ಜಗದೀಪ್ ಧನ್ಕರ್ ರಾಜೀನಾಮೆ ತತ್ಕ್ಷಣದಿಂದ ಜಾರಿ: ಕೇಂದ್ರ ಸರಕಾರ
ಜಗದೀಪ್ ಧನ್ಕರ್ | PTI
ಹೊಸದಿಲ್ಲಿ: ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನ್ಕರ್ ಅವರು ನೀಡಿದ ರಾಜೀನಾಮೆ ತತ್ಕ್ಷಣದಿಂದ ಜಾರಿಗೆ ಬಂದಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯನ್ನು ಮಂಗಳವಾರ ರಾಜ್ಯಸಭೆಗೆ ತಿಳಿಸಲಾಯಿತು.
ಶೂನ್ಯ ವೇಳೆ ಬಳಿಕ ಮಧ್ಯಾಹ್ನ 12 ಗಂಟೆಗೆ ರಾಜ್ಯಸಭೆಯ ಕಲಾಪ ಮತ್ತೆ ಆರಂಭವಾದಾಗ ಅಧ್ಯಕ್ಷೀಯ ಪೀಠದಲ್ಲಿದ್ದ ಘನಶ್ಯಾಮ ತಿವಾರಿ ಅಧಿಸೂಚನೆ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
‘‘2025 ಜುಲೈ 22ರ ಅಧಿಸೂಚನೆ ಕೇಂದ್ರ ಗೃಹ ಸಚಿವಾಲಯ ಸಂವಿಧಾನದ ವಿಧಿ 67 (ಎ)ರ ಅಡಿಯಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ರಾಜೀನಾಮೆ ತತ್ಕ್ಷಣ ಜಾರಿಗೆ ಬಂದಿದೆ ಎಂದು ತಿಳಿಸಿದೆ’’ ತಿವಾರಿ ಘೋಷಿಸಿದರು.
ಜಗದೀಪ್ ಧನ್ಕರ್ ಅವರು ಸೋಮವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.
‘‘ಆರೋಗ್ಯಕ್ಕೆ ಆದ್ಯತೆ ನೀಡಲು ಹಾಗೂ ವೈದ್ಯಕೀಯ ಸಲಹೆಯನ್ನು ಪಾಲಿಸಲು ತಾನು ಉಪ ರಾಷ್ಟ್ರಪತಿ ಹುದ್ದೆಗೆ ಸಂವಿಧಾನದ ವಿಧಿ 67 (ಎ)ಕ್ಕೆ ಅನುಗುಣವಾಗಿ ತತ್ಕ್ಷಣ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ’’ ಎಂದು ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದರು.
74 ವರ್ಷದ ಧನ್ಕರ್ ಅವರು 2022 ಆಗಸ್ಟ್ನಲ್ಲಿ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು.