×
Ad

ಕಾರ್ಯಾಚರಣೆಯಲ್ಲಿ ಕಾಡಾನೆ ʼತನ್ನೀರ್ ಕೊಂಬನ್ʼ ಸಾವು : ತನಿಖೆಗೆ ಆದೇಶ

Update: 2024-02-03 21:46 IST

Photo: X \ @Parthiban951428

ವಯನಾಡ್ : ಬಂಡೀಪುರದ ರಾಮಪುರ ಆನೆ ಶಿಬಿರದಲ್ಲಿ ʼತನ್ನೀರ್ ಕೊಂಬನ್ʼ ಕಾಡಾನೆಯನ್ನು ಸ್ಥಾಳಾಂತರಿಸುವ ಕಾರ್ಯಾಚರಣೆಯ ವೇಳೆ ಶನಿವಾರ ಮೃತಪಟ್ಟಿದ್ದು, ಈ ಘಟನೆಯ ಕುರಿತು ಕೇರಳದ ಅರಣ್ಯ ಸಚಿವ ಎ.ಕೆ.ಶಶಿಧರನ್ ತನಿಖೆ ನಡೆಸಲು ಆದೇಶ ಮಾಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಕಾಡಾನೆಯೊಂದು ನೀರಿನ ದಾಹ ನೀಗಿಸಿಕೊಳ್ಳಲು ಕರ್ನಾಟಕದ ಹಾಸನದಲ್ಲಿರುವ ಒಂದು ಕಾಫಿ ತೋಟಕ್ಕೆ ನುಗ್ಗಿ ನೀರಿನ ಪೈಪ್ ಗಳನ್ನು ನಾಶಗೊಳಿಸಿತ್ತು. ಅರಿವಳಿಕೆ ಮದ್ದು ನೀಡುವ ಮೂಲಕ ಜನವರಿ 16 ರಂದು ಆನೆಯನ್ನು ಸೆರೆ ಹಿಡಿಯಲಾಗಿತ್ತು. ಈ ಆನೆಗೆ ʼತನ್ನೀರ್ ಕೊಂಬನ್ʼ ಎಂದು ಹೆಸರಿಟ್ಟು, ರೇಡಿಯೊ ಕಾಲರ್ ಅಳವಡಿಸಿ ಮರಳಿ ಕಾಡಿಗೆ ಬಿಡಲಾಗಿತ್ತು.

ಶುಕ್ರವಾರದಂದು ʼತನ್ನೀರ್ ಕೊಂಬನ್ʼ ಆನೆ ವಯನಾಡ್ ನಲ್ಲಿ ಕಾಣಿಸಿಕೊಂಡಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ವಿಶಾಲ್ ಸಾಗರ್ ಭಾರತ್ ಆನೆಸೆರೆ ಕಾರ್ಯಾಚರಣೆಯು ಸುಗಮವಾಗಿ ನಡೆಯಲು ಅನುಕೂಲ ಆಗುವ ನಿಟ್ಟಿನಲ್ಲಿ ಶುಕ್ರವಾರ ಬೆಳಿಗ್ಗೆ 10 ರಿಂದಲೇ ವಯನಾಡ್ ಭಾಗದಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದರು. ಕಾರ್ಯಾಚರಣೆ ಆರಂಭಗೊಂಡರೂ ಜನದಟ್ಟನೆಯನ್ನು ನಿಯಂತ್ರಿಸಲು ಸಂಜೆ 5 ಗಂಟೆಯವರೆಗೂ ಸಾಧ್ಯವಾಗಿರಲಿಲ್ಲ.

ಆನೆಗೆ ಮೊದಲನೇ ಅರಿವಳಿಕೆಯನ್ನು 5.35ರ ಹೊತ್ತಿಗೆ ನೀಡಲಾಗಿತ್ತು. ಎರಡನೇ ಅರಿವಳಿಕೆಯನ್ನು 6.18ಕ್ಕೆ ನೀಡಲಾಗಿತ್ತು. ಇಂಥಹ ಕಾರ್ಯಾಚರಣೆಗಳನ್ನು ಸಂಜೆ ನಂತರ ಕೈಗೊಳ್ಳಬಾರದು ಎಂದು ಪರಿಣಿತರು ಹೇಳಿದ್ದಾರೆ.

ಕಾರ್ಯಾಚರಣೆಯು ಸಂಜೆ ಆರಂಭವಾಗಿದ್ದರಿಂದ, ಆನೆಯನ್ನು ಶಾಂತಗೊಳಿಸಲು ನೀರು ಸಿಂಪಡಿಸುವ ಪ್ರಕ್ರಿಯೆಯನ್ನು ಮಾಡಲು ಅರಣ್ಯ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಕಾರ್ಯಾಚರಣೆಯಲ್ಲಿ ತರಬೇತಿ ಹೊಂದಿದ್ದ ಮೂರು ಕುಮ್ಕಿ ಆನೆಗಳನ್ನು ಬಳಸಲಾಗಿತ್ತು. ಆನೆಯನ್ನು ಆಂಬುಲೆನ್ಸ್ ಗೆ ಸ್ಥಳಾಂತರಿಸುವಾಗ ಸಮಯ ರಾತ್ರಿ 10.30 ಆಗಿತ್ತು.

ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯು ಆನೆಯನ್ನು ಹಿಡಿಯಲು ಆದೇಶಿಸಿದ್ದರು. ಆನೆಯನ್ನು ಮರಳಿ ಕಾಡಿಗೆ ಕಳುಹಿಸುವ ಪ್ರಕ್ರಿಯೆಯೂ ಸಾಧ್ಯವಾಗಿಲ್ಲ. ಹಾಗೂ ಜನರನ್ನು ಚದುರಿಸಿ ಆನೆಯನ್ನು ಮರಳಿ ಕಾಡಿಗೆ ತೆರಳಲು ಅವಕಾಶ ನೀಡಲಿಲ್ಲ. ಅಧಿಕಾರಿಗಳು ಇಡೀ ಕಾರ್ಯಾಚರಣೆಯನ್ನು ನಿರ್ವಹಿಸಿದ ಕ್ರಮವೇ ಸರಿಯಾಗಿಲ್ಲ ಎಂದು ಪರಿಣಿತರು ಹೇಳಿದ್ದಾರೆ.

ಈ ಘಟನೆಯ ಕುರಿತು ಕೇರಳ ಅರಣ್ಯ ಸಚಿವ ಎ.ಕೆ.ಶಶಿಧರನ್ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಹೇಳಿದ್ದಾರೆ. ಕೇರಳ ಮತ್ತು ಕರ್ನಾಟಕದ ಪಶುವೈದ್ಯಾಧಿಕಾರಿಗಳನ್ನು ಒಳಗೊಂಡ ತಂಡ ಜಂಟಿಯಾಗಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಿದೆ ಎಂದು ತಿಳಿದು ಬಂದಿದೆ.

ಆನೆ ಸೆರೆ ಹಿಡಿಯಲು ಅಗತ್ಯ ಆದೇಶವನ್ನು ಪಡೆಯುವಲ್ಲಿ ವಿಳಂಬವಾಗಿದೆ. ಆನೆ ಸೆರೆಹಿಡಿಯುವಲ್ಲಿ ಯಾವುದೇ ಲೋಪಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News