ಮನಪಾದಿಂದ ನಿರುದ್ಯೋಗಿಗಳಿಗೆ ಕೌಶಲ ತರಬೇತಿ: ಪುರುಷೋತ್ತಮ ಚಿತ್ರಾಪುರ
ಬೈಕಂಪಾಡಿಯಲ್ಲಿ ಟೈಲರಿಂಗ್ ತರಬೇತಿ ಕೇಂದ್ರ ಉದ್ಘಾಟನೆ
ಮಂಗಳೂರು, ಫೆ.1: ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ 1,060 ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ತಿಳಿಸಿದ್ದಾರೆ.
ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿ ಸಹಕಾರದೊಂದಿಗೆ ಬೈಕಂಪಾಡಿ ಅಂಗರಗುಂಡಿಯಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ(ನಲ್ಮ್) ಕೌಶಲ ತರಬೇತಿ ಸಿವಿಂಗ್ ಮಿಷನ್ ಆಪರೇಟರ್ ಟೈಲರಿಂಗ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಲ್ಮ್ ಯೋಜನೆಯಡಿ ನಿರುದ್ಯೋಗಿಗಳಿಗೆ ವೃತ್ತಿ ತರಬೇತಿ ನೀಡಿ, ಅವರಲ್ಲಿ ಕೌಶಲತೆ ಹೆಚ್ಚಿಸಿ ಅವರನ್ನು ಸ್ವಂತ ಉದ್ದಿಮೆ ಘಟಕ ಸ್ಥಾಪಿಸಲು ಇಲ್ಲವೇ ಕುಶಲ ಉದ್ಯೋಗಿಗಳನ್ನಾಗಿ ಮಾಡುವುದು ಉದ್ದೇಶವಾದೆ. ವಿವಿಧ ರೀತಿಯ ಕೌಶಲ ತರಬೇತಿಗಳನ್ನು ಉಚಿತವಾಗಿ ನೀಡಿ, ಖಚಿತವಾದ ಉದ್ಯೋಗ ಅಥವಾ ಸಣ್ಣ ಉದ್ದಿಮೆ ಕೈಗೊಳ್ಳಲು ಆರ್ಥಿಕ ನೆರವು ನೀಡುವ ಉದ್ದೇಶವಿದೆ ಎಂದು ಉಪಮೇಯರ್ ತಿಳಿಸಿದರು.
ಮಹಾನಗರ ಪಾಲಿಕೆಯ ಶೇ.7.25ರ ನಿಧಿಯಲ್ಲಿ ಅರ್ಹ ಬಡವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಗ್ಯಾಸ್ ಸಂಪರ್ಕ, ನಳ್ಳಿ ನೀರು ಸಂಪರ್ಕ, ಶೌಚಾಲಯ ಹಾಗೂ ಬಡವರ ಶಸ್ತ್ರಚಿಕಿತ್ಸೆಗೆ ನೆರವು ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಇದಲ್ಲದೆ, ಕುಟೀರ ಭಾಗ್ಯ ಯೋಜನೆಯಡಿ ಮನೆ ರಿಪೇರಿಗೆ 20 ಸಾವಿರ ರೂ. ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ನಗರ ಪಾಲಿಕೆಯ ಪ್ರಸಕ್ತ ಆಡಳಿತವು ಅನೇಕ ಸಾಮಾಜಿಕ ಜವಾಬ್ದಾರಿಗಳ ಮೂಲಕ ನಗರಾಡಳಿತವನ್ನು ಜನತೆಯ ಮನೆಬಾಗಿಲಿಗೆ ಕೊಂಡೊಯ್ದಿದೆ ಎಂದು ಹೇಳಿದರು.
ಮಹಾನಗರಪಾಲಿಕೆ ಸಮುದಾಯ ಅಭಿವೃದ್ಧಿ ಅಧಿಕಾರಿ ಮಾಲಿನಿ ರೊಡ್ರಿಗಸ್ ಮಾತನಾಡಿ, ನಲ್ಮ್ ಯೋಜನೆಯಡಿ 18-35 ವಯಸ್ಸಿನ ನಿರುದ್ಯೋಗಿಗಳನ್ನು ವೃತ್ತಿಪರರನ್ನಾಗಿ ಮಾಡುವ ಉದ್ದೇಶವಿದೆ. ತರಬೇತಿ ಬಳಿಕ ಆಸಕ್ತರಿಗೆ ಸ್ವಂತ ಘಟಕ ಸ್ಥಾಪಿಸಲು ಬ್ಯಾಂಕ್ ಮೂಲಕ ಸಬ್ಸಿಡಿ ಸಾಲವನ್ನು ನೀಡಲಾಗುವುದು. ಕಂಪ್ಯೂಟರ್, 4 ಚಕ್ರ ವಾಹನದ ಅಟೊಮೊಬೈಲ್ ಸೇರಿದಂತೆ ವಿವಿಧ ವೃತ್ತಿ ತರಬೇತಿಗಳು ಈ ಯೋಜನೆಯಲ್ಲಿವೆ. ತರಬೇತಿಯ ನಂತರ ಜೀವನಮಟ್ಟ ಸುಧಾರಿಸುವುದೇ ಯೋಜನೆಯ ಮುಖ್ಯ ಉದ್ದೇಶ ಎಂದರು.
ಬೈಕಂಪಾಡಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಖಾದರ್ ಶಾ, ಉದ್ಯಮಿ ಅಸ್ಗರ್ ಆಲಿ, ಸ್ಥಳೀಯ ಮುಖಂಡರಾದ ಬಿ.ಕೆ. ಇದ್ದಿನಬ್ಬ, ಬಿ.ಎ. ಜಬ್ಬಾರ್, ನ್ಯಾಯವಾದಿ ಮುಖ್ತಾರ್ ಅಹ್ಮದ್, ತರಬೇತಿ ವಿಭಾಗದ ಸುನಂದಾ, ಗೀತಾ, ರಝಿಯಾ, ಕಾರ್ಯಕ್ರಮ ಯೋಜನೆಯ ಸ್ಥಳೀಯ ಸಮನ್ವಯಕಾರ ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.
ತರಬೇತಿ ಕೇಂದ್ರ: ಮಂಗಳೂರು ಮಹಾನಗರಪಾಲಿಕೆ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ(ನಲ್ಮ್) ಕೌಶಲ್ಯ ತರಬೇತಿ ಸಿವೀಂಗ್ ಮಿಷನ್ ಆಪರೇಟರ್ ಟೈಲರಿಂಗ್ ತರಬೇತಿ ಕೇಂದ್ರವನ್ನು ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿ ಸಹಕಾರದೊಂದಿಗೆ ಅಂಗರಗುಂಡಿ ಮಿಸ್ಬಾಹುಲ್ ಉಲೂಂ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ. ನಲ್ಮ್ ಯೋಜನೆಯಡಿ 8 ಟೈಲರಿಂಗ್ ಯಂತ್ರ ಹಾಗೂ ಇತರ ಪರಿಕರ, ಇಬ್ಬರು ವೃತ್ತಿ ಶಿಕ್ಷಕರನ್ನು ಒದಗಿಸಲಾಗಿದ್ದು, ಮಸೀದಿ ವತಿಯಿಂದ 7 ಯಂತ್ರಗಳನ್ನು ನೀಡಲಾಗಿದೆ. 50 ಮಂದಿ ಮಹಿಳೆಯರಿಗೆ ಪ್ರತಿ ದಿನ 3 ಬ್ಯಾಚುಗಳಲ್ಲಿ ತರಬೇತಿ ನೀಡಲಾಗುತ್ತಿದೆ.