ಕಾಪು, ಪಡುಬಿದ್ರೆ ಬೀಚ್ ಅಭಿವೃದ್ಧಿಗೆ ಚಾಲನೆ
ಕಾಪು, ಜ.11: ಕರ್ನಾಟಕ ಕರಾವಳಿ ಪ್ರವಾಸಿ ವೃತ್ತ ಸಮಗ್ರ ಅಭಿವೃದ್ಧಿ ಯೋಜನೆಯಡಿ ಕಾಪು ಹಾಗೂ ಪಡುಬಿದ್ರೆ ಬೀಚ್ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಾಪು ಬೀಚ್ ಅಭಿವೃದ್ಧಿಗೆ 87.69 ಲಕ್ಷ ರೂ. ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಆಸನ ವ್ಯವಸ್ಥೆ, ವಾಕಿಂಗ್ ವೇ ನಿರ್ಮಾಣ, ಹೈಮಾಸ್ಕ್ ದೀಪ ಅಳವಡಿಕೆ, ಲೈಫ್ಗಾರ್ಡ್ ಟವರ್ ನಿರ್ಮಾಣ, ಸಾಲಿಡ್ ವೇಸ್ಟ್ ಘಟಕ ನಿರ್ಮಾಣ, ಶುಚಿತ್ವ ನಿರ್ವಹಣಾ ಘಟಕ, ವಾಟರ್ ಬೈಕ್ ಮತ್ತು ಸೂಚನಾ ಫಲಕಗಳನ್ನು ಅಳವಡಿಸಿ ಇಲ್ಲಿನ ಸೊಬಗನ್ನು ವೃದ್ಧಿಸಲು ಯೋಜನೆ ರೂಪಿಸಲಾಗಿದೆ ಎಂದರು. ಪಡುಬಿದ್ರೆಯಲ್ಲೂ ಚಾಲನೆ: ಪಡುಬಿದ್ರಿ ಸಮುದ್ರ ತೀರದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ಐಡಿಎಲ್) ಮೂಲಕ 1.40ಕೋಟಿ ರೂ. ವೆಚ್ಚದಲ್ಲಿ 1.40 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ವಿನಯಕುಮಾರ್ ಸೊರಕೆ, ಪಡುಬಿದ್ರೆಯ ಕಡಲ ಕಿನಾರೆಯನ್ನು ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಅನುದಾನದೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಮತ್ತಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ಇಂಟರ್ಲಾಕ್ ಅಳವಡಿಕೆಯ ಸಹಿತ ವಾಕ್ ವೇ ಸೌಲಭ್ಯ, ಹೈಮಾಸ್ಕ್ ಲೈಟುಗಳು, ಕುಳಿತುಕೊಳ್ಳಲು ಬೇಕಾಗಿರುವ ಬೆಂಚುಗಳು, ಲೈಫ್ಗಾರ್ಡ್ ಟವರ್, ಶೆಲ್ಟರ್ ಶೆಡ್, ಲೈಫ್ಗಾರ್ಡ್ ಬೈಕ್(ಜೆಟ್ಸ್ಕಿ), ಸೂಚನಾ ಪಲಕಗಳನ್ನು ಈ ಅನುದಾನದಲ್ಲಿ ಪೂರೈಸಲಾಗುವುದು ಎಂದರು. ಸಮಾರಂಭದಲ್ಲಿ ಪಡುಬಿದ್ರೆ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ. ಅಮೀನ್, ಉಪಾಧ್ಯಕ್ಷ ವೈ. ಸುಕುಮಾರ್, ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ರಾಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ವಿಜಯ ಅಮೀನ್, ಮಾಜಿ ಉಪಾಧ್ಯಕ್ಷ ಮಿಥುನ್ ಆರ್. ಹೆಗ್ಡೆ, ಗ್ರಾಪಂ ಸದಸ್ಯರಾದ ಅಶೋಕ್ ಸಾಲ್ಯಾನ್, ಸೇವಂತಿ ಸದಾಶಿವ್, ನವೀನ್ ಶೆಟ್ಟಿ, ಬುಡಾನ್ ಸಾಹೇಬ್, ಹಸನ್, ದಿನೇಶ್, ಸಂಜೀವಿ ಪೂಜಾರ್ತಿ, ತಾಪಂ ಮಾಜಿ ಸದಸ್ಯ ನವೀನ್ಚಂದ್ರ ಶೆಟ್ಟಿ, ಅಬ್ದುಲ್ ಅಝೀಝ್ ಹೆಜಮಾಡಿ, ವೈ. ದೀಪಕ್ಕುಮಾರ್, ಗಣೇಶ್ ಆಚಾರ್ಯ, ವಿಶ್ವಾಸ್ ಅಮೀನ್ ಉಪಸ್ಥಿತರಿದ್ದರು.