ಉಗ್ರರ ದಾಳಿಗೆ ಸೂಕ್ತ ಉತ್ತರ: ರಾಜ್ನಾಥ್
Update: 2016-01-02 18:09 GMT
ಹೊಸದಿಲ್ಲಿ, ಜ.2: ಭಾರತ ಯಾವುದೇ ಭಯೋತ್ಪಾದಕ ದಾಳಿಯನ್ನು ಸಹಿಸುವುದಿಲ್ಲ ಹಾಗೂ ಅದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಗೃಹಸಚಿವ ರಾಜ್ನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.
ಪಠಾಣ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ ನಾಲ್ವರು ಭಯೋತ್ಪಾದಕರು ಶನಿವಾರ ಬೆಳಗ್ಗೆ ಹತರಾದ ಬಳಿಕ ಗೃಹಸಚಿವರು ಈ ಹೇಳಿಕೆ ನೀಡಿದರು. ಪಾಕಿಸ್ತಾನ ಸೇರಿದಂತೆ ಪ್ರತಿಯೊಂದು ದೇಶದೊಂದಿಗೆ ಭಾರತ ಉತ್ತಮ ಸ್ನೇಹ ಸಂಬಂಧವನ್ನು ಹೊಂದಲು ಬಯಸುತ್ತದೆ ಎಂದರು. ‘‘ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರ. ನಮಗೆ ಶಾಂತಿ ಬೇಕು. ಆದರೆ ಭಾರತದ ಮೇಲೆ ಯಾವುದೇ ಭಯೋತ್ಪಾದಕ ದಾಳಿ ನಡೆದರೆ ಅದಕ್ಕೆ ಸೂಕ್ತ ಉತ್ತರವನ್ನು ನೀಡಲಾಗುವುದು’’ ಎಂದರು.