×
Ad

"ರಸ್ತೆ ಸುರಕ್ಷತಾ ನಿಯಮ ಪಾಲಿಸದಿದ್ದರೆ ಪರವಾನಿಗೆ ಅಮಾನತು"

Update: 2016-01-08 14:46 IST

ಮಂಗಳೂರು: ರಸ್ತೆ ಅಪಘಾತಗಳನ್ನು ತಪ್ಪಿಸುವ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸದ ವಾಹನಗಳ ಚಾಲಕರ ಪರವಾನಿಗೆಯನ್ನು ಕನಿಷ್ಠ 3 ತಿಂಗಳಿಗೆ ಅಮಾನತುಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಸಿಗ್ನಲ್ ಉಲ್ಲಂಘನೆ, ನಿಗದಿತ ಸಾಮರ್ಥ್ಯಕ್ಕಿಂತ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುವುದು, ಅತೀ ವೇಗದ ಚಲಾವಣೆ, ಸರಕು ಸಾಗಾಟದ ವಾಹನದಲ್ಲಿ ಜನರ ಸಾಗಾಟ, ವಾಹನ ಚಾಲನೆ ಸಂದರ್ಭ ಮೊಬೈಲ್‌ನಲ್ಲಿ ಮಾತನಾಡುವುದು ಮೊದಲಾದ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡದ ಜತೆ ಚಾಲನಾ ಪರವಾನಿಗೆ ವಶಕ್ಕೆ ಪಡೆದು ಕನಿಷ್ಟ ಮೂರು ತಿಂಗಳು ಅಮಾನತುಗೊಳಿಸಲಾಗುವುದು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂದಿನ 10 ದಿನಗಳ ಬಳಿಕ ಈ ಆಂದೋಲನವನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರು ಹಾಗೂ ಚಾಲನಾ ಪರವಾನಿಗೆ ಇಲ್ಲದೆ ಮೋಟಾರು ವಾಹನಗಳನ್ನು ಓಡಿಸುವ ಬಗ್ಗೆ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಗಮನ ಹರಿಸಬೇಕು. ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡು ಬಂದಲ್ಲಿ ಪೊಲೀಸರು ದಂಡ ಹಾಕುವ ಜತೆಗೆ ವಾಹನವನ್ನು ವಶಕ್ಕೆ ಪಡೆಯಲಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜನವರಿ ತಿಂಗಳು ವಿಶೇಷ ಆಂದೋಲನ ನಡೆಸಲಾಗುವುದು.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ಉಪ ಸಾರಿಗೆ ಆಯುಕ್ತ ಜಿ.ಎಸ್. ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News