ತೆಲಂಗಾಣ | ಔಷಧ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟ ಪ್ರಕರಣ : ಮೃತರ ಸಂಖ್ಯೆ 35ಕ್ಕೆ ಏರಿಕೆ
Photo | thehindu
ಹೈದರಾಬಾದ್ : ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಔಷಧ ಘಟಕದಲ್ಲಿ ಸಂಭವಿಸಿದ ರಿಯಾಕ್ಟರ್ ಸ್ಫೋಟದಲ್ಲಿ ಮೃತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳದ ಸಾಧ್ಯತೆ ಇದೆ.
ಸೋಮವಾರ ಸುರಿದ ಮಳೆಯು ರಕ್ಷಣಾ ಕಾರ್ಯಾಚರಣೆಯ ಮೇಲೆ ಪರಿಣಾಮವನ್ನು ಬೀರಿದೆ. ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಎಫ್) ಪೊಲೀಸರು, ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸ್ಫೋಟದಲ್ಲಿ ಮೃತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಹಲವರು ಗಾಯಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಡಿಎನ್ಎ ಮಾದರಿ ಹೊಂದಾಣಿಕೆ ಬಳಿಕ ಕುಟುಂಬಕ್ಕೆ ಮೃತದೇಹಗಳ ಹಸ್ತಾಂತರ ಕಾರ್ಯ ನಡೆಯಲಿದೆ. ಮರಣೋತ್ತರ ಪರೀಕ್ಷೆ ಮತ್ತು ಡಿಎನ್ಎ ಮಾದರಿ ಸಂಗ್ರಹಕ್ಕೆ ಸಹಾಯ ಮಾಡಲು ಉಸ್ಮಾನಿಯಾ ಜನರಲ್ ಆಸ್ಪತ್ರೆಯಿಂದ ವಿಶೇಷ ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದೆ.
ʼಇಂದು ಬೆಳಿಗ್ಗೆಯವರೆಗೆ, ಒಟ್ಟು 35 ಮೃತದೇಹಗಳು ಆಸ್ಪತ್ರೆಗೆ ಬಂದಿವೆ. ಇನ್ನೂ ಹೆಚ್ಚಿನ ಮೃತದೇಹ ಬರುವ ಸಾಧ್ಯತೆಯಿದೆ. ಸುಟ್ಟಗಾಯಗಳು ಮತ್ತು ಅವಶೇಷಗಳನ್ನು ಗಮನದಲ್ಲಿಟ್ಟುಕೊಂಡು, ಆಸ್ಪತ್ರೆ ಸಿಬ್ಬಂದಿ ಸೋಮವಾರ ತಡರಾತ್ರಿ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ರಾತ್ರಿಯಿಡೀ ಸುಮಾರು 20 ಮೃತದೇಹಗಳ ಡಿಎನ್ಎ ಪರೀಕ್ಷೆ ನಡೆಸಲಾಯಿತು. ಸಂಬಂಧಿಕರೊಂದಿಗೆ ಡಿಎನ್ಎ ಹೊಂದಾಣಿಕೆಗಳು ದೃಢಪಟ್ಟ ನಂತರ ನಿಯಮಾನುಸಾರ ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದುʼ ಎಂದು ಪತಂಚೇರು ಪ್ರದೇಶ ಆಸ್ಪತ್ರೆಯ ಡಾ. ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.