ಚುಟುಕು ಸುದ್ದಿ:ಕಾರ್ಕಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

Update: 2016-01-02 18:30 GMT


ಕಾರ್ಕಳ, ಜ.2: ತಾಪಂ ಇಒ ಅವರ ಕಾರ್ಯವೈಫಲ್ಯದಿಂದ ಸದಸ್ಯರಿಗೆ ಸಮರ್ಪಕ ನ್ಯಾಯ ಸಿಕ್ಕಿಲ್ಲ. ಅವರು ಹೆಸರಿಗೆ ಮಾತ್ರ ಅಧಿಕಾರಿಯಾಗಿದ್ದುಬಿಟ್ಟರೆ, ಅವರಿಂದ ಜನತೆಗೆ ಯಾವುದೇ ಪ್ರಯೋಜನವಾಗಿಲ್ಲ. ಹಣಕ್ಕಾಗಿ ಅವರು ಫಲಾನುಭವಿಗಳನ್ನು ಪೀಡಿಸುತ್ತಿದ್ದು, ಅವರ ಅವ್ಯವಹಾರದ ಕುರಿತಂತೆ ಸಿಡಿಗಳು ಕೂಡಾ ಸಿದ್ಧ್ದಗೊಂಡಿದೆ. ಇಂತಹ ಅಧಿಕಾರಿಗಳು ಕಾರ್ಕಳಕ್ಕೆ ಈವರೆಗೆ ಬರಲಿಲ್ಲ ಎಂದು ಶನಿವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ಕ್ಸೇವಿಯರ್ ಡಿಮೆಲ್ಲೊ ಅಸಮಾಧಾನ ವ್ಯಕ್ತಪಡಿಸಿದರು.
 
ಸುವರ್ಣ ಗ್ರಾಮ ಯೋಜನೆಯಡಿ 77 ಲಕ್ಷ ರೂ. ಬ್ಯಾಂಕಿಗೆ ಜಮೆಯಾಗಿ ನಾಲ್ಕು ವರ್ಷಗಳಾಗಿದ್ದು, ಅದರ ಬಡ್ಡಿ ಎಲ್ಲಿಗೆ ಹೋಗಿದೆ? ಅದರ ಬಗ್ಗೆ ವಿವರ ಬೇಕು ಎಂದು ಸಂಬಂಧಿಸಿದ ಅಧಿಕಾರಿಗಳ ಬಳಿ ಕ್ಸೇವಿಯರ್ ಡಿಮೆಲ್ಲೋ ಪ್ರಶ್ನಿಸಿದರು. ಶಿರ್ಲಾಲು ಗ್ರಾಪಂ ಉಪಾಧ್ಯಕ್ಷರು ಬಸವ ವಸತಿ ಯೋಜನೆಯಡಿಯಲ್ಲಿ ಏಳು ಜನ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ, ಅವರ ಹೆಸರಿನ ಮೂಲಕ ಲಕ್ಷಾಂತರ ರೂ. ಅವ್ಯವಹಾರ ನಡೆಸಿದ್ದಾರೆ. ಇದರಲ್ಲಿ ಗ್ರಾಪಂ ಪಿಡಿಒ ಕೂಡಾ ಶಾಮೀಲಾಗಿದ್ದಾರೆ. ಈ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಲಾಗಿತ್ತು. ಆದರೆ ತನಿಖೆಯಾಗಿಲ್ಲ. ಉಡುಪಿ ಜಿಪಂ ಸಿಇಒಗೂ ದೂರು ನೀಡಲಾಗಿದೆ ಎಂದು ಸದಸ್ಯ ಸುಜಿತ್ ಶೆಟ್ಟಿ ಹೇಳಿದರು.
 
 ತಾಪಂ ಇಒ ಚೆನ್ನಪ್ಪಮೊಯ್ಲಿ ಮಾತನಾಡಿ, ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಆರೋಪ ಮೇಲ್ನೋಟಕ್ಕೆ ಸತ್ಯ ಎನ್ನುವುದು ಸಾಬೀತಾಗಿದ್ದು, ನಾಲ್ಕು ದಿನಗಳೊಳಗೆ ಮರು ತನಿಖೆ ನಡೆಸಿ ವರದಿ ನೀಡುವುದಾಗಿ ಭರವಸೆ ನೀಡಿದರು. ಕಡ್ತಲ ತಿರ್ತೊಟ್ಟು ಸೇತುವೆ ಬಿರುಕುಬಿಟ್ಟಿದೆ. ಆ ಗ್ರಾಮದ ಸಂಪರ್ಕವೇ ಕಡಿತದ ಭೀತಿ ಇದೆ ಎಂದು ಸದಸ್ಯೆ ಪ್ರಮೀಳಾ ಹರೀಶ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಅಧಿಕಾರಿ ಬಸವಲಿಂಗೇಗೌಡ, ನಬಾರ್ಡ್‌ನಲ್ಲಿ ಅದಕ್ಕೆ ಪೂರಕವಾದ ಅನುದಾನ ಸಿಗುವುದಿಲ್ಲ ಎಂಬ ಕಾರಣಕ್ಕೆ ಸಿಆರ್‌ಎಫ್‌ಗೆ ಪ್ರಸ್ತಾವನೆಗೆ ಕಳುಹಿಸಿದ್ದೇವೆ ಎಂದು ಹೇಳಿದರು.
ಮಾಪಾಲು ಜಯವರ್ಮ ಜೈನ್ , ಪ್ರವೀಣ್ ಸಾಲ್ಯಾನ್ ನಿಟ್ಟೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ತಾಪಂ ಅಧ್ಯಕ್ಷೆ ವಿಜಯಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಾಲಿನಿ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಕುಮಾರ್, ತಹಶೀಲ್ದಾರ್ ರಾಘವೇಂದ್ರ ಎಸ್. ಉಪಸ್ಥಿತರಿದ್ದರು.


