×
Ad

ಬಿಗಿ ಭದ್ರತೆಯಲ್ಲಿ ದ.ಕ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ

Update: 2016-01-26 13:25 IST

ಮಂಗಳೂರು, ಜ. 26: ನಗರದ ನೆಹರೂ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ಸಂವಿಧಾನವನ್ನು ಜಾರಿಗೊಳಿಸಿದ ದಿನವಾದ ಇಂದು ಭಾರತೀಯರೆಲ್ಲರೂ ಭಾವನಾತ್ಮಕವಾಗಿ ಒಂದಾದ ದಿನವಾಗಿದೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯನೂ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದರು.

ರಾಜ್ಯ ಸರಕಾರವು ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಸರಕಾರದ ಮಹತ್ವದ ಯೋಜನೆಯಾದ ಅನ್ನಭಾಗ್ಯದಡಿ ಜಿಲ್ಲೆಯಲ್ಲಿ ವಾರ್ಷಿಕ 36 ಕೋಟಿ ರೂ. ಅನುದಾನ ವಿನಿಯೋಜಿಸಲಾಗಿದೆ. ಒಟ್ಟು 2 ಲಕ್ಷಕ್ಕೂ ಅಧಿಕ ಮೇಲ್ಪಟ್ಟು ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ ಎಂದರು. ರೈತರು ತಮ್ಮ ಜಮೀನುಗಳ ಸಮರ್ಪಕ ದಾಖಲೆಗಳನ್ನು ಇಡುವ ಸರಕಾರದ ಪೋಡಿ ಮುಕ್ತ ಅಭಿಯಾನ ಯೋಜನೆಯಡಿ 30 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮಗಳ ಅಳತೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. 2ನೆ ಹಂತದಲ್ಲಿ ಮತ್ತೆ 30 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಸರಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಸಕ್ರಮೀಕರಣ ಮಾಡುವ ಉದ್ದೇಶದಿಂದ 94 ಸಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಈವರೆಗೆ 2400 ಚದರ ಅಡಿ ಇದ್ದ ವಿಸ್ತೀರ್ಣವನ್ನು 4000 ಚದರ ಅಡಿಗಳಿಗೆ ಹೆಚ್ಚಿಸಾಗಿದೆ. ಜಿಲ್ಲೆಯಲ್ಲಿ 54,000 ಅರ್ಜಿಗಳು ಸ್ವೀಕಾರವಾಗಿ, 4492 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಅವರು ಹೇಳಿದರು.ನಗರ ಪ್ರದೇಶದ ಸರಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡಿರುವವರನ್ನು ಸಕ್ರಮೀಕರಣಗೊಳಿಸಲು 94ಸಿಸಿ ಜಾರಿಗೆ ತಂದಿದ್ದು, ಅರ್ಜಿ ಸ್ವೀಕರಿಸುವ ಕಾರ್ಯ ಪ್ರಗತಿಯಲ್ಲಿದೆ. ವಿಕಲಚೇತನರನ್ನು ವಿವಹಾವಾಗುವ ಸಾಮಾನ್ಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 50,000 ರೂ. ಪ್ರೋತ್ಸಾಹ ಧನ ನೀಡಲು ಯೋಜಿಸಲಾಗಿದೆ. ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲೆಯ ಮಲೆಕುಡಿಯ ಜನಾಂಗದವರಲ್ಲಿ ಸಿಕ್‌ಸೆಲ್ ಅನಿಮಿಯಾ ಕಾಯಿಲೆಯಿಂದ ಬಳಲುವವರಿಗೆ ಸಮಗ್ರ ಪಾಲನೆ ದೃಷ್ಟಿಯಿಂದ 120 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದವರು ಹೇಳಿದರು.

ಕೇಂದ್ರ ಸರಕಾರದ ಅಮೃತ ಯೋಜನೆಯಡಿ 200 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, ಒಳಚರಂಡಿ, ಮಳೆ ನೀರು, ಚರಂಡಿ ಹಾಗೂ ಪಾರ್ಕ್ ಅಭಿವೃದ್ಧಿ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ರೈ ತಿಳಿಸಿದರು. ಈ ಸಂದರ್ಭ ಸರಕಾರಿ ಸೇವೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 6 ಮಂದಿಗೆ ದ.ಕ. ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ರಾಷ್ಟ್ರಪತಿಯವರ ಶ್ಲಾಘನೀಯ ಪದಕಕ್ಕೆ ಆಯ್ಕೆಯಾಗಿರುವ ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಮಂಗಳೂರು ನಗರ ಉತ್ತರ ಉತ್ತರ ಉಪ ವಿಭಾಗದ ಎಸಿಪಿ ಮದನ್ ಎ. ಗಾಂವಕರ್, ರಾಜ್ಯ ಮಟ್ಟದ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲಾಧಿಕಾರಿ ಕಚೇರಿಯ ಕಂದಾಯ ವಿಭಾಗದ ಅಧೀಕ್ಷಕ ಶೇಖ್ ಹಸನ್‌ರವರನ್ನು ಸಚಿವರು ಅಭಿನಂದಿಸಿದರು.

ಬಳಿಕ ಎನ್‌ಸಿಸಿ, ಸೇವಾದಳ, ಪೊಲೀಸ್ ವಿಭಾಗ ಸೇರಿದಂತೆ 17 ತಂಡಗಳ ಆಕರ್ಷಕ ಪಥ ಸಂಚಲನ, ನಗರದ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ದೇಶಾಭಿಮಾನದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಶಾಸಕರಾದ ಐವನ್ ಡಿಸೋಜಾ, ಜೆ.ಆರ್. ಲೋಬೋ, ಕ್ಯಾ. ಗಣೇಶ್ ಕಾರ್ಣಿಕ್, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News