ಚುಟುಕು ಸುದ್ದಿಗಳು

Update: 2016-01-02 17:30 GMT

ಇಂದು ಮಜ್ಲಿಸುನ್ನೂರ್ ಕಾರ್ಯಕ್ರಮ
ಮಂಗಳೂರು, ಜ.2: ಅಡ್ಯಾರ್ ಕಣ್ಣೂರಿನ ಬದ್ರಿಯಾ ಜುಮಾ ಮಸೀದಿ ವತಿಯಿಂದ ನಡೆಯುವ ಮಾಸಿಕ ಮಜ್ಲಿಸುನ್ನೂರ್ ಆತ್ಮೀಯ ಸಂಗಮವು ಜ.3ರಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ.
ಸೈಯದ್ ಝೈನುಲ್ ಆಬೀದಿನ್ ಜಿಪ್ರಿ ತಂಙಳ್ ನೇತೃತ್ವ ವಹಿ ಸುವರು. ಖತೀಬ್ ಮುಹಮ್ಮದ್ ಶರೀಫ್ ಅರ್ಶದಿ, ಮುದ ರ್ರಿಸ್ ಸೈಯದ್ ತ್ವಾಹಾ ಜಿಫ್ರಿ ತಂಙಳ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.


ಕುಂಪಲ: ಇಂದಿನಿಂದ ಉಚಿತ ವಿವಾಹ
ಉಳ್ಳಾಲ, ಜ.2: ಕುಂಪಲದ ನೂರಾನಿ ಯತೀಂ ಖಾನಾ ಮತ್ತು ದಾರುಲ್ ಮಸಾಕೀನ್ ಆಶ್ರಯದಲ್ಲಿ ಬಡ ಹಾಗೂ ನಿರ್ಗತಿಕ ಕುಟುಂಬಗಳ ಹೆಣ್ಮಕ್ಕಳ ಮದುವೆಯನ್ನು ಅವರ ಮನೆಗಳಲ್ಲೇ ನಡೆಸುವ ಕಾರ್ಯಕ್ರಮ ಜ.3ರಂದು ಆರಂಭಗೊಳ್ಳಲಿದ್ದು, ಫೆ.28ರ ತನಕ ನಡೆಯಲಿದೆ ಎಂದು ಮದುವೆ ಸಮಿತಿ ಅಧ್ಯಕ್ಷ ಯು.ಎಸ್.ಅಬೂಬಕರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
 ಕಳೆದ 28 ವರ್ಷಗಳಿಂದ ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡಿ ಭೌತಿಕ ಹಾಗೂ ಪಾರತ್ರಿಕ ಶಿಕ್ಷಣ ನೀಡುತ್ತ್ತ ಬಂದಿರುವ ಯತೀಂ ಖಾನಾ ಹಾಗೂ ದಾರುಲ್ ಮಸಾಕೀನ್ 2011ರಿಂದ ಅನಾಥ ಹೆಣ್ಣು ಮಕ್ಕಳ ವಿವಾಹ ನಡೆಸುತ್ತ್ತ ಬಂದಿವೆ. ಆದರೆ ಬಡ ಹೆಣ್ಮಕ್ಕಳ ವಿವಾಹ ಸಾಮೂಹಿಕ ನೆಲೆಯಲ್ಲಿ ನಡೆದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಕಾರಣ ಅಂತಹ ಹೆಣ್ಣನ್ನು ವಿವಾಹವಾಗಲು ಸಮ್ಮತಿಗೆ ವರ ಹಿಂದೇಟು ಹಾಕುತ್ತಿರುವುದು ಕಂಡುಬಂತು. ಈ ಸಮಸ್ಯೆ ಮನಗಂಡು 2015ರಲ್ಲಿ ಪ್ರಥಮ ಬಾರಿಗೆ ಪ್ರಚಾರರಹಿತವಾಗಿ ವಧು, ವರರ ಮನೆಯಲ್ಲೇ ಮದುವೆ ಮಾಡುವ ತೀರ್ಮಾನಕ್ಕೆ ಬಂದು 10 ಜೋಡಿ ವಿವಾಹಗಳನ್ನು ನಡೆಸಲಾಗಿದೆ. ಈ ವರ್ಷ 16 ಜೋಡಿ ವಿವಾಹಗಳನ್ನು ನಡೆಸಲಾಗುತ್ತಿದೆ. ಹೆಣ್ಣಿಗೆ ಐದು ಪವನ್ ಚಿನ್ನಾಭರಣ ನೀಡಲಾಗುತ್ತಿದ್ದು, ಒಂದು ಮದುವೆಗೆ ಒಂದೂವರೆ ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ ಎಂದವರು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಅಬ್ದುಲ್ಲಾ ಹಾಜಿ, ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಸಂಚಾಲಕ ಯು.ನಝೀರ್, ಜೊತೆಕಾರ್ಯದರ್ಶಿ ಹಾರೂನ್ ಅಹ್ಸನಿ, ಎಎ. ಖಾದರ್ ಹಾಗೂ ಎನ್.ಎಸ್. ಉಮರಬ್ಬ ಮಾಸ್ಟರ್ ಉಪಸ್ಥಿತರಿದ್ದರು. 

