ಕಲ್ಲಡ್ಕ: ಪೊಲೀಸರಿಂದ ದೌರ್ಜನ್ಯ ಪ್ರಕರಣ ಸಂತ್ರಸ್ತರಿಂದ ಗೃಹ ಸಚಿವ, ಮಾನವ ಹಕ್ಕು ಆಯೋಗಕ್ಕೆ ದೂರು
ಕಲ್ಲಡ್ಕ, ಫೆ. 4: ಮಂಗಳವಾರ ನಡೆದ ಗುಂಪು ಘರ್ಷಣೆಯ ಬಳಿಕ ಪೊಲೀಸರು ತನ್ನ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಲ್ಲಡ್ಕ ನಿವಾಸಿ ಖಾದ್ರಿ ಬ್ಯಾರಿ ಎಂಬವರು ರಾಜ್ಯ ಗೃಹ ಸಚಿವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಗುರುವಾರ ದೂರು ನೀಡಿದ್ದಾರೆ.
ತನ್ನ ಮಗ ಅಶ್ರಫ್ ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿರುವ ಪೊಲೀಸರು, ಆತನಿಗೆ ಸೇರಿರುವಕಲ್ಲಡ್ಕಟಿಕ್ಕಾ ಪಾಯಿಂಟ್ ಹೊಟೇಲ್ಗೆ ಬೀಗ ಜಡಿದಿದ್ದಾರೆ. ಅಶ್ರಫ್ನನ್ನು ಬಂಧಿಸುವ ನೆಪದಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗುತ್ತಿರುವ ಬಂಟ್ವಾಳ ನಗರಠಾಣೆ ಎಸ್ಸೈ ನಂದಕುಮಾರ್ ಹಾಗೂ ಅವರ ಸಿಬ್ಬಂದಿ ಕೆಟ್ಟ ಪದಗಳಿಂದ ನಿಂದಿಸಿ ತನ್ನನ್ನೂ, ತನ್ನ ಇತರ ಮಕ್ಕಳನ್ನೂ ಹಾಗೂ ಸೊಸೆಯಂದಿರನ್ನು ಬೆದರಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದು, ಪೊಲೀಸರ ವರ್ತನೆಯಿಂದ ಮನೆ ಮಂದಿ ಭಯಭೀತಗೊಂಡಿದ್ದಾರೆ ಎಂದು ಖಾದ್ರಿ ಬ್ಯಾರಿ ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ರಾತ್ರಿ ಸಮಯದಲ್ಲಿ ಮನೆ ಬಾಗಿಲು ಬಡಿಯುವುದು, ಮಹಿಳಾ ಸಿಬ್ಬಂದಿ ಇಲ್ಲದೆ ಮನೆಯೊಳಗೆ ನುಗ್ಗಿ ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿರುವುದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಿರುವ ಅವರು, ಪೊಲೀಸರಿಂದ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.