×
Ad

ಮಧ್ಯಪ್ರದೇಶ | ಕಾಲೇಜೊಂದರಲ್ಲಿ ಉತ್ತರ ಪತ್ರಿಕೆಗಳನ್ನು ಜವಾನ ಮೌಲ್ಯಮಾಪನ ಮಾಡುತ್ತಿರುವ ವಿಡಿಯೊ ವೈರಲ್: ಪ್ರಾಂಶುಪಾಲರ ಅಮಾನತು

Update: 2025-04-08 22:02 IST

PC : X 

ನರ್ಮದಾಪುರಂ: ಮಧ್ಯಪ್ರದೇಶದ ಸರಕಾರಿ ಕಾಲೇಜೊಂದರ ಜವಾನನೊಬ್ಬ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವ ವಿಡಿಯೊ ವೈರಲ್ ಆದ ಬೆನ್ನಿಗೇ, ಕಾಲೇಜಿನ ಪ್ರಾಂಶುಪಾಲ ಹಾಗೂ ಓರ್ವ ಪ್ರಾಧ್ಯಾಪಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಕೃತ್ಯದಿಂದ ನೊಂದ ವಿದ್ಯಾರ್ಥಿಗಳು ಸ್ಥಳೀಯ ಶಾಸಕ ಠಾಕೂರ್ ದಾಸ್ ರನ್ನು ಸಂಪರ್ಕಿಸಿದ ನಂತರ, ಈ ಕುರಿತು ಅವರು ಸಂಬಂಧಿತ ಪ್ರಾಧಿಕಾರಗಳಿಗೆ ದೂರು ಸಲ್ಲಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಪೈಪರಿಯ ಮೂಲದ ಭಗತ್ ಸಿಂಗ್ ಸರಕಾರಿ ಕಾಲೇಜಿನ ಪ್ರಾಂಶುಪಾಲ ರಾಕೇಶ್ ವರ್ಮ, ಎಪ್ರಿಲ್ 4ರಂದು ನನ್ನನ್ನು ಹಾಗೂ ಪ್ರಾಧ್ಯಾ ಪಕ ರಾಮ್ ಗುಲಾಂ ಪಟೇಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಯೋಜಿತರಾಗಿದ್ದ ಅತಿಥಿ ಉಪನ್ಯಾಸಕರೊಬ್ಬರು, ಅವನ್ನು ಕಾಲೇಜಿನ ಬುಕ್ ಲಿಫ್ಟರ್ ಮೂಲಕ ಜವಾನನಿಗೆ ಹಸ್ತಾಂತರಿಸಿದ್ದರು ಎಂದು ರಾಕೇಶ್ ವರ್ಮ ಹೇಳಿದ್ದಾರೆ.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯದಮಗಳಲ್ಲಿ ವೈರಲ್ ಆದ ನಂತರ, ಈ ವರ್ಷದ ಜನವರಿ ತಿಂಗಳಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಚಿಂಚ್ವಾಡದ ರಾಜಾ ಶಂಕರ್ ಶಾ ವಿಶ್ವದವಿದ್ಯಾಲಯವು ಪ್ರಾಧ್ಯಾ ಪಕ ರಾಮ್ ಗುಲಾಂ ಪಟೇಲ್ ಅವರನ್ನು ಮೌಲ್ಯಮಾಪನ ಕಾರ್ಯದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿತ್ತು ಎಂದೂ ಅವರು ಹೇಳಿದ್ದಾರೆ.

ಕಳೆದ ತಿಂಗಳು ರಾಮ್ ಗುಲಾಂ ಪಟೇಲ್ ಅವರನ್ನು ಮೌಲ್ಯಮಾಪನ ಕಾರ್ಯದ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿ ಹೊರಡಿಸಿರುವ ಆದೇಶ ಪತ್ರವನ್ನು ಹಂಚಿಕೊಂಡ ರಾಕೇಶ್ ವರ್ಮ, ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದೂ ಆರೋಪಿಸಿದ್ದಾರೆ.

ನನ್ನ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ನಾನು ಪ್ರೌಢ ಶಿಕ್ಷಣ ಮಂಡಳಿಗೆ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News