ವಿಟ್ಲ : ಕಾಲೇಜು ವಿದ್ಯಾರ್ಥಿಗೆ ಹೋಂಗಾರ್ಡ್ ಓರ್ವ ಕ್ಯಾಂಪಸ್ ಪ್ರವೇಶಿಸಿ ಹಲ್ಲೆ
ವಿಟ್ಲ : ಕಾಲೇಜು ವಿದ್ಯಾರ್ಥಿಗೆ ಹೋಂಗಾರ್ಡ್ ಓರ್ವ ಕ್ಯಾಂಪಸ್ ಪ್ರವೇಶಿಸಿ ಹಲ್ಲೆ ನಡೆಸಿದ ಘಟನೆ ಠಾಣಾ ಬಿ.ಮೂಡ ಗ್ರಾಮದ ಮೊಡಂಕಾಪು ಕಾರ್ಮೆಲ್ ಕಾಲೇಜಿನಲ್ಲಿ ಸೋಮವಾರ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಇಬ್ರಾಹಿಂ ಪಿ ಎಂ ಎಂಬವರ ಪುತ್ರ, ಮೊಡಂಕಾಪು ಕಾರ್ಮೆಲ್ ಕಾಲೇಜಿನ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಮುಹಮ್ಮದ್ ಅನೀಶ್ (19) ಎಂದು ಹೆಸರಿಸಲಾಗಿದೆ. ಆರೋಪಿಯನ್ನು ಅಮ್ಟಾಡಿ ನಿವಾಸಿ, ಮಂಗಳೂರು ತಾಲೂಕಿನ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಹೋಂಗಾರ್ಡ್ ವೃತ್ತಿಯಲ್ಲಿರುವ ಕಿಶೋರ್ ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ 12.30 ರ ಸುಮಾರಿಗೆ ಅನೀಶ್ ತನ್ನದೇ ತರಗತಿಯ ಸಹಪಾಠಿ ವಾಜಿದ್ ಶೇಖ್ ಹಾಗೂ ಸ್ನೇಹಿತ ದ್ವಿತೀಯ ಬಿಕಾಂ ವಿದ್ಯಾರ್ಥಿ ಇರ್ಫಾನ್ ಎಂಬವರೊಂದಿಗೆ ಸೇರಿಕೊಂಡು ತರಗತಿ ಮುಗಿಸಿ ಊಟಕ್ಕೆ ತೆರಳುತ್ತಿದ್ದ ವೇಳೆ ಆರೋಪಿ ಕಿಶೋರ್ ತನ್ನ ದ್ವಿಚಕ್ರ ವಾಹನದಲ್ಲಿ ಏಕಾಏಕಿ ಕಾಲೇಜು ಕ್ಯಾಂಪಸ್ ಪ್ರವೇಶಿಸಿ ಅನೀಶ್ನನ್ನು ಹತ್ತಿರ ಕರೆದು ನೀನು ಬಾರೀ ಶೋ ನಡೆಸುತ್ತೀಯಾ, ಬೈಕ್ ವ್ಹೀಲಿಂಗ್ ನಡೆಸುತ್ತೀಯಾ ಎಂದು ಪ್ರಶ್ನಿಸಿದ್ದಲ್ಲದೆ ವಿದ್ಯಾರ್ಥಿಯ ಎದೆ ಹಾಗೂ ಕೆನ್ನೆಗೆ ಕೈಯಿಂದ ಗಂಭೀರ ಹಲ್ಲೆ ನಡೆಸಿದ್ದಲ್ಲದೆ ಕಾಲಿನಿಂದ ಒದೆ ನೀಡಿರುತ್ತಾನೆ. ಬಳಿಕ ನಾನು ಪಾಂಡೇಶ್ವರ ಠಾಣೆಯ ಪೊಲೀಸ್ ಸಿಬ್ಬಂದಿ ನೇರವಾಗಿ ಪ್ರಾಂಶುಪಾಲರ ಕೊಠಡಿಗೆ ಬಂದು ಮಾತನಾಡು ಎಂದು ಅನೀಶ್ನ ಬೈಕ್ನ ಕೀಯನ್ನು ಕಿತ್ತುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ತೀವ್ರ ಗಾಯಗೊಂಡ ವಿದ್ಯಾರ್ಥಿ ಅನೀಶ್ನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವಿವರ ತಿಳಿಯುತ್ತಲೇ ತಕ್ಷಣ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ಠಾಣಾಧಿಕಾರಿ ನಂದಕುಮಾರ್ ನೇತೃತ್ವದ ಪೊಲೀಸರು ಆರೋಪಿ ಕಿಶೋರ್ನನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ. ವಿದ್ಯಾರ್ಥಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಾಂಶುಪಾಲರ ನಿರ್ಲಕ್ಷ್ಯ : ಆರೋಪ ಕಾಲೇಜು ಕ್ಯಾಂಪಸ್ನೊಳಗೆ ನುಗ್ಗಿ ವಿನಾ ಕಾರಣ ಏಕಾಏಕಿ ಹಲ್ಲೆ ನಡೆಸಿದ ಆರೋಪಿಯ ಬಗ್ಗೆ ಯಾವುದೇ ಮಾಹಿತಿ ಕಲೆ ಹಾಕುವ ಗೋಜಿಗೆ ಹೋಗದ ಕಾಲೇಜು ಪ್ರಾಂಶುಪಾಲರು ಆತ ಪೊಲೀಸ್ ಎಂದಾಕ್ಷಣ ಛೇಂಬರ್ಗೆ ಕರೆಸಿ ರಾಜಾತಿಥ್ಯ ನೀಡಿ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳದಲ್ಲಿದ್ದ ವಿದ್ಯಾರ್ಥಿ ಸಮೂಹ ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಆರೋಪಿ ಕಿಶೋರ್ ನಿರ್ದಿಷ್ಟ ವಿದ್ಯಾರ್ಥಿಗಳನ್ನು ಗುರುತಿಸಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ನಿಲ್ಲಿಸಿ ಕೀಯನ್ನು ಕಿತ್ತುಕೊಂಡು ಟ್ರಾಫಿಕ್ ಠಾಣೆಗೆ ಹಸ್ತಾಂತರಿಸಿ ದರ್ಪ ಮೆರೆದಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.