ಇಂದು ಕಕ್ಕಿಂಜೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ
ಬೆಳ್ತಂಗಡಿ, ಜ.2: ಮನಾರತ್ ಅಲ್‌ಮಸಾಅದ್ ವೆಲ್ಫೇರ್ ಅಸೋಸಿಯೇಶನ್ ಕಕ್ಕಿಂಜೆ ಸೆಂಟರ್ ವತಿಯಿಂದ ಜ.3ರಂದು ಕಕ್ಕಿಂಜೆ ನೂರುಲ್ ಇಸ್ಲಾಂ ಮದಸ ಮೈದಾನದಲ್ಲಿ 11 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಸಮಸ್ತ ಮುಶಾವರ ಸದಸ್ಯರಾದ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್‌ರ ದುಆದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಉದ್ಘಾಟನೆ ಹಾಗೂ ನಿಖಾಹ್‌ನ ನೇತೃತ್ವ ವಹಿಸಲಿದ್ದಾರೆ. ಶಾಸಕ ಕೆ. ವಸಂತ ಬಂಗೇರಾ ಅಧ್ಯಕ್ಷತೆ ವಹಿಸಲಿದ್ದು, ಕಕ್ಕಿಂಜೆ ಮುದರ್ರಿಸ್ ಐ.ಕೆ. ಮೂಸಾ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಕುಂಬ್ರ ಕೆ.ಐ.ಸಿ. ಪ್ರೊ. ಅನೀಸ್ ಕೌಸರಿ ಮುಖ್ಯ ಭಾಷಣಗೈಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


ಇಂದು ಕುರ್‌ಆನ್ ಪಾರಾಯಣ ಸ್ಪರ್ಧೆ
  ಕಾಸರಗೋಡು, ಜ.2: ಕೋಝಿಕ್ಕೋಡ್‌ನಲ್ಲಿ ಫೆ.13,14 ರಂದು ನಡೆಯುವ ‘ವಿಸ್ಡಮ್ ಗ್ಲೋಬಲ್ ಇಸ್ಲಾಮಿಕ್ ಮಿಶನ್’ ಅಂತಾರಾಷ್ಟ್ರೀಯ ಕುರ್‌ಆನ್ ಸಮ್ಮೇಳನದಂಗವಾಗಿ ಐಎಸ್‌ಎಂ ಜಿಲ್ಲಾ ಸಮಿತಿ ಆಯೋಜಿಸಿರುವ ಜಿಲ್ಲಾಮಟ್ಟದ ಕುರ್‌ಆನ್ ಪಾರಾಯಣ ಸ್ಪರ್ಧೆ ಜ.3ರಂದು ಸಂಜೆ 4:30ಕ್ಕೆ ಕಾಸರಗೋಡು ಸಂಧ್ಯಾ ರಾಗಂ ಸಭಾಂಗಣದಲ್ಲಿ ನಡೆಯಲಿದೆ. ಶಾಸಕ ಎನ್.ಎ. ನೆಲ್ಲಿಕುನ್ನು ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಂ. ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

