×
Ad

ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ

Update: 2016-02-05 00:07 IST

ಮಂಗಳೂರು, ಫೆ.4: ಖಾಸಗಿ ಕ್ಷೇತ್ರದಲ್ಲಿ ಒಬಿಸಿ, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಬಹುಜನ ವಿದ್ಯಾರ್ಥಿ ಸಂಘ-ಕರ್ನಾಟಕದ ವತಿಯಿಂದ ಬುಧವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿರುವುದನ್ನು ಖಂಡಿಸಿ ಗುರುವಾರ ಸಂಘದ ದ.ಕ. ಜಿಲ್ಲಾ ಘಟಕದಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಯಿತು.

ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಕಾರಣ ನೂರಾರು ಮಂದಿಗೆ ಗಾಯಗಳಾಗಿವೆ ಮತ್ತು ಹಲವು ಮಂದಿ ಅಸ್ವಸ್ಥರಾಗಿದ್ದಾರೆ. ಅಲ್ಲದೆ, 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಬಿವಿಎಸ್‌ನ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ರಾಜ್ಯ ಸರಕಾರ ನಡೆಸಿದ ಈ ದಾಳಿಯನ್ನು ಖಂಡಿಸುವುದಾಗಿ ಪ್ರತಿಭಟನಕಾರರು ಹೇಳಿದರು. ಸರಕಾರಿ ವಲಯದಲ್ಲಿ ಉದ್ಯೋಗ ಸೃಷ್ಟಿ ಅವಕಾಶ ಕಡಿಮೆಯಾಗಿದೆ. ಆದರೆ ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ.

ಖಾಸಗಿ ವಲಯದಲ್ಲಿ ಜಾತಿವಾದಿ ಮನಸ್ಸುಗಳು ಉನ್ನತ ಸ್ಥಾನದಲ್ಲಿರುವುದರಿಂದ ವಿದ್ಯಾವಂತ ಎಸ್ಸಿ-ಎಸ್ಟಿ, ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿ ಉದ್ಯೋಗ ಪಡೆಯುವುದು ಹರಸಾಹಸವಾಗಿದೆ. ಹೀಗಾಗಿ ವಿದ್ಯಾವಂತ ಎಸ್ಸಿ-ಎಸ್ಟಿ, ಒಬಿಸಿ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಇದರಿಂದಾಗಿ ಈ ಸಮುದಾಯಗಳ ಯುವಕರ ಬದುಕು ಆತಂಕಮಯವಾಗಿದೆ. ಹೀಗಾಗಿ ತಕ್ಷಣವೇ ಖಾಸಗಿ ವಲಯದಲ್ಲಿ ಎಸ್ಸಿ-ಎಸ್ಟಿ, ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಮೇಲ್ಜಾತಿಯ ಬಡವರಿಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಸೂಕ್ತ ಕಾನೂನು ರೂಪಿಸಬೇಕು ಎಂದು ಬಿವಿಎಸ್ ಜಿಲ್ಲಾ ಘಟಕ ಆಗ್ರಹಿಸಿದೆ. ಅಹಿಂದ ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು, ಬಳಕೆದಾರರ ವೇದಿಕೆಯ ಜಿಲ್ಲಾಧ್ಯಕ್ಷ ಯು. ಪದ್ಮನಾಭ ಶೆಟ್ಟಿ, ಸಮಾಜ ಪರಿವರ್ತನಾ ವೇದಿಕೆಯ ಮುಖಂಡರಾದ ಪಿ. ಡೀಕಯ್ಯ, ಅಚ್ಯುತ್ ಎಸ್. ಭಾಗವಹಿಸಿ ಬಿವಿಎಸ್ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ಬಿವಿಎಸ್ ಜಿಲ್ಲಾ ಮುಖಂಡರಾದ ಸುರೇಶ್ ಪಿ.ಬಿ., ಉದಯ್ ಗೋಳಿಯಂಗಡಿ, ಆದರ್ಶ್, ಚೆನ್ನಪ್ಪ, ರಘು ಧರ್ಮಸೇನ್, ಸೌಮ್ಯಾ, ಮಂಗಳೂರು ಘಟಕದ ಅರುಣ್ ಕುಮಾರ್, ಪುತ್ತೂರಿನ ಕೃಷ್ಣಪ್ಪ ಬಂಬಿಲ, ಸಿಎಫ್‌ಐ ಜಿಲ್ಲಾ ಕಾರ್ಯದರ್ಶಿ ನಿಝಾಮುದ್ದೀನ್, ಸಾಮಾಜಿಕ ಮುಖಂಡ ದಮ್ಮಾನಂದ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News