×
Ad

ರಾಷ್ಟ್ರಪತಿ ಮುರ್ಮು ಭೇಟಿ ಕುರಿತು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಗದ್ದಲ

► ರಾಷ್ಟ್ರಪತಿಗಳ ಕಾರ್ಯಕ್ರಮದ ಬಗ್ಗೆ ತನಗೆ ಮಾಹಿತಿ ಇರಲಿಲ್ಲ ಎಂದ ಸಿಎಂ ಮಮತಾ ಬ್ಯಾನರ್ಜಿ ► ತೃಣಮೂಲ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

Update: 2026-03-08 12:27 IST

ರಾಷ್ಟ್ರಪತಿ ದ್ರೌಪದಿ ಮುರ್ಮು (Photo: X/@rashtrapatibhvn)

ಕೊಲ್ಕತ್ತಾ/ಡಾರ್ಜಿಲಿಂಗ್: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉತ್ತರ ಬಂಗಾಳ ಭೇಟಿ ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮದ ಸ್ಥಳ ಬದಲಾವಣೆ ಹಾಗೂ ರಾಜ್ಯ ಸರ್ಕಾರದ ಶಿಷ್ಟಾಚಾರ ಪಾಲನೆ ಕುರಿತು ರಾಷ್ಟ್ರಪತಿ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ತೀವ್ರ ವಾಗ್ವಾದ ಶುರುವಾಗಿದೆ.

ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿ ಸಮೀಪದ ಗೊಸೈನ್ಪುರದಲ್ಲಿ ನಡೆದ 9ನೇ ಅಂತರರಾಷ್ಟ್ರೀಯ ಆದಿವಾಸಿ ಸಂತಾಲ್ ಸಮ್ಮೇಳನದಲ್ಲಿ ಭಾಗವಹಿಸಿದ ರಾಷ್ಟ್ರಪತಿ ಮುರ್ಮು, ಕಾರ್ಯಕ್ರಮದ ಸ್ಥಳ ಬದಲಾವಣೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಥವಾ ಅವರ ಸಂಪುಟದ ಯಾವುದೇ ಸಚಿವರು ಸ್ವಾಗತಕ್ಕೆ ಹಾಜರಾಗದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

“ರಾಜ್ಯ ಆಡಳಿತವು ಅಲ್ಲಿ ಸಭೆಗೆ ಏಕೆ ಅವಕಾಶ ನೀಡಲಿಲ್ಲ ಎಂಬುದು ನನಗೆ ತಿಳಿದಿಲ್ಲ. ಸಾಕಷ್ಟು ಸ್ಥಳಾವಕಾಶವಿದೆ. ನಾನು ಬಂಗಾಳದ ಮಗಳು ಕೂಡ. ಮಮತಾ ಬ್ಯಾನರ್ಜಿ ನನ್ನ ತಂಗಿಯಂತೆಯೇ. ಅವರು ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ ಅದು ಅಪ್ರಸ್ತುತ. ನೀವು ಎಲ್ಲರೂ ಚೆನ್ನಾಗಿರಿ,” ಎಂದು ರಾಷ್ಟ್ರಪತಿ ಮುರ್ಮು ಹೇಳಿದರು.

►ಸ್ಥಳ ಬದಲಾವಣೆಗೆ ಅಸಮಾಧಾನ

ರಾಷ್ಟ್ರಪತಿಗಳು ಭಾಗವಹಿಸಿದ್ದ ಸಮ್ಮೇಳನವನ್ನು ಮೊದಲಿಗೆ ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿದೇವಾ ಬ್ಲಾಕ್ನ ಬಿಧಾನ್ನಗರದಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ನಂತರ ಅದನ್ನು ಸಿಲಿಗುರಿಯ ಹೊರವಲಯದಲ್ಲಿರುವ ಬಾಗ್ಡೋಗ್ರಾ ಸಮೀಪದ ಗೊಸೈನ್ಪುರಕ್ಕೆ ಸರಕಾರ ಬದಲಾಯಿಸಿತ್ತು.

ಗೊಸೈನ್ಪುರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ರಾಷ್ಟ್ರಪತಿ ಮುರ್ಮು ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಬಿಧಾನ್ನಗರಕ್ಕೆ ತೆರಳಿ ಮಾತನಾಡುವ ವೇಳೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

“ಈ ಸ್ಥಳ ಜನದಟ್ಟಣೆಯಿಂದ ಕೂಡಿದೆ ಎಂದು ಹೋಗಲು ಸಾಧ್ಯವಿಲ್ಲ ಎಂದು ರಾಜ್ಯದ ಆಡಳಿತವು ಹೇಳಿತು. ಆದರೆ ಇಲ್ಲಿ ಐದು ಲಕ್ಷ ಜನರು ಸುಲಭವಾಗಿ ಸೇರಬಹುದು ಎಂದು ನಾನು ಭಾವಿಸುತ್ತೇನೆ. ಸಂತಾಲ್ ಜನರು ಸುಲಭವಾಗಿ ತಲುಪಲು ಸಾಧ್ಯವಾಗದ ಸ್ಥಳದಲ್ಲಿ ಸಮ್ಮೇಳನ ನಡೆಸಲಾಗಿದೆ. ಇದರಿಂದ ನನಗೆ ತುಂಬಾ ದುಃಖವಾಗಿದೆ,” ಎಂದು ಅವರು ಹೇಳಿದರು.

