×
Ad

ಮಣಿಪಾಲ : ಮಾಧ್ಯಮ ಕಾರ್ಯಾಗಾರ - ಅಧಿಕಾರಿಗಳು ಜನಸಾಮಾನ್ಯರಿಗೆ ಸಂಪೂರ್ಣ ಮಾಹಿತಿ ನೀಡಬೇಕು’

Update: 2016-01-27 20:14 IST

ಮಾಧ್ಯಮ ಕಾರ್ಯಾಗಾರದಲ್ಲಿ ನಾಗೇಶ್ ಹೆಗಡೆ
ಮಣಿಪಾಲ, ಜ.27: ಯಾವುದೇ ಯೋಜನೆಗಳನ್ನು ಪ್ರಾರಂಭಿಸುವ ಮುನ್ನ ಅಧಿಕಾರಿಗಳು ಜನಸಾಮಾನ್ಯರನ್ನು ಹಾಗೂ ಮಾಧ್ಯಮದ ಮಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಆ ಬಗ್ಗೆ ಸಂಪೂರ್ಣ ಮಾಹಿತಿ, ವಿವರಗಳನ್ನು ನೀಡಬೇಕು. ಇಲ್ಲದಿದ್ದರೆ ಮಾಹಿತಿ ಅಪಭ್ರಂಶವಾಗಿ ವಿರೂಪವಾಗಿ ಜನರನ್ನು ತಲುಪುತ್ತದೆ. ಅವರು ಪ್ರತಿಭಟನೆಗೆ ತೊಡಗುತ್ತಾರೆ ಎಂದು ಹಿರಿಯ ಪತ್ರಕರ್ತ, ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದ್ದಾರೆ.
 ಜಿಲ್ಲಾಡಳಿತದ ವತಿಯಿಂದ ಅಧಿಕಾರಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ (ಪತ್ರಿಕೋದ್ಯಮ) ಮಣಿಪಾಲ ಜಿಲ್ಲಾಡಳಿತ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ನ್ಯೂಸ್ ವಿಚ್ ಮ್ಯಾಟರ್ಸ್‌’ ಕುರಿತ ಒಂದು ದಿನದ ಮಾಧ್ಯಮ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಇದಕ್ಕೆ ಉದಾಹರಣೆಯಾಗಿ ಅವರು ಕಾಪು ಸಮೀಪದ ಪಾದೂರು ಬಳಿ ನಿರ್ಮಾಣಗೊಳ್ಳುತ್ತಿರುವ ಪೆಟ್ರೋಲಿಯಂ ಸಂಗ್ರಾಹಾಗಾರ ಯೋಜನೆಯನ್ನು ನೀಡಿದರು. ಇಲ್ಲಿ ಸುಮಾರು 25 ಲಕ್ಷ ಟನ್ ಕಚ್ಛಾ ತೈಲವನ್ನು ಸಂಗ್ರಹಿಸಿಡಲು ಸಾಧ್ಯವಿದೆ. ಪೆಟ್ರೋಲಿನ ಮಹಾಪೂರದಿಂದಾಗಿ ಈಗ ಕಚ್ಛಾತೈಲದ ಬೆಲೆ ಕಳೆದ ಎರಡು-ಮೂರು ವರ್ಷಗಳಲ್ಲಿ ಹಿಂದೆಂದೂ ಕಾಣದಷ್ಟು ಕುಸಿಯುತ್ತಿದೆ. ಇದರಿಂದ ಪ್ರತಿ ದೇಶಗಳು ಸಾಧ್ಯವಿದ್ದಷ್ಟು ಹೆಚ್ಚು ಪೆಟ್ರೋಲ್‌ನ್ನು ಸಂಗ್ರಹಿಸಿಟ್ಟು ಕೊಳ್ಳುತ್ತಿವೆ. ಆದರೆ ಭಾರತದಲ್ಲಿ ಈ ಸೌಲಭ್ಯ ಇಲ್ಲದೇ ನಾವು ಹಿಂದೆ ಬೀಳಬೇಕಾಗಿದೆ ಎಂದರು.
