ಇಂದು ಬ್ಯಾಂಕ್ ನೌಕರರ ದೇಶವ್ಯಾಪಿ ಮುಷ್ಕರ
Update: 2016-01-08 00:27 IST
ಉಡುಪಿ, ಜ.7: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.8ರಂದು ಬ್ಯಾಂಕ್ ನೌಕರರ ಮುಷ್ಕರಕ್ಕೆ ಕರೆ ನೀಡಿದೆ.
ಅದರಂತೆ ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ನೇತೃತ್ವದಲ್ಲಿ ನಗರದ ಸಿಂಡಿಕೇಟ್ ಟವರ್ಸ್ ಎದುರು ವಿವಿಧ ಬ್ಯಾಂಕ್ಗಳ ನೌಕರರು ಬೆಳಗ್ಗೆ 10 ಗಂಟೆಗೆ ಧರಣಿ ನಡೆಸಲಿದ್ದಾರೆ. ದ್ವಿಪಕ್ಷೀಯ ಒಪ್ಪಂದದಲ್ಲಿ ಅಂಗೀಕೃತಗೊಂಡ ವಿಷಯಗಳ ಉಲ್ಲಂಘನೆ, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಸಹವರ್ತಿ ಬ್ಯಾಂಕ್ಗಳ ಕಾರ್ಮಿಕ ವಿರೋಧಿ ನೀತಿ ಹಾಗೂ ಸೇವಾ ನಿಯಮಗಳ ಉಲ್ಲಂಘನೆ ಇತ್ಯಾದಿಗಳನ್ನು ವಿರೋಧಿಸುವ ಸಲುವಾಗಿ ಈ ಮುಷ್ಕರ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆರಾಲ್ಡ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.