►ಪ್ರಧಾನಿ, ಬಿಜೆಪಿ ನಾಯಕರಿಂದ ಟೀಕೆ

ರಾಷ್ಟ್ರಪತಿಗಳ ಹೇಳಿಕೆಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಕೂಡ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೇಳಿಕೆಗಳಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅವರು, ಸಂತಾಲ್ ಸಂಸ್ಕೃತಿಯನ್ನು ತೃಣಮೂಲ ಕಾಂಗ್ರೆಸ್ ಅವಮಾನಿಸುವಂತೆ ವರ್ತಿಸಿದೆ ಎಂದು ಆರೋಪಿಸಿದರು. ರಾಷ್ಟ್ರಪತಿಗಳು ಸ್ವತಃ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದರು. ರಾಷ್ಟ್ರಪತಿ ಹುದ್ದೆ ರಾಜಕೀಯಕ್ಕಿಂತ ಮೇಲಿದ್ದು ಅದರ ಘನತೆಯನ್ನು ಯಾವಾಗಲೂ ಕಾಪಾಡಬೇಕು,” ಎಂದು ಅವರು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, “ಶಿಷ್ಟಾಚಾರವನ್ನು ಸ್ಪಷ್ಟವಾಗಿ ನಿರ್ಲಕ್ಷಿಸುವ ಮೂಲಕ ಭಾರತದ ರಾಷ್ಟ್ರಪತಿಯನ್ನು ಅವಮಾನಿಸುವ ಮಟ್ಟಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಇಳಿದಿದೆ. ಇದು ದೇಶದ ಸಾಂವಿಧಾನಿಕ ಮೌಲ್ಯಗಳಿಗೆ ಮಾಡಿದ ಅವಮಾನ,” ಎಂದು ಹೇಳಿದರು.

“ನಮ್ಮ ಬುಡಕಟ್ಟು ಸಹೋದರ–ಸಹೋದರಿಯರು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಅಗೌರವ ತೋರಿಸಲಾಗಿದೆ. ಇದು ರಾಷ್ಟ್ರ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುವ ಮೌಲ್ಯಗಳಿಗೆ ಮಾಡಿದ ಅವಮಾನ,” ಎಂದು ಅವರು ಹೇಳಿದರು.

ಉಪಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಕೂಡ ಪ್ರತಿಕ್ರಿಯಿಸಿ, ರಾಷ್ಟ್ರಪತಿ ಹುದ್ದೆಗೆ ಯೋಗ್ಯವಾದ ಗೌರವ ಮತ್ತು ಶಿಷ್ಟಾಚಾರ ನೀಡುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

“ರಾಷ್ಟ್ರಪತಿ ಹುದ್ದೆ ನಮ್ಮ ಗಣರಾಜ್ಯದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾಗಿದ್ದು, ಅದಕ್ಕೆ ಸಲ್ಲಬೇಕಾದ ಘನತೆ ಮತ್ತು ಗೌರವ ಯಾವಾಗಲೂ ನೀಡಬೇಕು. ಪಶ್ಚಿಮ ಬಂಗಾಳದಲ್ಲಿ ಅವರ ಸಾಂವಿಧಾನಿಕ ಸ್ಥಾನಕ್ಕೆ ಯೋಗ್ಯವಾದ ವ್ಯವಸ್ಥೆಗಳಲ್ಲಿ ಲೋಪ ಸಂಭವಿಸಿದ್ದರೆ ಅದು ದುರದೃಷ್ಟಕರ,” ಎಂದು ಅವರು ಹೇಳಿದರು.

►ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ

ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಷ್ಟ್ರಪತಿಗಳ ಕಾರ್ಯಕ್ರಮದ ಬಗ್ಗೆ ತನಗೆ ಮಾಹಿತಿ ಇರಲಿಲ್ಲ ಎಂದು ಹೇಳಿದರು.

“ಕಾರ್ಯಕ್ರಮವನ್ನು ಯಾರು ಆಯೋಜಿಸುತ್ತಿದ್ದಾರೆ, ಯಾರು ಭಾಗವಹಿಸುತ್ತಿದ್ದಾರೆ, ಯಾರು ಹಣಕಾಸು ಒದಗಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ನಾವು ರಾಷ್ಟ್ರಪತಿಯನ್ನು ಗೌರವಿಸುತ್ತೇವೆ. ನೀವು ದೇಶದ ನಂಬರ್ ಒನ್ ಕುರ್ಚಿಯನ್ನು ಪ್ರತಿನಿಧಿಸುತ್ತಿದ್ದೀರಿ,” ಎಂದು ಅವರು ಹೇಳಿದರು.

