ಕೇರಳ| ರಾಜಭವನದಲ್ಲಿ ಆರೆಸ್ಸೆಸ್ ನಾಯಕರ ಭಾವಚಿತ್ರ; ಎಸ್ಎಫ್ಐ ಪ್ರತಿಭಟನೆ
PC : X \ ANI
ತಿರುವನಂತಪುರಂ: ರಾಜ್ಯಪಾಲರ ಅಧಿಕೃತ ನಿವಾಸದಲ್ಲಿ ಆರೆಸ್ಸೆಸ್ ನಾಯಕರ ಫೋಟೋಗಳನ್ನು ಪ್ರದರ್ಶಿಸಿದ್ದನ್ನು ವಿರೋಧಿಸಿ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಕಾರ್ಯಕರ್ತರು ಸೋಮವಾರ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾಕಾರರ ಒಂದು ಗುಂಪು ರಾಜ್ಯಪಾಲರ ಅಧಿಕೃತ ನಿವಾಸದ ಆವರಣಕ್ಕೆ ನುಗ್ಗಲು ಪ್ರಯತ್ನಿಸಿದ್ದು, ಪೊಲೀಸರು ಬಲಪ್ರಯೋಗ ಮಾಡಿ ಅವರನ್ನು ತಡೆದಿದ್ದಾರೆ.
ಇತ್ತೀಚೆಗೆ ಕೆಲವು ಮಾಧ್ಯಮಗಳು ಕೇರಳ ರಾಜಭವನದಲ್ಲಿ ಭಾರತ ಮಾತೆಯ ಛಾಯಾಚಿತ್ರಗಳ ಜೊತೆಗೆ ಆರೆಸ್ಸೆಸ್ ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ ಮತ್ತು ಗೋಲ್ವಾಲ್ಕರ್ ಅವರ ಛಾಯಾಚಿತ್ರಗಳನ್ನು ಪ್ರದರ್ಶಿಸಿರುವ ಬಗ್ಗೆ ವರದಿ ಮಾಡಿದ್ದವು.
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಎಡಪಂಥೀಯ ವಿದ್ಯಾರ್ಥಿ ಕಾರ್ಯಕರ್ತರು ತಮ್ಮ ಕೈಯಲ್ಲಿ ಮಹಾತ್ಮ ಗಾಂಧಿ ಮತ್ತು ಬಿ ಆರ್ ಅಂಬೇಡ್ಕರ್ ಅವರ ಫೋಟೋಗಳನ್ನು ಹಿಡಿದು ರಾಜಭವನದ ಆವರಣದ ಗೋಡೆಗಳ ಮೇಲೆ ಪ್ರದರ್ಶಿಸಲು ಒತ್ತಾಯಿಸಿದ್ದಾರೆ.