ದಿಲ್ಲಿ | ಕಾರು ಸ್ಫೋಟದ ಸ್ಥಳದ ಸಮೀಪ ಛಾವಣಿಯಲ್ಲಿ ತುಂಡಾದ ಕೈ ಪತ್ತೆ
Update: 2025-11-13 20:06 IST
Photo Credit : PTI
ಹೊಸದಿಲ್ಲಿ,ನ.13: ರಾಷ್ಟ್ರರಾಜಧಾನಿಯಲ್ಲಿ ಸೋಮವಾರ ಭೀಕರ ಕಾರು ಸ್ಫೋಟ ನಡೆದ ಕೆಂಪುಕೋಟೆ ಬಳಿಯಿರುವ ಅಂಗಡಿಯೊಂದರ ಚಾವಣಿಯಲ್ಲಿ ಕತ್ತರಿಸಲ್ಪಟ್ಟ ಕೈಯೊಂದು ಗುರುವಾರ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟ ನಡೆದ ಸ್ಥಳದಿಂದ ಕೆಲವೇ ಮೀಟರ್ಗಳಷ್ಟು ದೂರವಿರುವ ಜೈನ ದೇವಾಲಯದ ಹಿಂಭಾಗದಲ್ಲಿರುವ ಅಂಗಡಿಯೊಂದರ ಛಾವಣಿಯಲ್ಲಿ ತುಂಡಾದ ಕೈ ಪತ್ತೆಯಾಗಿದೆ.
ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದರು ಹಾಗೂ ಕೈಯ ಅವಶೇಷವನ್ನು ಸಂಗ್ರಹಿಸಿದರು.
ಸ್ಫೋಟದಲ್ಲಿ ಮೃತಪಟ್ಟವರ ಪೈಕಿ ಈ ಕೈ ಯಾರದ್ದೆಂಬುದನ್ನು ದೃಢಪಡಿಸಿಕೊಳ್ಳಲು ತುಂಡಾದ ಕೈಯನ್ನು ಅಪರಾಧ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ನವೆಂಬರ್ 10ರಂದು ಕೆಂಪುಕೋಟೆಯ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು.