×
Ad

ಕಾರ್ಕಳ :ಹೆಲ್ಮೆಟ್ ಧರಿಸದ ಬೈಕ್ ಸವಾರರಿಂದ ದಂಡ ವಸೂಲಿ ಮಾಡುವುದೇ ಪೊಲೀಸರ ಉದ್ದೇಶವಲ್ಲ - ಅಣ್ಣಾಮಲೈ

Update: 2016-01-31 17:52 IST

ಕಾರ್ಕಳ ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಕಾನೂನು ಉಲ್ಲಂಘನೆಗಾಗಿ ಅವರಿಂದ ದಂಡ ವಸೂಲಿ ಮಾಡುವುದೇ ಪೊಲೀಸರ ಉದ್ದೇಶವಲ್ಲ ಅದಕ್ಕಿಂತಲೂ ಮಿಗಿಲಾಗಿ ಅಮೂಲ್ಯ ಜೀವದ ರಕ್ಷಣೆಯೇ ನಮ್ಮ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಸವಾರರೆಲ್ಲರೂ ಸ್ವಯಂಪ್ರೇರಿತರಾಗಿ ಹೆಲ್ಮೆಟ್ ಧರಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ಫೆ. 1ರಿಂದ ದ್ವಿಚಕ್ರವಾಹನದ ಹಿಂಬದಿ ಸವಾರರಿಗೂ ಕಡ್ಡಾಯ ಹೆಲ್ಮೆಟ್ ಜಾರಿ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದೇಶಾದ್ಯಂತ ನಿತ್ಯ ಸಾವಿರಾರು ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತಗಳಲ್ಲಿ ಬೈಕ್ ಸವಾರರು ತಲೆಗೆ ಗಾಯಗಳಾಗಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗಿದೆ. ಅದೇ ಕಾರಣವನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ಸಾರ್ವಜನಿಕರ ಹಿತಾದೃಷ್ಟಿಯಿಂದ ಹಲ್ಮೆಟ್ ಕಡ್ಡಾಯ ಕಾನೂನು ಹೊರಡಿಸಿದೆ. ಸವಾರರು ಯಾವ ವಿಧದ ಹೆಲ್ಮೆಟ್ ಧರಿಸಬೇಕೆನ್ನುವ ಕುರಿತು ಕಾನೂನಿನಲ್ಲಿ ಒಂದಷ್ಟು ಗೊಂದಲವಿರುವುದು ಸಹಜ, ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ಅಧಿಕೃತ ಐಎಸ್‌ಐ ಗುರುತು ಹೊಂದಿರುವ ಹಾಗೂ ಮುಖ ಮುಚ್ಚಿರುವ ಪೂರ್ಣ ಪ್ರಮಾಣದ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಆರಂಭಿಕ ಹಂತದಲ್ಲಿ ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು, ಕಾನೂನು ಉಲ್ಲಂಘಿಸಿದವರಿಗೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ಮಗನನ್ನು ಕಳೆದುಕೊಂಡ ಹೆತ್ತಮ್ಮನ ಅಳಲು: ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮೂನ್ ರಜಪೂತ್ ಎಂಬವರು ಜ.28ರಂದು ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಅವರ ತಾಯಿ ಜ.29ರಂದು ಕಾರ್ಕಳ ಠಾಣೆಗೆ ಬಂದಿದ್ದ ವೇಳೆ ಠಾಣೆಗೆ ಭೇಟಿ ನೀಡಿದ್ದ ಎಸ್ಪಿ ಅಣ್ಣಾಮಲೈ ಅವರನ್ನು ಕಂಡು ಗೋಳಾಡಿದರು. ಮೂನ್ ಸಿಂಗ್ ಹೆತ್ತವರ ಏಕೈಕ ಮಗನಾಗಿದ್ದು, ಆತ ಹೆಲ್ಮೆಟ್ ಧರಿಸಿದ್ದರೆ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಯಿರುತ್ತಿತ್ತು ಎಂದು ಅಣ್ಣಾಮಲೈ ಅಭಿಪ್ರಾಯಿಸಿದರು. ಜೀವ ಅತ್ಯಂತ ಅಮೂಲ್ಯ, ಹಣವನ್ನು ಸಂಪಾದಿಸಬಹುದು ಆದರೆ ಪ್ರಾಣ ಕಳೆದುಕೊಂಡರೆ ಮತ್ತೆ ಬರಲಾರದು, ಜತೆಗೆ ಕುಟುಂಬವರ್ಗವನ್ನು ಶೋಕ ಸಾಗರದಲ್ಲಿ ಮುಳುಗಿಸಬೇಡಿ ಎಂದು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರಿಗೆ ನನ್ನ ಸಲಹೆ ಎಂದು ಈ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News