ಪೋರ್ಟ್ ಟ್ರಸ್ಟ್ಗೆ ಲೀಗ್ ಕ್ರಿಕೆಟ್ ಟ್ರೋಫಿ
ಮಣಿಪಾಲ, ಜ.25: ಮಣಿಪಾಲ ವಿವಿ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ಕೆಆರ್ಸಿಎ ಕಾರ್ಪೊರೇಟ್ ಲೀಗ್ ಲೆದರ್ಬಾಲ್ಕ್ರಿಕೆಟ್ ಟೂರ್ನಿಯನ್ನು ಪೋರ್ಟ್ ಟ್ರಸ್ಟ್ ಆಫ್ ಇಂಡಿಯಾ (ಬಂದರು ಮಂಡಳಿ) ಗೆದ್ದುಕೊಂಡಿತು.
ಮಣಿಪಾಲದ ವಿವಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ ಬೆಂಗಳೂರಿನ ಯೂನಿಸಿಸ್ ತಂಡವನ್ನು 56 ರನ್ಗಳ ಅಂತರದಿಂದ ಸುಲಭವಾಗಿ ಸೋಲಿಸಿದ ಭಾರತ ಮಂಡಳಿ ತಂಡ ಟ್ರೋಫಿಯೊಂದಿಗೆ ಒಂದು ಲಕ್ಷ ರೂ. ನಗದು ಬಹುಮಾನ ಗೆದ್ದುಕೊಂಡಿತು. ಪರಾಜಿತ ಯೂನಿಸಿಸ್ ತಂಡ ಪ್ರಶಸ್ತಿಯೊಂದಿಗೆ 50,000ರೂ. ನಗದು ಬಹುಮಾನ ಪಡೆಯಿತು. ಮೊದಲು ಬ್ಯಾಟಿಂಗ್ ನಡೆಸಿದ ಬಂದರು ಮಂಡಳಿ ತಂಡ 17.2 ಓವರುಗಳಲ್ಲಿ 119 ರನ್ ಗಳಿಸಿ ಆಲೌಟಾಯಿತು.ಬಳಿಕ ಅತ್ಯುತ್ತಮ ಬೌಲಿಂಗ್ ಮತ್ತು ಪೀಲ್ಡಿಂಗ್ ಪ್ರದರ್ಶನ ನೀಡಿದ ಬಂದರು ಮಂಡಲಿ 17ನೆ ಓವರಿನಲ್ಲಿ 63 ರನ್ಗಳಿಗೆ ಯುನಿಸಿಸ್ನ್ನು ಆಲೌಟ್ ಮಾಡಿತು. ಸರಣಿಯುದ್ದಕ್ಕೂ ಅತ್ಯುತ್ತಮ ಸರ್ವಾಂಗೀಣ ಪ್ರದರ್ಶನ ನೀಡಿದ ಬಂದರು ತಂಡದ ನಾಯಕ, ಆಂದ್ರ ಪ್ರದೇಶ ರಣಜಿ ತಂಡದ ಆಟಗಾರ ಹೇಮಲ್ ವಟೇಕರ್ ಸರಣಿ ಶ್ರೇಷ್ಠ ಗೌರವವನ್ನು ಪಡೆದರು. ಯೂನಿಸಿಸ್ ತಂಡದ ಹರೀಶ್ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದರು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಉಡುಪಿ ಎಸ್ಪಿ ಕೆ.ಅಣ್ಣಾಮಲೈ ಬಹುಮಾನ ವಿತರಿಸಿದರು. ಕೆಆರ್ಸಿಎ ಸಂಚಾಲಕ ಇಮ್ತಿಯಾಝ, ಉದ್ಯಮಿ ಗಣೇಶ್ ಶೆಟ್ಟಿ, ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್, ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ, ರಂಜಿತ್ ಸಾಲ್ಯಾನ್, ಕ್ರಿಕೆಟ್ ಆಟಗಾರ ಪ್ರಕಾಶ್ ಕರ್ಕೆರ ಮತ್ತಿತರರು ಉಪಸ್ಥಿತರಿದ್ದರು.