ಪರಿಹಾರ ನೀಡಿದ ಬಳಿಕ ವಿದ್ಯುತ್ ಟವರ್ ನಿರ್ಮಿಸಿ: ಕೆಪಿಸಿಟಿಎಲ್ ಅಧಿಕಾರಿಗಳಿಗೆ ಸಂತ್ರಸ್ತ ರೈತರ ಆಗ್ರಹ
ಪುತ್ತೂರು, ಜ.22: ನೆಟ್ಲಮುಡ್ನೂರು- ಮಾಡಾವು 110 ಕೆವಿ ವಿದ್ಯುತ್ ಲೈನ್ ಕೃಷಿಕರ ಜಮೀನಿನಲ್ಲಿ ಹಾದು ಹೋಗುತ್ತಿದ್ದು, ವಿದ್ಯುತ್ ಟವರ್ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ಬಳಸಿಕೊಳ್ಳಲಾಗಿದೆ.
ಭೂಮಿ ಮತ್ತು ಕೃಷಿ ಕಳೆದುಕೊಂಡ ರೈತರಿಗೆ ಇಲಾಖೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡದಿದ್ದಲ್ಲಿ ವಿದ್ಯುತ್ ಟವರನ್ನು ದ್ವಂಸ ಮಾಡುವುದಾಗಿ ಜಿಲ್ಲಾ ರೈತ ಸಂಘ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ವಿದ್ಯುತ್ ಲೈನ್ಗಾಗಿ ಭೂಸ್ವಾಧೀನ ವಿಚಾರದಲ್ಲಿ ಪರಿಹಾರ ಮಾತುಕತೆಗಾಗಿ ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ಸಂತ್ರಸ್ತ ರೈತರ ಜೊತೆ ಕೆಪಿಟಿಸಿಎಲ್ ಅಧಿಕಾರಿಗಳು ಶುಕ್ರವಾರ ಸಭೆ ನಡೆಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸುಮಾರು 120 ಸಂತ್ರಸ್ತರು ಮತ್ತು ರೈತ ಸಂಘದ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಳೆದ ಎರಡು ವರ್ಷಗಳಿಂದ ನಮ್ಮನ್ನು ವ್ಯರ್ಥವಾಗಿ ಕುಣಿದಾಡಿಸುತ್ತಿದ್ದೀರಿ, ಕಳೆದ ಸಭೆಯಲ್ಲಿ ಪರಿಹಾರ ನೀಡುವುದಾಗಿ ಹೇಳಿ ಬಳಿಕ ವಂಚಿಸಲಾಗಿದೆ ಎಂದು ಆರೋಪಿಸಿದರು. ನೆಟ್ಲಮುಡ್ನೂರಿನಿಂದ -ಮಾಡಾವುವರೆಗೆ ಸುಮಾರು 100 ಕ್ಕೂ ಮಿಕ್ಕಿ ಟವರ್ಗಳನ್ನು ನಿರ್ಮಾಣ ಮಾಡಲಾಗು ತ್ತಿದ್ದು, ಒಂದು ಟವರ್ ನಿರ್ಮಾಣಕ್ಕೆ 5 ರಿಂದ 10 ಸೆಂಟ್ಸ್ ಜಮೀನನ್ನು ಇಲಾಖೆ ವಶಕ್ಕೆ ಪಡೆದುಕೊಂಡಿದೆ. ವಿದ್ಯುತ್ ಲೈನ್ ಹಾದುಹೋಗುವ ಪ್ರದೇಶದಲ್ಲಿರುವ ಅಡಿಕೆ, ತೆಂಗು, ರಬ್ಬರ್ ಮತ್ತು ಇತರೆ ಫಲವಸ್ತುಗಳನ್ನು ಕಡಿಯಲಾಗಿದ್ದು, ಮತ್ತೆಂದೂ ಆ ಜಾಗದಲ್ಲಿ ಕೃಷಿ ನಡೆಸುವಂತಿಲ್ಲ. ಕೆಲವೊಂದು ರೈತರ ಭೂಮಿಯಲ್ಲಿ 3 ರಿಂದ 4 ಟವರ್ಗಳು ನಿರ್ಮಾಣವಾಗುತ್ತಿದೆ. ನಮ್ಮ ಭೂಮಿಗೆ ಪರಿಹಾರ ಕೊಟ್ಟೇ ಲೈನ್ ಎಳೆಯಿರಿ ಎಂದು ರೈತರು ಆಗ್ರಹಿಸಿದರು.
