ಮಕ್ಕಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಟ್ಟು ಮಾಡಿ: ಡಿಸಿ

Update: 2016-01-03 03:13 GMT

ಮಂಗಳೂರು: ಜ.17 ಮತ್ತು ಫೆ.21 ರಂದು ಪೋಲಿಯೋ ನಿರ್ಮೂಲನೆಗಾಗಿ ನಡೆಯುತ್ತಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಹಿಂದಿನ ವರ್ಷದ ಸಾಧನೆಯನ್ನಿಟ್ಟುಕೊಂಡು ನಿಗದಿತ ಗುರಿಯನ್ನು ಇರಿಸುವ ಬದಲು ದ.ಕ ಜಿಲ್ಲೆಯಲ್ಲಿರುವ ಮಕ್ಕಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಟ್ಟು ಮಾಡಿ ಒಟ್ಟು ಮಕ್ಕಳ ಸಂಖ್ಯೆಯನ್ನು ನಿಗದಿತ ಗುರಿಯನ್ನಾಗಿರಿಸಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಬೇಕು ಎಂದು ದ.ಕ ಜಿಲ್ಲಾಧಿಕಾರಿ ಎ ಬಿ ಇಬ್ರಾಹೀಂ ಸೂಚಿಸಿದ್ದಾರೆ.
 

ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
 

ಕಳೆದ ಹಲವು ವರ್ಷಗಳಿಂದ ಪಲ್ಸ್ ಪೋಲಿಯೋ ಹಾಕುವ ವಿಚಾರದಲ್ಲಿ ಆರೋಗ್ಯ ಇಲಾಖೆ ಈ ಹಿಂದಿನ ವರ್ಷದಲ್ಲಿ ಲಸಿಕೆ ಸಿಂಪಡಿಸಿದ ಸಂಖ್ಯೆಯನ್ನು ಮುಂದಿನ ವರ್ಷದ ಗುರಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿತ್ತು. ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಈ ವರ್ಷದಿಂದಲೆ ಜಿಲ್ಲೆಯಲ್ಲಿರುವ ಮಕ್ಕಳ ಸಂಖ್ಯೆಯ ಆಧಾರದಲ್ಲಿ ಗುರಿಯನ್ನಿಟ್ಟುಕೊಂಡು ಲಸಿಕೆ ಹಾಕಬೇಕು ಎಂದು ಆದೇಶಿಸಿದರು.
 ಈ ರೀತಿ ಮಾಡಿದಾಗ ಜಿಲ್ಲೆಯ ಮಕ್ಕಳು ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವುದರಿಂದ ತಪ್ಪಿಸಿಕೊಂಡಂತಾಗುವುದಿಲ್ಲ. ಜಿಲ್ಲೆಯ ಮಕ್ಕಳು ಹೊರಜಿಲ್ಲೆಗಳಿಗೆ ಹೋಗಿದ್ದರೆ ಅದನ್ನು ಗಮನಿಸಿ ಆ ಮಕ್ಕಳಿಗೆ ಲಸಿಕೆಯನ್ನು ಹಾಕಬೇಕು ಮತ್ತು ಹೊರಜಿಲ್ಲೆಗಳಿಂದ ಬರುವ ಮಕ್ಕಳಿಗೂ ಲಸಿಕೆಯನ್ನು ಹಾಕಬೇಕು ಎಂದು ಸೂಚಿಸಿದರು.
 

ಪಲ್ಸ್ ಪೋಲಿಯೋ ದಿನದ ಮೊದಲ ದಿನದಲ್ಲಿ ಬೂತ್ ಮಟ್ಟದಲ್ಲಿ ಲಸಿಕೆ ಹಾಕಿ ನಂತರದ ಮೂರು ದಿನ ಮನೆಮನೆಗಳಿಗೆ ತೆರಳಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಲಸಿಕೆಯನ್ನು ಹಾಕಲಿದ್ದು ಜಿಲ್ಲೆಯಲ್ಲಿ ಶೇಕಡ 100 ಸಾಧನೆಯಾಗಬೇಕು. ಪೋಲಿಯೋ ಲಸಿಕೆ ಹಾಕುವ ನಾಲ್ಕು ದಿನಗಳಲ್ಲೂ ಸಂಜೆ ಅಧಿಕಾರಿಗಳು ಪರೀಶೀಲನೆ ಸಭೆ ನಡೆಸಿ ಮರುದಿನದ ಕಾರ್ಯಚರಣೆಯ ಬಗ್ಗೆ ಯೋಜನೆಗಳನ್ನು ಹಾಕಬೇಕು ಎಂದು ಸೂಚಿಸಿದರು.
ಜ. 4 ರಿಂದ ಜ.12 ರವರೆಗೆ ನಡೆಯಲಿರುವ ಮಿಷನ್ ಇಂದ್ರಧನುಷ್ ನಾಲ್ಕನೆ ಸುತ್ತಿನ ಕಾರ್ಯಕ್ರಮದಲ್ಲೂ ಶೇಕಡ 100 ಸಾಧನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
 

ಸಭೆಯಲ್ಲಿ ದ.ಕ ಜಿ.ಪಂ. ಸಿಇಓ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾಸರ್ವೇಕ್ಷಣಾ ಅಧಿಕಾರಿ ಡಾ. ಸಿಕಂದರ್ ಪಾಶಾ, ನೋಡಲ್ ಅಧಿಕಾರಿ ಸತೀಶ್ಚಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News