ಇಂದು ಬಡಕಬೈಲ್‌ನಲ್ಲಿ ಜಲ್ಸೇ ಮೀಲಾದ್
 ಮಂಗಳೂರು, ಜ.2: ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಬಡಕಬೈಲ್ ಸೆಂಟರ್ ವತಿಯಿಂದ ಜಲ್ಸೇ ಮೀಲಾದ್ ಕಾರ್ಯಕ್ರಮ ಬಡಕಬೈಲ್ ಜಂಕ್ಷನ್‌ನಲ್ಲಿ ಜ.3ರಂದು ಮಗ್ರಿಬ್ ನಮಾಜಿನ ಬಳಿಕ ನಡೆಯಲಿದೆ. ಜಿ.ಎ. ಅಬ್ದುಲ್ ಮಜೀದ್ ಪಾಳಿಲಿ, ಅಲ್ ಕಾಮಿಲ್ ಸಖಾಫಿ ಬದ್ರುದ್ದೀನ್ ಅಝ್‌ಹರಿ, ಅಸೈಯ್ಯದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ತಲಕ್ಕಿ, ಹಾಫಿಳ್ ಸುಫ್‌ಯಾನ್ ಸಖಾಫಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ನಾಳೆ ‘ಮೆಹ್ಫಿಲೇ ಮೀಲಾದ್’ ಕಾರ್ಯಕ್ರಮ
 ಬಂಟ್ವಾಳ, ಜ.2: ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಶನ್‌ನ ವತಿಯಿಂದ ‘ಮೆಹ್ಫಿಲೇ ಮೀಲಾದ್’ ಮತ್ತು ಬುರ್ದಾ ಮಜ್ಲಿಸ್ ಜ.4ರಂದು 10 ಗಂಟೆಗೆ ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮಾಣಿ ದಾರುಲ್ ಇರ್ಶಾದ್‌ನಲ್ಲಿ ನಡೆಯಲಿದೆ.
ಅಮ್ಜದೀಸ್ ರಾಜ್ಯ ನಿರ್ದೇಶಕ ಯೂಸುಫ್ ರಝಾ ಅಮ್ಜದಿ ದಾವಣಗೆರೆ ಅವರಿಂದ ‘ಮುಹಮ್ಮದ್ ನಬಿ(ಸ) ಮತ್ತು ಆಧುನಿಕ ಶಾಸ್ತ್ರ’ ಎಂಬ ವಿಷಯದಲ್ಲಿ ಮದ್‌ಹುರ್ರಸೂಲ್ ಪ್ರಭಾಷಣ, ಅಮ್ಜದೀಸ್ ಲೋಗೊ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಜ.8ರಂದು ಅಲ್ ಮದೀನದಲ್ಲಿ ಹುಬ್ಬುರ್ರಸೂಲ್ ಜಲ್ಸಾ
 ಉಳ್ಳಾಲ, ಜ.2: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಆಶ್ರಯದಲ್ಲಿ ಹುಬ್ಬುರ್ರಸೂಲ್ ಜಲ್ಸಾ ಕಾರ್ಯಕ್ರಮವು ಜ.8ರಂದು ಅಲ್‌ಮದೀನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಅಂದು ಅಪರಾಹ್ನ 2:30ಕ್ಕೆ ಬುರ್ದಾ ಕಾವ್ಯಾಲಾಪನೆ, ಅಸರ್ ನಮಾಜಿನ ಬಳಿಕ ವೌಲಿದ್ ಮತ್ತು ಪ್ರಕೀರ್ತನ ಮಜ್ಲಿಸ್, ಸಂಜೆ 6:30ಕ್ಕೆ ಹುಬ್ಬುರ್ರಸೂಲ್ ಪ್ರಭಾಷಣ ನಡೆಯಲಿದೆ. ರಫೀಕ್ ಸಅದಿ ದೇಲಂಪಾಡಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 8:30ಕ್ಕೆ ಅಸ್ಸೈಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ನೇತೃತ್ವದಲ್ಲಿ ದ್ಸಿಕ್ರ್, ಸ್ವಲಾತ್ ಮಜ್ಲಿಸ್ ಮತ್ತು ಕೂಟು ಪ್ರಾರ್ಥನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News