ಕೆಪಿಟಿಸಿಎಲ್ನ ಚೀಫ್ ಎಂಜಿನಿಯರ್ ಹೊನ್ನೇಗೌಡ ಹಾಸನ ಮಾತನಾಡಿ, ರೈತರ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ. ಮುಂದಿನ ನಾಲ್ಕು ತಿಂಗಳಿನಲ್ಲಿ ಸೂಕ್ತ ರೀತಿಯಲ್ಲಿ ಪರಿಹಾರವನ್ನು ನೀಡುತ್ತೇವೆ. ಪರಿಹಾರ ಮೊತ್ತವನ್ನು ನೀಡಿದ ಬಳಿಕವೇ ನಾವು ಲೈನ್ ಎಳೆಯುವ ಕಾರ್ಯವನ್ನು ಮುಂದುವರೆಸಲಿದ್ದೇವೆ. ರೈತರು ಇಲಾಖೆಯೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಕೆಪಿಟಿಸಿಎಲ್ ಎಂಜನಿಯರ್ಗಳಾದ ಬಿ.ಎಸ್. ಹೆಬ್ಬಾಳ್, ಅನಂತಸ್ವಾಮಿ, ಮಂಗಳೂರು ಅಧಿಕಾರಿ ದೀಪಕ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಕುಮಾರ್ ಸುಬ್ರಹ್ಮಣ್ಯ ಶಾಸ್ತ್ರಿ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು, ಕಾರ್ಯದರ್ಶಿ ಬಡಿಲ ಈಶ್ವರ ಭಟ್, ಮಾಡಾವು ಸೀತಾರಾಮ ರೈ, ಡಾ. ಸತ್ಯಾವತಿ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಶೇಖರ್ ರೈ ಸ್ವಾಗತಿಸಿದರು. ವಿಜಯಕುಮಾರ್ ವಂದಿಸಿದರು.
ಶಾಲೆಗಳಿಗೆ ಆಟಿಕೆ ಮತ್ತು ವಿಜ್ಞಾನ ಮಾದರಿಗಳ ವಿತರಣೆ
ಬೆಳ್ತಂಗಡಿ, ಜ.22: ಕಪುಚಿನ್ ಕೃಷಿಕ ಸೇವಾ ಕೇಂದ್ರ ದಯಾಳ್ಭಾಗ್ ಗ್ರಾಮಾಭಿವೃದ್ಧಿ ಯೋಜನೆ ವಿಮುಕ್ತಿ ವತಿಯಿಂದ ದಾನಿಗಳ ಸಹಾಯದಿಂದ ಆಯ್ದ ಶಾಲೆಗಳಿಗೆ ಆಟಿಕೆ ಸಾಮಗ್ರಿಗಳು ಮತ್ತು ವಿಜ್ಞಾನ ಮಾದರಿಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಅತಿಥಿಗಳಾಗಿ ಬೆನಕ ಹೆಲ್ತ್ ಸೆಂಟರ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್, ಸಂಸ್ಥೆಯ ನಿರ್ದೇಶಕ ವಂ.ಫಾ.ವಿನೋದ್ ಮಸ್ಕರೇನ್ಹಸ್ ಮಾತನಾಡಿದರು.ಪದ್ಮನಾಭ ಸ್ವಾಗತಿಸಿದರು. ಸುಮಂಗಲಾ ವಂದಿಸಿದರು. ಜಲಜಾ ಕಾರ್ಯಕ್ರಮ ನಿರೂಪಿಸಿದರು.