ಪಾದೂರು ತೈಲ ಸಂಗ್ರಹಾಗಾರ ಈಗ ಪೂರ್ಣಗೊಂಡಿದ್ದರೆ ಇಲ್ಲಿ ತೈಲದ ಸಂಗ್ರಹ ಸಾಧ್ಯವಿತ್ತು. ಆದರೆ ಇದಕ್ಕೆ ಇನ್ನೂ ಪೈಪ್‌ನ ಜೋಡಣೆಯಾಗಿಲ್ಲ. ಅದೇ ರೀತಿ ವಿಶಾಖಪಟ್ಟಣದಲ್ಲಿರುವ ಇನ್ನೊಂದು ತೈಲ ಸಂಗ್ರಹಾಗಾರಕ್ಕೂ ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ. ಹೀಗಾಗಿ ದೇಶದಲ್ಲಿ ತೈಲ ಪಾತ್ರೆ ಬರಿದಾಗಿದೆ. ನಮ್ಮಲ್ಲಿ ಈಗ ಸಂಗ್ರಹದಲ್ಲಿರುವ ತೈಲ ಕೇವಲ ಮೂರು ದಿನಗಳಿಗೆ ಸಾಕಾಗುತ್ತದೆ. ಅದೇ ಪಾದೂರು, ವಿಶಾಲಪಟ್ಟಣ ತೈಲ ಸಂಗ್ರಹಾಗಾರ ಸಿದ್ಧವಾಗಿದ್ದರೆ ದೇಶಕ್ಕೆ ಒಂದು ವಾರಕ್ಕಾಗುವಷ್ಟು ತೈಲದ ಸಂಗ್ರಹ ಸಾಧ್ಯವಿತ್ತು ಎಂದರು.
ಪಾದೂರು ಯೋಜನೆಯ ಬಗ್ಗೆ ಅಧಿಕಾರಿಗಳು ಜನರಿಗೆ ಸರಿಯಾದ ಮಾಹಿತಿ ನೀಡಿ, ಅದರ ಮಹತ್ವದ ಬಗ್ಗೆ ಮನದಟ್ಟು ಮಾಡಿದ್ದರೆ ಅವರಿಂದ ಪ್ರತಿಭಟನೆ ಎದುರಾಗುತ್ತಿರಲಿಲ್ಲ. ಅವರಿಗೆ ಬೇಕಾದ ಮಾಹಿತಿ ನೀಡಿದೇ, ಪರಿಹಾರ ನೀಡದೇ ಇದ್ದುದರಿಂದ ಅವರು ಯೋಜನೆ ವಿರುದ್ಧ ಪ್ರತಿಭಟಿಸು ವಂತಾಯಿತು ಎಂದರು. ಇಲ್ಲಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತದೆ ಎಂದರು.
ಜಿಲ್ಲೆಯ ಜನರನ್ನು ಕಾಡುವ ಇನ್ನೊಂದು ಯೋಜನೆಯಾದ ಯುಪಿಸಿಎಲ್ ವಿಷಯದಲ್ಲೂ ಅದೇ ಆಗಿದೆ. ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದಿಂದ ಉತ್ಪಾದನೆಯಾಗುವ ಹಾರುಬೂದಿಯನ್ನು ಇಂದು ರಸ್ತೆ ನಿರ್ಮಾಣಕ್ಕೆ ಲ್ಯಾಂಡ್ ಫಿಲ್ ಆಗಿ ಬಳಸಲಾಗುತ್ತದೆ. ಹಾರುಬೂದಿಯನ್ನು ಹಾಕಿ ನಾಲ್ಕು ಸುತ್ತಲೂ ಗಟ್ಟಿಯಾದ ಕಾಂಕ್ರಿಟ್‌ನಿಂದ ಮುಚ್ಚಿದರೆ ಅಂಥ ಅಪಾಯವಿಲ್ಲ. ಆದರೆ ಈ ಬಗ್ಗೆಯೂ ಅಧಿಕಾರಿಗಳು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದರು.
