯ ನಾಶಕ್ಕೆ ಮುಂದಾದ ಪೊಲೀಸರು: ಒಮ್ಮೆಲೇ ಮುತ್ತಿಕ್ಕಿ ಬಾಟಲಿ ಎತ್ತಿಕೊಂಡು ಓಡಿದ ಜನರು!

Update: 2024-09-10 23:40 IST

Video Grab : x/@ians_india

ಗುಂಟೂರು : ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಪೊಲೀಸರು ಬುಲ್ಡೋಝರ್ ಬಳಸಿ ನಾಶ ಮಾಡಲು ಮುಂದಾದಾಗ, ಒಮ್ಮೆಲೇ ಮುತ್ತಿಕ್ಕಿ ಬಾಟಲಿ ಎತ್ತುಕೊಂಡು ಜನರು ಪರಾರಿಯಾಗಿದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ವಶಪಡಿಸಿಕೊಂಡ 50 ಲಕ್ಷ ರೂ. ಮೌಲ್ಯದ ಮದ್ಯವನ್ನು ಬುಲ್ಡೋಝರ್ ಬಳಸಿ ನಾಶಮಾಡಲು ಪೊಲೀಸರು ನೆಲದ ಮೇಲೆ ಹಾಸಿದ್ದರು. ಇನ್ನೇನು ಬುಲ್ಡೋಝರ್ ಕೊಕ್ಕೆ ಮದ್ಯದ ಬಾಟಲಿಗೆ ತಾಗಬೇಕು ಅನ್ನುವಾಗ ಒಮ್ಮೆಲೇ ಜೇನು ನೊಣಗಳು ದಾಳಿಮಾಡುವಂತೆ ಜನರ ಗುಂಪು ಮದ್ಯದ ಬಾಟಲಿಯಿದ್ದೆಡೆಗೆ ನುಗ್ಗಿತು.

ಒಮ್ಮೆಲೇ ಗಲಿಬಿಲಿಯಾದ ಪೊಲೀಸರು ತಡೆಯುವ ಪ್ರಯತ್ನ ಮಾಡಿದರೂ, ಜನರು ಕೈಯಲ್ಲಿ ಹಿಡಿಯುವಷ್ಟು ಮದ್ಯದ ಬಾಟಲಿಗಳನ್ನು ಎತ್ತಿಕೊಂಡು ಜಾಗ ಖಾಲಿ ಮಾಡಿದ್ದಾರೆ. ಪೊಲೀಸರು ಕೆಲವರನ್ನು ಹಿಡಿಯಲು ಪ್ರಯತ್ನಿಸಿದರೂ, ಅದಾಗಲೇ ಮದ್ಯದ ಬಾಟಲಿ ಕದ್ದುಕೊಂಡು ಹಲವರು ಪರಾರಿಯಾಗಿದ್ದರು. ಒಂದಿಬ್ಬರು ಮಾತ್ರ ಕೈಗೆ ಸಿಕ್ಕರೂ, ಅವರು ಒಲ್ಲದ ಮನಸ್ಸಿನಿಂದ ಮದ್ಯದ ಬಾಟಲಿಯನ್ನು ವಾಪಸು ಇಡುವುದು ವೀಡಿಯೊದಲ್ಲಿ ಸೆರೆಯಾಗಿದೆ.

ಘಟನೆಯಿಂದ ವಿಚಲಿತರಾಗಿರುವ ಪೊಲೀಸರು ಈಗ ತನಿಖೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News