ಯುಡಿ.ಎಫ್11 ಡಾ.ಬಿಳಿಮಲೆ, ಗುರುವ- ಡಾ.ಪುರುಷೋತ್ತಮ ಬಿಳಿಮಲೆ, ಗುರುವರಿಗೆ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ
ಉಡುಪಿ, ಫೆ.11: 2016ನೆ ಸಾಲಿನ ‘ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ’ಗಳಿಗೆ ಖ್ಯಾತ ಜಾನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಡೋಲು ಕಲಾವಿದರಾದ ಗುರುವ ಆಯ್ಕೆಯಾಗಿದ್ದಾರೆ. ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಡಾ.ಬಿಳಿಮಲೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಗುರುವ ಅವರಿಗೆ ನೀಡಲಾಗುವುದು. ಡಾ. ಬಿಳಿಮಲೆ ಹೊಸದಿಲ್ಲಿಯ ಜವಾಹರಲಾಲ್ ವಿವಿಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದಾರೆ. ಅವರ ಕರಾವಳಿ ಜಾನಪದ ಕೃತಿಯು ಜಾನಪದದ ಕುರಿತಾಗಿ ಹಲವು ಒಳನೋಟಗಳನ್ನು ನೀಡುವ ಮಹತ್ವದ ಕೃತಿಯಾಗಿದೆ. ಶಿಷ್ಟ-ಪರಿಶಿಷ್ಟ, ಮೆಕೆಂಜಿಯ ಕೈಫಿಯತ್ತುಗಳು, ಕೂಡುಕಟ್ಟು, ಜನಸಂಸ್ಕೃತಿ, ಲಿಂಗರಾಜನ ಹುಕುಂನಾಮೆ ಮುಂತಾದವುಗಳು ಜಾನಪದ ಅಧ್ಯಯನಕ್ಕೆ ವಿಶಿಷ್ಟ ಕೃತಿಗಳಾಗಿವೆ. ಡಾ.ಬಿಳಿಮಲೆಯವರ 60ಕ್ಕೂ ಹೆಚ್ಚು ಲೇಖನಗಳು ದೇಶವಿದೇಶಗಳ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದಿಲ್ಲಿ ಕರ್ನಾಟಕ ಸಂಘದ ಚಟುವಟಿಕೆ ಮತ್ತು ದೇಶ ವಿದೇಶ ಪ್ರವಾಸಗಳಲ್ಲಿ ತುಳು ಜಾನಪದ ಸಂಸ್ಕೃತಿಯ ಪ್ರಸಾರಕ್ಕೆ ಇವರು ಕಾರಣರಾಗಿದ್ದಾರೆ. ತುಳು ಜಾನಪದಕ್ಕೆ ಅವರು ನೀಡಿದ ಕೊಡುಗೆಯನ್ನು ಗಮನಿಸಿ, ಈ ಪ್ರಶಸ್ತಿ ನೀಡಲಾಗುತ್ತಿದೆ. ಕೊರಗ ಸಮಾಜಕ್ಕೆ ಸೇರಿದ ಹಿರಿಯಡ್ಕದವರಾದ ಸುಮಾರು 100 ವರ್ಷ ದಾಟಿರುವ ಗುರುವ ಅವರು ಡೋಲು ಕಲಾವಿದರಾಗಿ ಪ್ರಸಿದ್ಧರಾದವರು. 12ನೆ ವಯಸ್ಸಿನಿಂದಲೂ ಡೋಲು ಬಾರಿಸುವುದು ಮತ್ತು ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡವರು. ಸಾಂಪ್ರದಾಯಿಕ ಡೋಲು ಬಾರಿಸುವಿಕೆಯಲ್ಲಿ ಅಪ್ರತಿಮ ಪ್ರತಿಭೆಯಾಗಿರುವ ಗುರುವ ಅವರು ಹಲವು ಕಡೆ ಸನ್ಮಾನಗಳನ್ನು ಪಡೆದಿದ್ದಾರೆ. ಡೋಲು ಕಲಾವಿದರಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಜಾನಪದ ಕಲಾವಿದ ಪ್ರಶಸ್ತಿಯನ್ನು ನೀಡಲಾಗುವುದು. ಡಾ. ವೈ.ಎನ್. ಶೆಟ್ಟಿ ಅವರ ಅಧ್ಯಕ್ಷತೆಯ ಡಾ. ಗಣನಾಥ ಎಕ್ಕಾರು, ಡಾ.ದುಗ್ಗಪ್ಪ ಕಜೆಕಾರ್, ಎಸ್.ಎ.ಕೃಷ್ಣಯ್ಯ ಅವರು ಸದಸ್ಯರಾಗಿರುವ ಪ್ರಶಸ್ತಿ ಆಯ್ಕೆ ಸಮಿತಿ ಈ ಆಯ್ಕೆ ನಡೆಸಿದೆ. ಪ್ರಶಸ್ತಿಯು 10,000 ರೂ., ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ. ಫೆ.27ರಂದು ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕೆಮ್ಮಲಜೆ ಜಾನಪದ ಪ್ರಕಾಶನದ ಪ್ರಕಟನೆ ತಿಳಿಸಿದೆ.