ಆದರೆ ಉಡುಪಿಯಂಥ ಅತೀಸೂಕ್ಷ್ಮ ಪರಿಸರವನ್ನು ಹೊಂದಿರುವ ಪ್ರದೇಶದಲ್ಲಿ ಇಂಥ ಯೋಜನೆಗಳು ಯೋಗ್ಯವೇ ಎಂಬ ಬಗ್ಗೆ ಅಧಿಕಾರಿಗಳು ಯೋಚಿಸಬೇಕಿತ್ತು. ಇದು ಪ್ರವಾಸೋದ್ಯಮ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸಲು ಸೂಕ್ತವಾದ ಪ್ರದೇಶ. ಇಂಥ ಕಡೆಯಲ್ಲಿ ಪೆಟ್ರೋಲಿಯಂ ಹಾಗೂ ಕಲ್ಲಿದ್ದಲು ಆಧಾರಿತ ಯುಪಿಸಿಎಲ್‌ನಂಥ ಎರಡು ಯೋಜನೆಗಳನ್ನು ತಂದಿರು ವುದು ಅಪಾಯವನ್ನು ಆಹ್ವಾನಿಸಿಕೊಂಡಂತೆ. ಈ ಬಗ್ಗೆ ಜನ ಜಾಗೃತರಾಗಬೇಕು ಎಂದರು.
ಇಂದು ನಗರೀಕರಣ, ಜಾಗತೀಕರಣದಿಂದಾಗಿ ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂದು ಜನರಿಗೆ ಅರಿವಾಗುವ ಮೊದಲೇ ಬಹಳಷ್ಟು ಬದಲಾವಣೆಗಳಾಗಿ ಬಿಟ್ಟಿರುತ್ತದೆ. ಅಧಿಕಾರಿಗಳು ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಜನಜಾಗೃತರಾಗದಿದ್ದರೆ ವಿಶ್ವ ಉಳಿಯಲಾರದು. ನಮ್ಮ ಪರಿಸರ ನಾಶವನ್ನು ತಡೆಯದಿದ್ದರೆ ಭೂಮಿಯೇ ಅಪಾಯಕ್ಕೆ ಸಿಲುಕುತ್ತದೆ ಎಂದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ‘ದಿ ಹಿಂದು’ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಬಿ.ಎಸ್.ಸತೀಶ್ ಕುಮಾರ್, ಒಳ್ಳೆಯ ಪತ್ರಕರ್ತನಾಗಲು ಅಧ್ಯಯನಶೀಲನಾಗಬೇಕು. ಯಾವುದೇ ವಿಷಯದ ಕುರಿತು ಆಳವಾದ ಅಭ್ಯಾಸ ಆತನನ್ನು ಉತ್ತಮ ಪತ್ರಕರ್ತನನ್ನಾಗಿಸುತ್ತದೆ ಎಂದರು.
ಮಾಧ್ಯಮವನ್ನು ಧನಾತ್ಮಕವಾಗಿ, ಜನಹಿತಕ್ಕಾಗಿ ಅತ್ಯಂತ ಸಮರ್ಥವಾಗಿ ಬಳಸಿಕೊಂಡವರು ಮಹಾತ್ಮಗಾಂಧಿಯವರು. ಸ್ವಾತಂತ್ರ ಹೋರಾಟ ಸಂದರ್ಭದಲ್ಲಿ ಅವರು ಜನರನ್ನು ಒಟ್ಟುಗೂಡಿಸಲು ಪತ್ರಿಕಾ ಮಾಧ್ಯಮವನ್ನು ಬಳಸಿಕೊಂಡಿದ್ದರು. ಆದರೆ ಇಂದು ಅಂಥ ಜನಹಿತಗಳು ಈ ಕ್ಷೇತ್ರದಲ್ಲಿ ಕಂಡುಬರುತ್ತಿಲ್ಲ ಎಂದರು.
ಇಂದಿನ ಬ್ರೇಕಿಂಗ್ ನ್ಯೂಸ್‌ನ ಧಾವಂತದಲ್ಲಿ ನಾವು, ಅದರಲ್ಲೂ ವಿಶೇಷವಾಗಿ ದ್ರಶ್ಯಮಾಧ್ಯಮ ಹಲವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತೇವೆ. ಇದು ಖಂಡಿತ ಕ್ಷಮಾರ್ಹವಲ್ಲ ಎಂದು ಸತೀಶ್ ಕುಮಾರ್ ಹೇಳಿದರು.
‘ಪ್ರಜಾ ಟಿವಿ’ಯ ಹಿರಿಯ ವರದಿಗಾರ್ತಿ ಜ್ಯೋತಿ ಇರ್ವತ್ತೂರು ಅವರು ಟಿವಿ ಮಾಧ್ಯಮದ ಕುರಿತು ಮಾತನಾಡಿದರು.
ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಹಾಗೂ ಜಿಪಂ ಸಿಇಓ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News