×
Ad

ಭಿಕ್ಷಾಟನೆಗೆ ಮಕ್ಕಳ ಬಳಕೆ ಕ್ರಮಕ್ಕೆ ಡಿಸಿ ಸೂಚನೆ

Update: 2016-01-07 00:17 IST

ಮಂಗಳೂರು, ಜ.6: ನಗರದ ವಿವಿಧೆಡೆ ಜಿಲ್ಲೆಯ ಪಟ್ಟಣ ಪ್ರದೇಶಗಳ ಪ್ರಮುಖ ಜಂಕ್ಷನ್ ಹಾಗೂ ಸಿಗ್ನಲ್ ಪ್ರದೇಶಗಳಲ್ಲಿ ಪುಟ್ಟ ಮಕ್ಕಳನ್ನು ಹೊತ್ತುಕೊಂಡು ಭಿಕ್ಷಾ ಟನೆ ಮಾಡುವ ಪ್ರಕರಣಗಳು ಕಂಡುಬಂದಲ್ಲಿ ಅಂಥವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದ್ದಾರೆ.
 ಅವರು ಬುಧವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಭೆಯಲ್ಲಿ ಮಾತನಾ ಡಿದರು. ಇಂತಹ ಪ್ರಕರಣಗಳ ಮಾಹಿತಿ ಬಂದರೆ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಸ್ವಯಂಪ್ರೇರಿತವಾಗಿ ಕ್ರಮ ಜರಗಿಸುವಂತೆ ಅವರು ಸೂಚಿಸಿದರು. ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಮಕ್ಕಳ ಗ್ರಾಮಸಭೆಯನ್ನು ನಿಯಮಿತವಾಗಿ ನಡೆಸಬೇಕು. ಜನವರಿ-ಫೆಬ್ರವರಿಯಲ್ಲಿ ಜಿಲ್ಲೆಯ ಎಲ್ಲ ಗ್ರಾಪಂ ಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಯಬೇಕು. ಗ್ರಾಮಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಬೇಕು ಎಂದು ಅವರು ತಿಳಿಸಿದರು.
 ಫೋಕ್ಸೊ ಕಾಯ್ದೆ: ಜಿಲ್ಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಫೋಕ್ಸೊ ಕಾಯ್ದೆಯಡಿ ಒಟ್ಟು 182 ಪ್ರಕರಣಗಳು ಇದುವರೆಗೆ ದಾಖಲಾಗಿವೆ. ಈ ಪೈಕಿ 4 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂ. ವರೆಗೆ ಪರಿಹಾರ ಮಂಜೂರು ಮಾಡಲು ಅವಕಾಶವಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್ ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಿಖೇಶ್ ಶೆಟ್ಟಿ ಮಾತನಾಡಿ, 2015- 16ರಲ್ಲಿ ಸಮಿತಿಯ ಮುಂದೆ 347 ಪ್ರಕರಣಗಳಿದ್ದು, ಈ ಪೈಕಿ 277 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಬಾಲ ನ್ಯಾಯ ಮಂಡಳಿಯಲ್ಲಿ 2015-16ರಲ್ಲಿ 65 ಪ್ರಕರಣಗಳು ದಾಖಲಾಗಿದ್ದು, ಒಟ್ಟು 178 ಪ್ರಕರಣಗಳು ಬಾಕಿ ಇವೆೆ. 30 ಪ್ರಕರಣ ಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ದ.ಕ. ಜಿಲ್ಲೆಯಲ್ಲಿ ಕಾಣೆಯಾದ ಮಕ್ಕಳ ಪತ್ತೆ ಬ್ಯೂರೋ 2014ರ ಫೆಬ್ರವರಿಯಿಂದ ಕಾರ್ಯಾಚರಿಸುತ್ತಿದೆ. ಬ್ಯೂರೋ ಪ್ರಾರಂಭವಾದ ಅಂದಿನಿಂದ ಇದುವರೆಗೆ 153 ಮಕ್ಕಳು ಕಾಣೆಯಾಗಿದ್ದು, ಈ ಪೈಕಿ 136 ಮಕ್ಕಳು ಪತ್ತೆಯಾಗಿರುತ್ತಾರೆ. ಮನೆ ಬಿಟ್ಟು ಬಂದ 32 ಮಕ್ಕಳಲ್ಲಿ 20 ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಡಿಸಿಪಿ ಶಾಂತರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಬಾಲನ್ಯಾಯ ಮಂಡಳಿ ಸದಸ್ಯೆ ಆಶಾಲತಾ, ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಮಕ್ಕಳ ರಕ್ಷಣಾ ಘಟಕದ ಕುಮಾರ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News