ಸಿಂಗಯ್ಯ ಸಾವು ಪ್ರಕರಣ | ಜಗನ್ಮೋಹನ್ ರೆಡ್ಡಿ ವಿರುದ್ಧದ ತನಿಖೆಗೆ ಆಂಧ್ರಪ್ರದೇಶ ಹೈಕೋರ್ಟ್ ತಡೆ
ಜಗನ್ ಮೋಹನ್ ರೆಡ್ಡಿ | PC : PTI
ಚೆನ್ನೈ: ವೈಎಸ್ಆರ್ಸಿಪಿ ಕಾರ್ಯಕರ್ತ ಸಿಂಗಯ್ಯ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್ಆರ್ಸಿಪಿ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧದ ತನಿಖೆಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ತಡೆ ವಿಧಿಸಿದೆ.
ವೀಡಿಯೊ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105ರ ಅಡಿಯಲ್ಲಿ ದಾಖಲಾದ ಪ್ರಕರಣವನ್ನು ಸೆಕ್ಷನ್ 106 ಅಡಿಯಲ್ಲಿ ಬರುವಂತೆ ತಿದ್ದುಪಡಿ ಮಾಡಿದ್ದರು ಎಂದು ಹೇಳಲಾಗಿದೆ.
ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹಾಗೂ ಇತರ ಆರೋಪಿಗಳು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಹಿಂದಿನ ವಿಚಾರಣೆ ಸಂದರ್ಭ ನ್ಯಾಯಾಲಯ ರಸ್ತೆ ಅಪಘಾತದಲ್ಲಿ ಕಾರಿನಲ್ಲಿರುವ ಪ್ರಯಾಣಿಕರನ್ನು ಆರೋಪಿಗಳು ಎಂದು ಹೆಸರಿಸುವುದರ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿತ್ತು. ಅನಂತರ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿತ್ತು.
ಮಂಗಳವಾರ ವಿಚಾರಣೆ ಸಂದರ್ಭ ಟಿಡಿಪಿ ನೇತೃತ್ವದ ರಾಜ್ಯ ಸರಕಾರವನ್ನು ಪ್ರತಿನಿಧಿಸಿದ ಅಡ್ವೊಕೇಟ್ ಜನರಲ್ ಪ್ರತಿ ಅಫಿಡವಿಟ್ ಸಲ್ಲಿಸಲು ಮತ್ತೆರೆಡು ವಾರಗಳ ಸಮಯಾವಕಾಶ ಕೋರಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ, ಪ್ರಕರಣವನ್ನು ರದ್ದುಗೊಳಿಸಲು ಎಫ್ಐಆರ್ ನ ವಿಷಯಗಳು ಸಾಕಷ್ಟು ಆಧಾರವನ್ನು ಒದಗಿಸುತ್ತದೆ ಎಂದು ಅಭಿಪ್ರಾಯಿಸಿತು.