ಪರೀಕ್ಷೆ ಎದುರಿಸುವವರೇ 3 ಶೇ. ಇದ್ದರೆ ಆಯ್ಕೆಯಾಗುವವರು ಅದಕ್ಕಿಂತ ಕಡಿಮೆಯೇ ಇರುವುದು ಸ್ವಾಭಾವಿಕವಲ್ಲವೇ ?
ಯುವ ಐಎಎಸ್ ಅಧಿಕಾರಿ ಮುಶರ್ರಫ್ ಅಲಿ ಫಾರೂಕಿ ಪ್ರಶ್ನೆ ಮುಸ್ಲಿಮ್ ಯುವಕರಲ್ಲಿ ‘ ನಿಮ್ಮ ವಿರುದ್ಧ ಸಂಚು ನಡೆಯುತ್ತಿದೆ, ಪಕ್ಷಪಾತ ನಡೆಯುತ್ತಿದೆ’ ಎಂಬ ಅತ್ಯಂತ ತಪ್ಪು ಮನೋಭಾವ ಬೆಳೆಯುತ್ತಿದೆ. ಆದರೆ ನಿಜವಾಗಿ ಹಾಗೆ ಇಲ್ಲವೇ ಇಲ್ಲ ಎಂದು ನಾನು ಖಡಾಖಂಡಿತವಾಗಿ ಹೇಳುತ್ತೇನೆ. ಇಡೀ ದಕ್ಷಿಣ ಏಶ್ಯಾದಲ್ಲೇ ನನ್ನ ಪ್ರಕಾರ ಮುಸ್ಲಿಮರಿಗೆ ಅತ್ಯುತ್ತಮ ದೇಶ ಎಂದರೆ ಭಾರತ ಎಂದು 2013 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 80ನೆ ರ್ಯಾಂಕ್ನೊಂದಿಗೆ ಆಯ್ಕೆಯಾಗಿ ಈಗ ಐಎಎಸ್ ಅಧಿಕಾರಿಯಾಗಿರುವ ಹೈದರಾಬಾದ್ನ ಮುಶರ್ರಫ್ ಅಲಿ ಫಾರೂಕಿ ಹೇಳಿದ್ದಾರೆ.
ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ಟಿಆರ್ಎಫ್)ನ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿರುವ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಸಾಧನೆಯ ಕುರಿತು ವಿವರವಾಗಿ ಮಾತನಾಡುತ್ತಾ ಈ ವಿಷಯ ಹೇಳಿದರು.
‘ಇಲ್ಲಿ ಮುಸ್ಲಿಮರಿಗೆ ತಮ್ಮ ಧರ್ಮವನ್ನು ಅನುಸರಿಸಲು ಹಾಗು ಅದರ ಪ್ರಚಾರ ಮಾಡಲು ಇರುವಷ್ಟು ಸ್ವಾತಂತ್ರ ಬೇರೆಲ್ಲೂ ಇಲ್ಲ. ಇನ್ನು ಅವಕಾಶಗಳಿಗಂತೂ ಕೊರತೆಯೇ ಇಲ್ಲ. ಇಲ್ಲಿ ಬಹುತೇಕ ಎಲ್ಲ ಪರೀಕ್ಷೆಗಳೂ ಅತ್ಯಂತ ನಿಷ್ಪಕ್ಷಪಾತವಾಗಿ ನಡೆಯುತ್ತವೆ. ಸಂದರ್ಶನ ಹಂತದಲ್ಲೂ ಬಹುತೇಕ ಎಲ್ಲೂ ಬೇಧಭಾವ ನಡೆಯುವುದೇ ಇಲ್ಲ. ಆದರೆ ನಮ್ಮ ಸಮುದಾಯದವರು ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಪರೀಕ್ಷೆ ಎದುರಿಸುವವರೇ 3% ಇದ್ದರೆ ಮತ್ತೆ ಆಯ್ಕೆಯಾಗುವವರು ಅದಕ್ಕಿಂತ ಕಡಿಮೆಯೇ ಇರುವುದು ಸ್ವಾಭಾವಿಕವಲ್ಲವೇ ? ನಾನು ಆಯ್ಕೆಯಾದ 2013ನೆ ಸಾಲಿನಲ್ಲಿ ಒಟ್ಟು 6 ಲಕ್ಷ ಮಂದಿಯಲ್ಲಿ ಮುಸ್ಲಿಮರ ಸಂಖ್ಯೆ ಕೇವಲ 15 ಸಾವಿರ. ಕೊನೆಗೆ ನಾನು ಸೇರಿ 8 ಮಂದಿ ಐಎಎಸ್ ಅಧಿಕಾರಿಗಳಾಗಿ ಆಯ್ಕೆಯಾದೆವು. ಮೊದಲು ನಾವು ಧನಾತ್ಮಕವಾಗಿ ಚಿಂತಿಸಬೇಕು. ಈ ದೇಶಕ್ಕಾಗಿ, ಇಲ್ಲಿನ ಎಲ್ಲ ಧರ್ಮಗಳ ಜನರಿಗಾಗಿ ಕೆಲಸ ಮಾಡಬೇಕು ಎಂಬ ಮನೋಭಾವನೆ ಇದ್ದವರಿಗೆ ಮಾತ್ರ ಯಶಸ್ಸು ಸಿಗುತ್ತದೆ.ನಾವು ವ್ಯವಸ್ಥೆಯ ಒಳಗಿದ್ದು ಅದನ್ನು ಸರಿಪಡಿಸಬೇಕೆ ಹೊರತು ಅದರಿಂದ ದೂರ ಓಡಿ ಅದನ್ನು ದೂರುವ ಮೂಲಕ ಅಲ್ಲ ಎಂದು ಮುಶರ್ರಫ್ ಅಲಿ ಹೇಳಿದರು.
ರವಿವಾರ ಬೆಳಗ್ಗೆ 9:30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯುವ ಟಿಆರ್ಎಫ್ನ ದಶಮಾನೋತ್ಸವ ಕಾರ್ಯಕ್ರಮದ ‘ಎ ಡೇ ವಿಥ್ ರಿಯಲ್ ಹೀರೋಸ್’ ಅಧಿವೇಶನದಲ್ಲಿ ಅವರು ಭಾಗವಹಿಸಿ ಮಾತನಾಡಲಿದ್ದಾರೆ.
ಅವರ ಸಂದರ್ಶನದ ವಿವರಗಳು ಸೋಮವಾರದ ‘ವಾರ್ತಾಭಾರತಿ’ಯಲ್ಲಿ ಪ್ರಕಟವಾಗಲಿದೆ.