ಅವರು ಮತ್ತಷ್ಟು ಹೇಳುವಾಗ, “ಬಿಜೆಪಿಯ ಸಲಹೆಯಂತೆ ಚುನಾವಣೆಯ ಸಮಯದಲ್ಲಿ ರಾಜಕೀಯ ಮಾಡಬೇಡಿ,” ಎಂದು ರಾಷ್ಟ್ರಪತಿಗಳಿಗೆ ಹೇಳಿದರು.

►ಶಿಷ್ಟಾಚಾರ ಉಲ್ಲಂಘನೆ ಇಲ್ಲ: ರಾಜ್ಯ ಸರ್ಕಾರ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಮತಾ ಬ್ಯಾನರ್ಜಿ, ರಾಜ್ಯ ಆಡಳಿತದಿಂದ ಯಾವುದೇ ಶಿಷ್ಟಾಚಾರ ಉಲ್ಲಂಘನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

“ಮಾನ್ಯ ರಾಷ್ಟ್ರಪತಿಗಳನ್ನು ಸಿಲಿಗುರಿ ಮಹಾನಗರ ಪಾಲಿಕೆಯ ಮೇಯರ್, ಡಾರ್ಜಿಲಿಂಗ್ ಜಿಲ್ಲಾಧಿಕಾರಿ ಮತ್ತು ಸಿಲಿಗುರಿ ಪೊಲೀಸ್ ಕಮಿಷನರ್ ಸ್ವಾಗತಿಸಿ ಬೀಳ್ಕೊಟ್ಟಿದ್ದಾರೆ. ಪೂರ್ವಾನುಮೋದಿತ ಯೋಜನೆಯ ಪ್ರಕಾರ ಮುಖ್ಯಮಂತ್ರಿ ಅಥವಾ ಸಚಿವರು ತಂಡದ ಭಾಗವಾಗಿರಲಿಲ್ಲ. ಜಿಲ್ಲಾಡಳಿತದ ಕಡೆಯಿಂದ ಯಾವುದೇ ಶಿಷ್ಟಾಚಾರ ಉಲ್ಲಂಘನೆ ನಡೆದಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಸಿಲಿಗುರಿಯಲ್ಲಿ ನಡೆದ 9ನೇ ಅಂತರರಾಷ್ಟ್ರೀಯ ಆದಿವಾಸಿ ಸಂತಾಲ್ ಸಮ್ಮೇಳನಕ್ಕೆ ಖಾಸಗಿ ಸಂಸ್ಥೆಯಾದ ಅಂತರರಾಷ್ಟ್ರೀಯ ಸಂತಾಲ್ ಕೌನ್ಸಿಲ್ ರಾಷ್ಟ್ರಪತಿಗಳನ್ನು ಆಹ್ವಾನಿಸಿತ್ತು ಎಂದು ಅವರು ಹೇಳಿದರು.

ಭದ್ರತಾ ಪರಿಶೀಲನೆಯ ವೇಳೆ ಕಾರ್ಯಕ್ರಮದ ಸ್ಥಳದಲ್ಲಿ ಅಗತ್ಯ ವ್ಯವಸ್ಥೆಗಳ ಕೊರತೆ ಕಂಡುಬಂದಿದ್ದರಿಂದ ಜಿಲ್ಲಾಡಳಿತವು ರಾಷ್ಟ್ರಪತಿಗಳ ಸಚಿವಾಲಯಕ್ಕೆ ಮುಂಚಿತವಾಗಿ ಲಿಖಿತವಾಗಿ ಹಾಗೂ ದೂರವಾಣಿ ಮೂಲಕ ಮಾಹಿತಿ ನೀಡಿತ್ತು ಎಂದು ಅವರು ತಿಳಿಸಿದರು.

►ಬಿಜೆಪಿ ವಿರುದ್ಧ ಆರೋಪ

ಬಿಜೆಪಿ ತನ್ನ ರಾಜಕೀಯ ಕಾರ್ಯಸೂಚಿಗಾಗಿ ರಾಷ್ಟ್ರಪತಿ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

“ನಾವು ರಾಷ್ಟ್ರಪತಿಯನ್ನು ಗೌರವಿಸುತ್ತೇವೆ. ಆದರೆ ದೇಶದ ಅತ್ಯುನ್ನತ ಹುದ್ದೆಯನ್ನು ತಮ್ಮ ಪಕ್ಷದ ಕಾರ್ಯಸೂಚಿಗಾಗಿ ಬಳಸುವುದು ಅತ್ಯಂತ ದುರದೃಷ್ಟಕರ,” ಎಂದು ಅವರು ಹೇಳಿದರು.

ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭೇಟಿಗೆ ಸಂಬಂಧಿಸಿದ ಈ ಬೆಳವಣಿಗೆ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News