ಅಜನೂರು: ನವವಿವಾಹಿತೆ ಆತ್ಮಹತ್ಯೆ

Update: 2016-01-19 18:03 GMT

 ಕಾಸರಗೋಡು, ಜ.19: ನವವಿವಾಹಿ ತೆಯೋರ್ವಳು ಪತಿಯ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಜನೂರಿನಲ್ಲಿ ನಡೆದಿದ್ದು, ಸಾವಿಗೆ ಪತಿಯ ಮನೆಯವರೇ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
 ಕುಂಬಳೆ ಬದ್ರಿಯಾ ನಗರದ ಚಾಲಕ ನಾರಾಯಣ ಮತ್ತು ದೇವಿ ದಂಪತಿಯ ಪುತ್ರಿ, ಅಜನೂರು ರಾವಣೇಶ್ವರ ಕಲರಿಯ ಸುರೇಶ್ ಎಂಬವರ ಪತ್ನಿ ವೀಣಾ (30) ಮೃತಪಟ್ಟವರು.
ಸೋಮವಾರ ಸಂಜೆ ಮನೆಯ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
 ರವಿವಾರ ರಾತ್ರಿ ತಾಯಿ ಮನೆಗೆ ಕರೆ ಮಾಡಿದ್ದ ವೀಣಾ ಪತಿ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಹೇಳಿದ್ದರು ಎನ್ನಲಾಗಿದೆ.
         ಈ ಹಿನ್ನೆಲೆಯಲ್ಲಿ ಸಂಜೆ ವೀಣಾಳನ್ನು ತವರು ಮನೆಗೆ ಕರೆದುಕೊಂಡು ಬರಲು ಸಹೋದರ ನವೀನ್ ಕುಮಾರ್ ಅಜನೂರಿನ ಮನೆಗೆ ಬಂದಿದ್ದು, ಆ ವೇಳೆ ಮನೆಗೆ ಬೀಗ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್‌ಗೆ ಕರೆ ಮಾಡಿ ನವೀನ್ ಮಾಹಿತಿ ನೀಡಿದ್ದು , ಮನೆಗೆ ಬಂದಾಗ ಬಾಗಿಲು ಒಳಗಡೆಯಿಂದ ಚಿಲಕ ಹಾಕಿದ ಸ್ಥಿತಿಯಲ್ಲಿತ್ತು. ವೀಣಾಳ ಪ್ರತಿಕ್ರಿಯೆ ಲಭಿಸದಿದ್ದಾಗ ಬಾಗಿಲು ಮುರಿದು ಒಳನುಗ್ಗಿದಾಗ ವೀಣಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಆಗಮಿಸಿ ಮಹಜರು ನಡೆಸಿದ್ದು, ಪತಿ ಮನೆಯವರ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News