ಮನೆಯಂಗಳದಲ್ಲಿ ನಿಲ್ಲಿಸಿದ್ದ ರಿಕ್ಷಾ ಕಳವು
Update: 2016-01-29 23:57 IST
ಪುತ್ತೂರು, ಜ.29: ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾವೊಂದನ್ನು ಕಳವು ನಡೆಸಿದ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಊರಮಾಲ್ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ರಿಕ್ಷಾವನ್ನು ಕಳವು ನಡೆಸಲು ವಿಫಲ ಯತ್ನವೂ ನಡೆದಿದೆ. ಊರಮಾಲ್ ನಿವಾಸಿ ಅಬ್ದುಲ್ಲಾ ಎಂಬವರು ತನ್ನ ರಿಕ್ಷಾವನ್ನು ರಾತ್ರಿ ತನ್ನ ಮನೆಯ ಸಮೀಪ ನಿಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ನೋಡುವಾಗ ರಿಕ್ಷಾ ನಾಪತ್ತೆಯಾಗಿತ್ತು. ಇದೇ ಸಂದರ್ಭದಲ್ಲಿ ಸ್ಥಳೀಯ ಜಿಡೆಕಲ್ಲು ನಿವಾಸಿ ಕಿರಣ್ ಎಂಬವರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಿಕ್ಷಾವೂ ನಾಪತ್ತೆಯಾಗಿತ್ತು. ಬಳಿಕ ಹುಡುಕಾಡಿದಾಗ ತುಸು ದೂರದಲ್ಲಿ ರಸ್ತೆ ಬದಿಯ ಕಮರಿಯಲ್ಲಿ ಅವರ ರಿಕ್ಷಾ ಪತ್ತೆಯಾಗಿತ್ತು. ಈ ರಿಕ್ಷಾದ ವಯರಿಂಗ್ ಸಾಮಗ್ರಿಗಳನ್ನು ತುಂಡರಿಸಿ ಕಳವಿಗೆ ಯತ್ನಿಸಿರುವುದು ಬೆಳಕಿಗೆ ಬಂದಿತ್ತು. ಅಬ್ದುಲ್ಲ ಅವರು ನೀಡಿದ ದೂರಿನಂತೆ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.