ರಾಘವೇಂದ್ರ ತೀರ್ಥರ ಪತ್ತೆಗಾಗಿ ಸಿಬಿಐ ಪೊಲೀಸರು ಪುತ್ತೂರಿಗೆ
Update: 2016-02-14 18:20 GMT
ಪುತ್ತೂರು, ಫೆ.14: ಗೌಡ ಸಾರಸ್ವತ ಬ್ರಾಹ್ಮಣರ ಆಧ್ಯಾತ್ಮಿಕ ಕೇಂದ್ರವಾಗಿರುವ ಕಾಶಿ ಮಠದ ಕಿರಿಯ ಸ್ವಾಮೀಜಿ ಆಗಿದ್ದ ಶಿವಾನಂದ ಪೈ ಯಾನೆ ರಾಘವೇಂದ್ರ ತೀರ್ಥರು ಮಠದ ಕುರಿತ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದು, ಅವರು ಪುತ್ತೂರಿನ ಆಶ್ರಮವೊಂದರಲ್ಲಿ ಇದ್ದಾರೆ ಎಂಬ ಮಾಹಿತಿಯ ಮೇರೆಗೆ ಆಂಧ್ರಪ್ರದೇಶದ ತಿರುಪತಿ ಪೊಲೀಸರು ಮತ್ತು ಸಿಬಿಐ ಪೊಲೀಸರು ಪುತ್ತೂರಿಗೆ ಆಗಮಿಸಿ ನಗರದ ಹೊರವಲಯದಲ್ಲಿರುವ ಆಶ್ರಮವೊಂದರಲ್ಲಿ ರವಿವಾರ ಶೋಧ ಕಾರ್ಯ ನಡೆಸಿದರು.
ಶನಿವಾರ ರಾತ್ರಿ ಪುತ್ತೂರಿಗೆ ಆಗಮಿಸಿದ ಪೊಲೀಸರ ತಂಡ ಇಲ್ಲಿನ ಲಾಡ್ಜ್ನಲ್ಲಿ ತಂಗಿದ್ದು, ಸ್ಥಳೀಯ ಜಿಎಸ್ಬಿ ಸಮುದಾಯದ ಮುಖಂಡರೊಂದಿಗೆ ಮಾಹಿತಿ ಪಡೆದುಕೊಂಡರು. ರವಿವಾರ ಪುತ್ತೂರು ನಗರದ ಹೊರವಲಯದ ಕೆಮ್ಮಾಯಿ ಎಂಬಲ್ಲಿರುವ ಸತ್ಯಶೋಧನಾ ಟ್ರಸ್ಟ್ಗೆ ತೆರಳಿ ತಪಾಸಣೆ ನಡೆಸಿದರು. ಅಲ್ಲದೆ, ಮುಂದೆ ರಾಘವೇಂದ್ರ ತೀರ್ಥರು ಇಲ್ಲಿಗೆ ಆಗಮಿಸಿದಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.