ಸಾರ್ವಜನಿಕರು ಸಲ್ಲಿಸುವ ಅಹವಾಲು ಭಿಕ್ಷಾಟನೆ : ವಿವಾದ ಸೃಷ್ಟಿಸಿದ ಬಿಜೆಪಿ ನಾಯಕ ಪ್ರಹ್ಲಾದ್ ಪಟೇಲ್ ಹೇಳಿಕೆ
ಪ್ರಹ್ಲಾದ್ ಪಟೇಲ್ | PC : PTI
ಹೊಸದಿಲ್ಲಿ: ಸಾರ್ವಜನಿಕರು ಸಲ್ಲಿಸುವ ಅಹವಾಲು ಭಿಕ್ಷಾಟನೆ ಎಂದು ಹೇಳುವ ಮೂಲಕ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪ್ರಹ್ಲಾದ್ ಪಟೇಲ್ ವಿವಾದಕ್ಕೆ ಒಳಗಾಗಿದ್ದಾರೆ.
ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ಶನಿವಾರ ವೀರಾಂಗನಾ ರಾಣಿ ಅವಂತಿಭಾ ಲೋಧಿ ಪ್ರತಿಮೆಯ ಅನಾವರಣ ಕಾರ್ಯಕ್ರಮದಲ್ಲಿ ಅವರು ನೀಡಿದ ಈ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸಭೆ ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಪಟೇಲ್, ಸರಕಾರದಿಂದ ಭಿಕ್ಷೆ ಬೇಡುವ ಹವ್ಯಾಸವನ್ನು ಜನರು ರೂಢಿಸಿಕೊಂಡಿದ್ದಾರೆ. ನಾಯಕರು ಸಿಕ್ಕಿದಾಗಲೆಲ್ಲ ಅವರಿಗೆ ಮನವಿಯನ್ನು ನೀಡುತ್ತಲೇ ಇರುತ್ತಾರೆ. ವೇದಿಕೆಯಲ್ಲಿ ನಾಯಕರಿಗೆ ಹೂ ಹಾರ ಹಾಕುತ್ತಾರೆ ಹಾಗೂ ಅವರ ಕೈಯಲ್ಲಿ ಮನವಿ ಪತ್ರ ಇರಿಸುತ್ತಾರೆ. ಇದು ಉತ್ತಮ ಅಭ್ಯಾಸ ಅಲ್ಲ. ಕೇಳುವ ಬದಲು ಕೊಡುವ ಮನೋಭಾವ ಬೆಳೆಸಿಕೊಳ್ಳಿ. ಇದು ಸಂತೋಷದ ಬದುಕಿಗೆ ಹಾಗೂ ಸುಸಂಸ್ಕೃತ ಜೀವನವನ್ನು ರೂಪಿಸಲು ಕಾರಣವಾಗುತ್ತದೆ ಎಂದರು.
ಉಚಿತ ಕೊಡುಗೆಗಳ ಮೇಲೆ ಅತಿಯಾದ ಅವಲಂಬನೆ ಸಮಾಜವನ್ನು ಸಬಲಗೊಳಿಸುವ ಬದಲು ದುರ್ಬಲಗೊಳಿಸುತ್ತಿದೆ. ಈ ಭಿಕ್ಷುಕರ ಸೇನೆ ಸಮಾಜವನ್ನು ಸಬಲಗೊಳಿಸದು. ಅದು ಅಸಮಾಜವನ್ನು ದುರ್ಬಲಗೊಳಿಸುತ್ತದೆ. ಉಚಿತ ಯೋಜನೆಗಳ ಕಡೆಗಿನ ಆಕರ್ಷಣೆ ಧೈರ್ಯಶಾಲಿ ಮಹಿಳೆಯರ ಗೌರವದ ಸಂಕೇತವಲ್ಲ ಎಂದು ಅವರು ಹೇಳಿದರು.
‘‘ಭಿಕ್ಷೆ ಬೇಡಿದ ಯಾರಾದರೂ ಹುತಾತ್ಮರ ಹೆಸರು ನೀವು ಹೇಳಬಲ್ಲಿರಾ? ಹಾಗಿದ್ದರೆ, ನನಗೆ ತಿಳಿಸಿ. ಇದರ ಹೊರತಾಗಿ ನಾವು ಕಾರ್ಯಕ್ರಮಗಳ ಆಯೋಜನೆಯನ್ನು ಮುಂದುವರಿಸುತ್ತೇವೆ, ಭಾಷಣ ಮಾಡುತ್ತೇವೆ ಹಾಗೂ ಮುಂದುವರಿಯುತ್ತೇವೆ. ನರ್ಮದಾ ಪರಿಕ್ರಮ ಯಾತ್ರಿಕನಾಗಿ ನಾನು ಭಿಕ್ಷೇ ಬೇಡಿದ್ದೇನೆ. ಆದರೆ, ಅದು ಎಂದಿಗೂ ನನಗಾಗಿ ಅಲ್ಲ. ಪ್ರಹ್ಲಾದ್ ಪಟೇಲ್ಗೆ ಏನಾನ್ನಾದರೂ ನೀಡಿದ್ದೇವೆಂದು ಯಾರೊಬ್ಬರೂ ಹೇಳಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.
ಪಟೇಲ್ ಅವರ ಹೇಳಿಕೆಯನ್ನು ಪ್ರತಿಪಕ್ಷವಾದ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, ಅವರ ಹೇಳಿಕೆ ರಾಜ್ಯದ ಜನರಿಗೆ ಮಾಡುತ್ತಿರುವ ಅವಮಾನ ಎಂದಿದ್ದಾರೆ.
‘‘ಬಿಜೆಪಿಯ ದುರಹಂಕಾರ ಈಗ ಸಾರ್ವಜನಿಕರನ್ನು ಭಿಕ್ಷುಕರು ಎಂದು ಕರೆಯುವ ಮಟ್ಟಕ್ಕೆ ತಲುಪಿದೆ. ಇದು ಕಷ್ಟಗಳ ಜೊತೆ ಹೋರಾಡುವವರ ಭರವಸೆ ಹಾಗೂ ಕಣ್ಣೀರಿಗೆ ಮಾಡುವ ಅವಮಾನವಾಗಿದೆ. ಅವರು ಚುನಾವಣೆ ಮುನ್ನ ಹುಸಿ ಭರವಸೆ ನೀಡಿದರು. ಅನಂತರ ಈಡೇರಿಸಲು ನಿರಾಕರಿಸಿದರು. ಜನರು ಅವರಿಗೆ ನೆನಪಿಸಿದರೆ, ಅವರು ಲಜ್ಜೆಯಿಲ್ಲದೆ ಅವರನ್ನು ಭಿಕ್ಷುಕರು ಎಂದು ಕರೆಯುತ್ತಾರೆ ! ನೆನಪಿಡಿ, ಶೀಘ್ರದಲ್ಲಿ ಈ ಬಿಜೆಪಿ ನಾಯಕರು ಮತಕ್ಕಾಗಿ ಬಿಕ್ಷೆ ಬೇಡಲು ಬರಲಿದ್ದಾರೆ!’’ ಪಟ್ವಾರಿ ಹೇಳಿದ್ದಾರೆ.