ಅಸಾರಾಂ ಜಾಮೀನು ಅರ್ಜಿ ಆರನೇ ಬಾರಿಯೂ ತಿರಸ್ಕೃತ
Update: 2016-01-08 23:42 IST
ಜೋಧ್ಪುರ, ಜ.8: 16ರ ಹರೆಯದ ಶಾಲಾಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ 2013,ಆಗಸ್ಟ್ನಿಂದ ಜೈಲಿನಲ್ಲಿ ಕೊಳೆಯುತ್ತಿರುವ ಸ್ವಘೋಷಿತ ದೇವಮಾನವ ಅಸಾರಾಂ(74) ಜಾಮೀನು ಕೋರಿ ಆರನೆ ಬಾರಿ ಸಲ್ಲಿಸಿದ್ದ ಅರ್ಜಿಯನ್ನೂ ಇಲ್ಲಿಯ ಸೆಶನ್ಸ್ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿತು.
ಅಸಾರಾಂ ವಯಸ್ಸು ಮತ್ತು ಬಾಲಕಿಯಿಂದ ವಿಳಂಬವಾಗಿ ಎಫ್ಐಆರ್ ದಾಖಲಾತಿಯಂತಹ ವಾದಗಳನ್ನು ನ್ಯಾಯಾಲಯವು ಪರಿಗಣಿಸಲಿಲ್ಲ ಎಂದು ಅವರ ಪರ ವಕೀಲ ಪಿ.ಸಿ.ಸೋಳಂಕಿ ಅವರು ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ತಿಳಿಸಿದರು.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ ನ್ಯಾಯಾಲಯದಲ್ಲಿ ಹಾಜರಾಗಿ ಅಸಾರಾಂ ಪರ ವಕಾಲತ್ ಅರ್ಜಿಯನ್ನು ಸಲ್ಲಿಸಿದ್ದರು. ಜಾಮೀನು ಅರ್ಜಿಯ ಕುರಿತು ವಾದವಿವಾದಗಳನ್ನು ಅಂದೇ ಪೂರ್ಣಗೊಳಿಸಿದ್ದ ನ್ಯಾಯಾಧೀಶರು ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಅಸಾರಾಂ ನ್ಯಾಯಾಲಯದಲ್ಲಿ ಹಾಜರಿರಲಿಲ್ಲವಾದರೂ, ಭಾರೀ ಸಂಖ್ಯೆಯಲ್ಲಿ ಬೆಂಬಲಿಗರು ಉಪಸ್ಥಿತರಿದ್ದರು.