ಇಂದು ತುಳು ಒಕ್ಕೂಟದ ಕಚೇರಿ ಉದ್ಘಾಟನೆ
ಮಂಗಳೂರು, ಜ.2 : ನಗರದ ಕಾವೂರು ಗಾಂಧಿನಗರದ ಮುಗ್ರೋಡಿಯಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಸ್ವಂತ ಕಚೇರಿ ಜ.3ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಶನಿವಾರ ತಿಳಿಸಿದರು.
  ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಚೇರಿ ಉದ್ಘಾಟಿಸಲಿದ್ದು, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ ಅಧ್ಯಕ್ಷತೆ ವಹಿಸುವರು. ಸಚಿವ ಯು.ಟಿ. ಖಾದರ್, ತುಳು ಒಕ್ಕೂಟದ ಸ್ಥಾಪಕಾಧ್ಯಕ್ಷ ದಿ.ಎಸ್.ಆರ್. ಹೆಗಡೆಯ ಭಾವಚಿತ್ರ ಅನಾವರಣಗೊಳಿಸುವರು. ಸಂಸದ ನಳಿನ್‌ಕುಮಾರ್ ಕಟೀಲ್ ‘ನೆಂಪು’ ಸಂಚಿಕೆ ಹಾಗೂ ಶಾಸಕಿ ಶಕುಂತಳಾ ಶೆಟ್ಟಿ ‘ಕವಿತೆ ಗೊಂಚಲ’ನ್ನು ಅನಾವರಣಗೊಳಿಸುವರು. ಈ ಸಂದರ್ಭ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿಗೆ ಸನ್ಮಾನ ಹಾಗೂ ನಿಧಿ ಸಮರ್ಪಣೆ ಮತ್ತು ಶ್ರೀ ಶನೀಶ್ವರ ಮಹಾತ್ಮೆ ತುಳು ತಾಳಮದ್ದಲೆ ಏರ್ಪಡಿಸಲಾಗಿದೆ ಎಂದರು.


‘ಸಾಂಸ್ಕೃತಿಕ ರಂಗದ ಯಜಮಾನ ಪಟ್ಟ ಕಸಿದುಕೊಂಡ ಟಿವಿ’
ಉಡುಪಿ, ಜ.2: ರಂಗಭೂಮಿಗೆ ನೀಡಲಾಗಿದ್ದ ಸಾಂಸ್ಕೃತಿಕ ರಂಗದ ಯಾಜಮಾನನ ಪಟ್ಟವನ್ನು ಇಂದು ಟಿವಿ ಮಾಧ್ಯಮ ಕಸಿದುಕೊಂಡಿದೆ. ಟಿವಿ ಹೇಳುವುದೆಲ್ಲ ನಿಜ ಎಂಬ ಭ್ರಮೆ ಜನರಲ್ಲಿ ಮೂಡಿದೆ ಎಂದು ಹಿರಿಯ ನಿರ್ದೇಶಕ, ತಂತ್ರಜ್ಞ, ಕರ್ನಾಟಕ ನಾಟಕ ಅಕಾಡಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಹೇಳಿದ್ದಾರೆ.
ಉಡುಪಿ ರಂಗಭೂಮಿಯು ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶನಿವಾರ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಿದ 36ನೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ‘ರಂಗ ಕಲಾರತ್ನ’ ರಂಗ ಭೂಮಿ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ರಂಗನಿರ್ದೇಶಕ ಕಲಾ ತಪಸ್ವಿ ಸದಾನಂದ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್‌ನ ಮಹಾಪ್ರಬಂಧಕ ಕೆ.ಟಿ. ರೈ, ಬಡಗುಬೆಟ್ಟು ಸೊಸೈಟಿಯ ಮಹಾಪ್ರಬಂಧಕ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಭಾಸ್ಕರ್ ಪುತ್ರನ್ ಭಾಗವಹಿಸಿದ್ದರು.
ಈ ಸಂದರ್ಭ ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ರಂಗಭೂಮಿಯ ಪದಾಧಿಕಾರಿಗಳಾದ ಯು.ಉಪೇಂದ್ರ, ಅಮ್ಮುಂಜೆ ಅರವಿಂದ ನಾಯಕ್, ವಾಸುದೇವ ರಾವ್, ಪ್ರದೀಪ್‌ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
ರಂಗಭೂಮಿಯ ಗೌರವಾಧ್ಯಕ್ಷ ಡಾ.ಎಚ್. ಶಾಂತರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ನಂದಕುಮಾರ್ ವಂದಿಸಿದರು. ದುಗ್ಗಪ್ಪ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಥಮ ಬಹುಮಾನಿತ ಸುಮನಸಾ ಕೊಡವೂರು ತಂಡದ ‘ದಾರಾಶಿಕೊ’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News